
ಮುದ್ದೇಬಿಹಾಳ(ಮಾ.31): ಬಸವ ಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರೀ ಪೈಪೋಟಿ ನಡುವೆ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿವೆ. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಪ್ರಚಾರ ಪ್ರಾರಂಭಿಸಿದೆ. ಆದರೇ ಪ್ರಚಾರದಲ್ಲಿ ದಲಿತ, ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ಮೂಲ ಅಸ್ಪೃಶ್ಯ ಜಾತಿಯ ರಾಜಕೀಯ ನಾಯಕರು ಕಾಣಿಸಿಕೊಂಡಿಲ್ಲ ಯಾಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವಂತಾಗಿದೆ. ತಕ್ಷಣ ಅವರನ್ನು ಪ್ರಚಾರಕ್ಕೆ ಕರೆಸಿಕೊಳ್ಳುವಂತೆ ಕಾಂಗ್ರೆಸ್ ಹಿರಿಯ ಮುಖಂಡ ವೈ.ಎಚ್. ವಿಜಯಕರ ಒತ್ತಾಯಿಸಿದ್ದಾರೆ.
ಮಂಗಳವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ವಿರೋಧಿ, ರೈತ ವಿರೋಧಿ ಕಾರ್ಮಿಕ ವಿರೋಧಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕಿತ್ತೆಸೆಯಲು ಮತದಾರರು ಈಗಾಗಲೇ ತೀರ್ಮಾನಿಸಿದ್ದಾರೆ. ಅಲ್ಲದೆ ಯಾವಾಗ ಚುನಾವಣೆ ಬಂದೀತು ಎಂಬುದನ್ನು ಜನರು ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಸಿಡಿ ಕೇಸಲ್ಲಿ ವಿಜಯೇಂದ್ರ-ಡಿಕೆಶಿ ಕೈವಾಡ: ಯತ್ನಾಳ್ ಮತ್ತೊಂದು ಆರೋಪ
ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯಾದ ಪ್ರಬಲ ಅಸ್ಪೃಶ್ಯ ದಲಿತ ಹಾಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಮೂಲ ಅಸ್ಪೃಶ್ಯ ಹಾಗೂ ಅಲ್ಪಸಂಖ್ಯಾತ ರಾಜಕೀಯ ಮುಖಂಡರು ಆಯಾ ಮತಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಡಾ. ಜಿ. ಪರಮೇಶ್ವರ, ಡಾ. ಎಸ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪೂರ, ಜಮೀರ ಹಮ್ಮದ ಸೇರಿದಂತೆ ಹಲವು ಜನರು ಭಾಗವಹಿಸದೇ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಕಾಂಗ್ರೆಸ್ ಹಿರಿಯ ಮುಖಂಡರು ಈ ಎಲ್ಲ ನ್ಯೂನ್ಯತೆಗಳನ್ನು ಅರ್ಥೈಸಿಕೊಂಡು ಪಕ್ಷದ ಹಿತದೃಷ್ಟಿಯಲ್ಲಿ ಗೆಲುವಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದಿದ್ದಾರೆ.