ಪ್ರವಾಸಿಗರನ್ನು ಹೂ ನೀಡಿ ಸ್ವಾಗತಿಸಿದ ಯದುವೀರ ಒಡೆಯರ್!

By Kannadaprabha NewsFirst Published Sep 28, 2021, 7:12 AM IST
Highlights
  • ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆ
  • ಮೈಸೂರು ಅರಮನೆ ವೀಕ್ಷಿಸಲು ಸೋಮವಾರ ಆಗಮಿಸಿದ್ದ ಪ್ರವಾಸಿಗರಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಹೂವು, ಸಿಹಿ ನೀಡಿ ಸ್ವಾಗತಿಸಿದರು

 ಮೈಸೂರು (ಸೆ.28):  ವಿಶ್ವ ಪ್ರವಾಸೋದ್ಯಮ ದಿನಾಚರಣೆ (world tourism Day) ಹಿನ್ನೆಲೆಯಲ್ಲಿ ಮೈಸೂರು ಅರಮನೆ ವೀಕ್ಷಿಸಲು ಸೋಮವಾರ ಆಗಮಿಸಿದ್ದ ಪ್ರವಾಸಿಗರಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಹೂವು, ಸಿಹಿ ನೀಡಿ ಸ್ವಾಗತಿಸಿದರು.

ಮೈಸೂರು  (Mysuru) ಟ್ರಾವೆಲ್‌ ಅಸೋಸಿಯೇಷನ್‌, ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್‌ ಮಾಲೀಕರ ಸಂಘವು ಸಂಯುಕ್ತವಾಗಿ ಅರಮನೆ ವರಾಹ ದ್ವಾರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅವರು ಪ್ರವಾಸಿಗರಿಗೆ ಹೂವು ನೀಡಿ ಪ್ರವಾಸೋದ್ಯಮ ದಿನಾಚರಣೆಯ ಶುಭಾಶಯ ಕೋರಿದರು.

ಮೈಸೂರು ಸದರಾ : ಅರಮನೆಗೆ ಬೆಳಕು - ಬಣ್ಣದ ಸಿಂಗಾರ ಆರಂಭ

ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer waidayr) ಮಾತನಾಡಿ, ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ವಿಧಿಸಿದ್ದರಿಂದ ಪ್ರವಾಸೋದ್ಯಮ ನಂಬಿದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಪ್ರವಾಸಿಗರು ಕೋವಿಡ್‌ ನಿಯಮ ಪಾಲಿಸಿ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಬೇಕು ಎಂದರು.

ಸಂಪ್ರದಾಯದಂತೆ ದಸರಾ ಕಾರ್ಯಕ್ರಮಗಳು ನಡೆಯಲಿವೆ. ಅರಮನೆ ದಸರೆಯಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ಭಾರತ್‌ ಬಂದ್‌ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ ಅವರು, ರೈತರ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.

ಮೈಸೂರು ಟ್ರಾವೆಲ್‌ ಅಸೋಸಿಯೇಷನ್‌ ಗೌರವ ಅಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಮಾತನಾಡಿ, ದಸರಾ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸದೇ ಬನ್ನಿಮಂಟಪದವರೆಗೂ ಸರ್ಕಾರ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಅರಮನೆ ಆನೆಗಳನ್ನು ಗುಜರಾತ್‌ಗೆ ಕಳುಹಿಸುತ್ತಿರುವುದು ಖಂಡನಿಯ. ಸರ್ಕಾರವೇ ಆನೆಗಳ ನಿರ್ವಹಣೆ ಹೊರೆ ಹೊರಬೇಕು. ಇಲ್ಲವಾದಲ್ಲಿ ನಮಗೆ ವಹಿಸಿ ಹಣ ಸಂಗ್ರಹ ಮಾಡಿದರೂ ಆನೆಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಮಣ್ಯ, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಬಿ. ರಾಘವೇಂದ್ರ, ಮೈಸೂರು ಟ್ರಾವಲ್‌ ಅಸೋಸಿಯೇಷನ್‌ ಅಧ್ಯಕ್ಷ ಜಯಕುಮಾರ್‌, ಎ.ಎನ್‌. ಅಯ್ಯಣ್ಣ, ಅಶೋಕ ಮೊದಲಾದವರು ಇದ್ದರು.

click me!