'ಮಾಸ್ಕ್ ಹಾಕ್ಕೊಂಬಿಟ್ರೆ ಕೊರೋನಾ ಬರೋದಿಲ್ಲ ಅಂತ ಭಾವಿಸ್ಬೇಡಿ'

By Kannadaprabha NewsFirst Published Mar 20, 2020, 3:32 PM IST
Highlights

ಕೆಮ್ಮು, ನೆಗಡಿ ಬಂದೋರಿಗೆಲ್ಲ ಕೊರೋನಾ ಬಂತು ಅಂತ ಗಾಬರಿಯಾಗಬೇಕಿಲ್ಲ| ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ: ಡಾ. ಅನಿಲ್ ಕುಮಾರ್| ಕೊರೋನಾ ಕುರಿತು ಮಾಧ್ಯಮ ಕಾರ್ಯಾಗಾರ| ಕೊರೋನಾಗೆ ಔಷಧಿಯಿಲ್ಲ , ಸ್ವಚ್ಛತೆಯೇ ಮದ್ದು| 

ಯಾದಗಿರಿ(ಮಾ.20): ನಿಜ, ಜಾಗತಿಕ ಮಟ್ಟದಲ್ಲೀಗ ತೀವ್ರ ಸಾವು ನೋವುಗಳು ಹಾಗೂ ಆತಂಕ ಸೃಷ್ಟಿಸಿದ ಕೊರೋನಾ ವೈರಸ್ ಡಿಸೀಜ್-19 (ಕೋವಿಡ್-19) ಗೆಂದೇ ಈವರೆಗೆ ಯಾವುದೇ ಔಷಧಿ ಕಂಡು ಹಿಡಿದಿಲ್ಲವಾದರೂ, ಸ್ವಚ್ಛತೆಯೇ ಇದಕ್ಕೆ ಮೊದಲ ಮದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆಯ, ಕಲಬುರಗಿಯ ಸಮೀಕ್ಷಣಾಧಿಕಾರಿ ಡಾ. ಅನಿಲ್ ತಾಳಿಕೋಟಿ ಹೇಳಿದ್ದಾರೆ. 

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಕೊರೋನಾ ವೈರಸ್ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಾದ್ಯಂತ ಸಂಚಲನಕ್ಕೆ ಕಾರಣವಾದ ಈ ರೋಗಕ್ಕೆ ಮುಂಜಾಗ್ರತೆ ವಹಿಸುವುದು ಹಾಗೂ ಯಾವುದೇ ಆತಂಕ ಪಡದಿರುವುದೇ ಸೂಕ್ತ ಮದ್ದು ಎಂದರು. 

"

ಕೆಮ್ಮು, ನೆಗಡಿ ಬಂದೋರಿಗೆಲ್ಲ ಕೊರೋನಾ ಇರೋಲ್ಲ: 

ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವವರೆಲ್ಲರೂ ಕೊರೋನಾ ವೈರಸ್ ಶಂಕಿತ ಅಥವಾ ವೈರಸ್ ತಗುಲಿದ ರೋಗಿಗಳಲ್ಲ. ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ರೋಗ ಹರಡುವುದಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು. 

ಮಾಸ್ಕ್ ಹಾಕ್ಕೊಂಬಿಟ್ರೆ ಕೊರೋನಾ ಬರೋಲ್ಲ ಅಂತ ಭಾವಿಸ್ಬೇಡಿ: 

ಪ್ರತಿಯೊಬ್ಬರೂ ಮಾಸ್ಕ್ ಬಳಸುವ ಅಗತ್ಯವಿಲ್ಲ. ಒಂದು ಮಾಸ್ಕ್ ಕೇವಲ 8 ಗಂಟೆ ಉಪಯೋಗಿಸಬಹುದು. ಮಾಸ್ಕ್ ರೋಗ ಹರಡುವುದನ್ನು ತಡೆಗಟ್ಟುತ್ತದೆ ಎನ್ನುವುದು ಸುಳ್ಳು. ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ, ಅವರ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಹಸ್ತಲಾಘವ ಅಥವಾ ಮುಟ್ಟಿದಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳುವುದರಿಂದ ಕೊರೋನಾ ಹರಡುತ್ತದೆ ಎಂದು ತಿಳಿಸಿದ್ದಾರೆ. 

ಕೊರೋನಾ ಜಾಗೃತಿ : ಮಾಸ್ಕ್ ಧರಿಸಿ ಮದುವೆಯಾದ ಜೋಡಿ

ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವ ಎಲ್ಲರಿಗೂ ಕೊರೋನಾ ಟೆಸ್ಟ್ ಮಾಡುವುದಿಲ್ಲ. ಸರ್ಕಾರದ ನಿರ್ದೇಶನದನ್ವಯ ಶಿಷ್ಟಾಚಾರ ಪ್ರಕಾರ ಪರೀಕ್ಷೆ ನಡೆಸಲಾಗುವುದು. ಮುಖ್ಯವಾಗಿ ವಿದೇಶದಿಂದ ಬಂದವರನ್ನು 14 ದಿನಗಳವರೆಗೆ ಹೋಮ್ ಐಸೊಲೇಷನ್‌ನಲ್ಲಿಟ್ಟು ನಿಗಾ ವಹಿಸಲಾಗುವುದು. 

ಈ ಸಂದರ್ಭದಲ್ಲಿ ಅವರಲ್ಲಿ ರೋಗಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಕೊರೋನಾ ಟೆಸ್ಟ್‌ಗೆ ಕಳುಹಿಸಲಾಗುವುದು. ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ಶರೀರದಲ್ಲಿ ವೈರಸ್ ಸೇರಿದಾಗ ರೋಗಲಕ್ಷಣ ಕಂಡುಬರಲು 2 ರಿಂದ 14 ದಿನ ಬೇಕು ಎಂದು ಮಾಹಿತಿ ನೀಡಿದರು. 

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿರುವುದಿಲ್ಲ. ಕೊರೋನಾ ವೈರಸ್ ಹೊರಗಡೆ 12ರಿಂದ 48 ಗಂಟೆ ಬದುಕುತ್ತದೆ. ಮಾತನಾಡುವಾಗ, ಕೆಮ್ಮುವಾಗ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸೋಪು ಮತ್ತು ನೀರಿನಿಂದ ಕೈ ತೊಳೆದುಕೊಳ್ಳಬೇಕು. ವಿದೇಶದಿಂದ ಬಂದವರ ಬಗ್ಗೆ ಆತಂಕ ಪಡುವ ಬದಲು ಸಮೀಪದ ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲು ಸಲಹೆ ನೀಡಿದರು. 

27 ಡಿಗ್ರಿ ಸೆಲ್ಸಿಯಸ್ ಹಾಗೂ ಕೊರೋನಾ: 

27 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಕೊರೋನಾ ವೈರಸ್ ಬದುಕುವುದಿಲ್ಲ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಕಳೆದ ಜ. 7ರಂದು ನೊವೆಲ್ ಕೊರೋನಾ ವೈರಸ್ ಜನ್ಮ ತಾಳಿದ್ದು, ಅದರ ವರ್ತನೆ ಬಗ್ಗೆ ನಿಖರ ಮಾಹಿತಿ ಇಲ್ಲ. ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಜನರು ವದಂತಿಗಳಿಗೆ ಕಿವಿಗೊಡಬಾರದು. ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಸಭೆ, ಸಮಾರಂಭ, ಸಂತೆ, ಜಾತ್ರೆ ನಿಷೇಧ 

ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮಾಧ್ಯಮದವರು ಸಂಬಂಧಪಟ್ಟ ಅಧಿಕಾರಿಗಳಿಂದ ನಿಖರ ಮಾಹಿತಿ ಪಡೆದು ಸುದ್ದಿ ಪ್ರಸಾರ ಮಾಡುವಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು. 

"

ದೊಡ್ಡ ಸಭೆ-ಸಮಾರಂಭಗಳಲ್ಲಿ ಸಾರ್ವಜನಿಕರು ಭಾಗವಹಿಸದಂತೆ ಮನವಿ ಮಾಡಲಾಗಿದೆ. ಸಂತೆ ಮತ್ತು ಜಾತ್ರೆಯಲ್ಲಿ ಹೆಚ್ಚಿನ ಜನ ಸೇರುವು ದರಿಂದ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳಿವಳಿಕೆ ನೀಡಿ ಸಂತೆ, ಜಾತ್ರೆಗಳನ್ನು ನಿಷೇಧಿ ಸಲಾಗುತ್ತಿದೆ. ದಿನನಿತ್ಯದ ಸಣ್ಣಪುಟ್ಟ ವಹಿವಾಟುಗಳಿಗೆ ಯಾವುದೇ ತೊಂದರೆ ಇಲ್ಲ ಎಂದರು. 

ಕೊಡಗಿನಲ್ಲಿ ಅಂಗಡಿ ಓಪನ್, ಹೆಚ್ಚಿದ ಜನಸಂದಣಿ: ಕೊರೋನಾಗೆ ಡೋಂಟ್ ಕೇರ್

ಇದುವರೆಗೆ ವಿದೇಶದಿಂದ ಬಂದ 48 ಜನರಲ್ಲಿ ಸೋಂಕು ಇಲ್ಲ. ಮುಂಜಾಗ್ರತಾ ಕ್ರಮವಾಗಿ ಯಾದಗಿರಿ, ಶಹಾಪುರ ಹಾಗೂ ಸುರಪುರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಟ್ಟು 27 ಐಸೊಲೇಷನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಯಾದಗಿರಿ ನಗರದ ರೈಲ್ವೆ ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಹೊಸ ಬಸ್ ನಿಲ್ದಾಣ ಹಾಗೂ ಯರಗೋಳ, ಗುರುಮಠಕಲ್ ಸಮೀಪದ ಇಟಗಾಲ್ ಕ್ರಾಸ್, ಮುಡಬೂಳ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೇ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಡಂಗೂರ ಸಾರಲಾಗುತ್ತಿದೆ. 

ರೋಗಲಕ್ಷಣಗಳು ಕಂಡುಬಂದಲ್ಲಿ 24X7 ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473-253950 ಕರೆ ಮಾಡಲು ಮನವಿ ಮಾಡಿದರು. ದೀರ್ಘ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಗಂಟಲು ದ್ರವ್ಯ ಮಾದರಿಯನ್ನು ಜಿಲ್ಲೆಯಿಂದ ಕೊರೋನಾ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆದರೆ, ಇವರು ವಿದೇಶದಿಂದ ಬಂದವರಲ್ಲ. ಇವರಿಗೆ ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಸಾರ್ವಜನಿಕರಲ್ಲಿ ಕೊರೋನಾ ವೈರಸ್ ಕುರಿತಂತೆ ಸುಳ್ಳು ಸುದ್ದಿಗಳು ಅಥವಾ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಹೇಳಿದ್ದಾರೆ. 

"

click me!