ಕೊನೆ ಭಾಗದವರೆಗೂ ನೀರು ಹೋಗುವಂತೆ ಕಾಮಗಾರಿ : ಸಾ.ರಾ. ಮಹೇಶ್‌

By Kannadaprabha NewsFirst Published Feb 20, 2023, 5:26 AM IST
Highlights

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಲೆಗಳ ಕೊನೆಯ ಭಾಗದವರೆಗೂ ಸರಾಗವಾಗಿ ನೀರು ಹರಿದು ಹೋಗುವಂತೆ ಅಗತ್ಯ ಮತ್ತು ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

 ಕೆ.ಆರ್‌. ನಗರ : ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಲೆಗಳ ಕೊನೆಯ ಭಾಗದವರೆಗೂ ಸರಾಗವಾಗಿ ನೀರು ಹರಿದು ಹೋಗುವಂತೆ ಅಗತ್ಯ ಮತ್ತು ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದ ಹೊರ ವಲಯದ ಕಂಠೇನಹಳ್ಳಿ ಬಳಿ ಚಾಮರಾಜ ಬಲದಂಡ ನಾಲೆಯ 9ನೇ ಬ್ರಾಂಚಿನ ಆಕ್ವಿಡೇಟ್‌ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಕಳೆದ 4 ತಿಂಗಳ ಹಿಂದೆ ಬಿದ್ದ ಸತತ ಮಳೆಯ ಪರಿಣಾಮ ಆಕ್ವಿಡೇಟ್‌ ಕುಸಿದು ಬಿದ್ದಿದ್ದರಿಂದ ಆಗ ತಾತ್ಕಾಲಿಕವಾಗಿ ತುರ್ತು ಕಾಮಗಾರಿ ನಡೆಸಿ ಪೈಪ್‌ ಮೂಲಕ ರೈತರ ಜಮೀನಿಗೆ ನೀರು ಹರಿಸುವ ಕೆಲಸ ಮಾಡಲಾಗಿತ್ತು. ನಂತರ ಸರ್ಕಾರದ ಮೇಲೆ ಒತ್ತಡ ಹೇರಿ 2 ಕೋಟಿ ಮಂಜೂರು ಮಾಡಿಸಿ ಶಾಶ್ವತ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಎಲ್ಲಾ ನಾಲೆಗಳ ಮೇಲೆ ಸಂಚರಿಸಿ ಪರಿಶೀಲಿಸಿ ಕಾಮಗಾರಿ ಕೈಗೊಳ್ಳಬೇಕಾದ ಅಗತ್ಯವಿದ್ದಲೇ ಕೂಡಲೇ ಕ್ರಮಕೈಗೊಂಡು ಅನುದಾನಕ್ಕೆ ವರದಿ ನೀಡುವಂತೆ ಸೂಚಿಸಿದರು.

ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆ ಯಾಗುವುದ್ದಕ್ಕಿಂತ ಮೊದಲು ರೈತರು ತಮ್ಮ ಜಮೀನಿಗೆ ನೀರುಣಿಸಲು ಹಗಲು ರಾತ್ರಿ ಎನ್ನದೆ ಸಂಕಷ್ಟಪಡಬೇಕಿತ್ತು. ಆದರೆ ಈಗ ಎಲ್ಲಾ ನಾಲೆಗಳ ಆಧುನೀಕರಣವಾಗಿದ್ದು ಬೆಳೆಗಳಿಗೆ ಸಮೃದ್ಧ ಮತ್ತು ನಿರಂತರವಾಗಿ ನೀರು ಸರಬರಾಜಾಗುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದರು. ರೈತರು ಸಹ ಮಿತವಾಗಿ ನೀರನ್ನು ಬಳಕೆ ಮಾಡಿಕೊಂಡು ತಮ್ಮ ಅಗತ್ಯತೆ ಪೂರ್ಣಗೊಂಡ ನಂತರ ಮುಂದಿನ ಭಾಗದ ರೈತರಿಗೂ ಅನುಕೂಲವಾಗುವ ಹಾಗೆ ಸಹಕಾರ ನೀಡಬೇಕು. ಶಾಸಕರು ಭವಿಷ್ಯದ ಹಿತ ದೃಷ್ಟಿಯಿಂದ ನೀರಿನ ಸದ್ಬಳಕೆ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ನುಡಿದರು.

ಪುರಸಭೆ ಸದಸ್ಯ ಸಂತೋಷ್‌ಗೌಡ, ಮಾಜಿ ಸದಸ್ಯ ಸಿರಾಜ…, ಮುಖಂಡರಾದ ಕಂಠೇನಹಳ್ಳಿ ರಾಜಣ್ಣ, ನಾಗರಾಜು, ನಿಂಗಪ್ಪ, ದಾಸಟ್ಟಿಶ್ರೀನಿವಾಸ್‌, ಮೋಹನ ಕುಮಾರಿ, ಜಲ ಸಂಪನ್ಮೂಲ ಇಲಾಖೆಯ ಇಇ ಜಿ.ಜೆ. ಈರಣ್ಣ, ಎಇಇ ಬಿ.ಜೆ. ಗುರುರಾಜು ಮೊದಲಾದರು ಇದ್ದರು.

25 ಕೋಟಿ ಸಾಲ ಮಾಡಿದ್ದೇನೆ

 ಕೆ.ಆರ್‌. ನಗರ :  ಕಳೆದ 5 ವರ್ಷಗಳ ಅವಧಿಯಲ್ಲಿ ಜನಸೇವೆ ಮತ್ತು ರಾಜಕಾರಣ ಮಾಡಲು . 25 ಕೋಟಿ ಸಾಲ ಮಾಡಿದ್ದೇನೆ ಎಂದು ಭಾವುಕರಾಗಿ ನುಡಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈವರೆಗೆ ನಾನು ಮತ್ತು ನನ್ನ ಪತ್ನಿ ಸಾಲಗಾರರಾಗಿದ್ದೆವು ಈಗ ಮಕ್ಕಳನ್ನು ಸಾಲಗಾರರ್ನನಾಗಿಸಿದ್ದೇವೆ ಎಂದರು.

ನಾನು ಶಾಸಕನಾಗಿ ಆಯ್ಕೆಯಾದ ನಂತರ ಯಾವುದೇ ಗುತ್ತಿಗೆದಾರ ಮತ್ತು ಅಧಿಕಾರಿಯಿಂದ ನಯಾಪೈಸೆ ಹಣ ಪಡೆದಿಲ್ಲ. ಈ ವಿಚಾರದಲ್ಲಿ ಜನರೆ ತಮ್ಮ ಅಭಿಪ್ರಾಯ ಹೇಳಲಿದ್ದಾರೆ ಎಂದು ತಿಳಿಸಿದರು. ನನ್ನ ವಿರುದ್ಧ ಇತರ ರಾಜಕಾರಣಿಗಳು ಮತ್ತು ವಿರೋಧ ಪಕ್ಷದವರು ಮಾತನಾಡಲು ವಿಚಾರಗಳಿಲ್ಲ. ಇದಕ್ಕೆ ಸಾಕ್ಷಿ ಕಳೆದ ಎರಡು ದಿನಗಳ ಹಿಂದೆ ಸಾಲಿಗ್ರಾಮಕ್ಕೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಯಾವುದೇ ಟೀಕೆ ಮಾಡದಿರುವುದು ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ

 ಕೆ.ಆರ್‌. ನಗರ  (ನ.20):  ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ನಾನೆಂದೂ ಜಾತಿ ಮತ್ತು ಪಕ್ಷ ರಾಜಕೀಯ ಮಾಡಿಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

ಪಟ್ಟಣದ ಮುಳ್ಳೂರು ರಸ್ತೆಯ (Road)  ಎಡಭಾಗದ ಪ್ರಮುಖ ರಸ್ತೆಗಳಿಗೆ ಸುಮಾರು 1.75 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಶಿಕ್ಷಣ, ರಸ್ತೆ, ವಿದ್ಯುತ್‌, ಮನೆ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲಾಗಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರಬೇಕಾಗಿದ್ದ ಅನುದಾನ ಸಮರ್ಪಕವಾಗಿ ಬಾರದ ಕಾರಣ ಆ ಸಂಧರ್ಭದಲ್ಲಿ ಅಭಿವೃದ್ದಿ ಕಾರ್ಯಗಳು ಸ್ವಲ್ಪ ಕುಂಠಿತವಾಗುವಂತಾಯಿತು ಆದರೆ ನಂತರದಲ್ಲಿ ಸರ್ಲಾರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಿ ಹಂತ ಹಂತವಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

click me!