ಕೊಪ್ಪಳದಲ್ಲಿ ನೀರಿನ ಸಮಸ್ಯೆಯಿಂದ ಬೇಸತ್ತ ಮಹಿಳೆಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮನೆಗೆ ನೀರು ಬರುತ್ತಿಲ್ಲವೆಂದರೆ ನಮ್ಮೂರ ರಸ್ತೆಗೆ ಬಸ್ಸು, ಲಾರಿಯೂ ಬರಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಕೊಪ್ಪಳ (ಮಾ.13): ಸಾಮಾನ್ಯವಾಗಿ ಮಹಿಳೆಯರು ಸುಖಾ ಸುಮ್ಮನೆ ಬೀದಿಗೆ ಬಂದು ಹೋರಾಟ ಮಾಡುವುದಿಲ್ಲ. ಆದರೆ, ಒಮ್ಮೆ ಬೀದಿಗಿಳಿದು ಹೋರಾಟಕ್ಕಿಳಿದರೆ ಜಪ್ಪಯ್ಯಾ ಅಂದರೂ ಜಗ್ಗೋದಿಲ್ಲ. ಕಲ್ಯಾಣ ಕರ್ನಾಟಕದ ಮಹಿಲೆಯರು ನಮ್ಮ ಮನೆಗೆ ನೀರು ಬರುತ್ತಿಲ್ಲವೆಂದು, ಮನೆ ಮುಂದಿನ ರಸ್ತೆಯಲ್ಲಿಯೂ ಬಸ್ಸು ಲಾರಿ ಬರಬಾರದು ಎಂದು ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದ್ದಾರೆ.
ಈ ಘಟನೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ರೈಲ್ವೇ ಮೇಲ್ಸೆತುವೆ ರಸ್ತೆಯಲ್ಲಿ ನಡೆದಿದೆ. ಕೊಪ್ಪಳ ನಗರದಲ್ಲಿ ಕಳೆದೊಂದು ತಿಂಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಜನರು ನೀರಿಲ್ಲದೇ ಪರದಾಡುತ್ತಿದ್ದು, ಒಂದೊಂದು ದಿನವನ್ನು ಕಳೆಯುವುದೂ ದುಸ್ತರವಾಗಿದೆ. ಈ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಹಾಗೂ ಮಹಿಳಯರು ರಸ್ತೆಯನ್ನು ತಡೆದು ಪ್ರತಿಭಟನೆ ಆರಂಭಿಸಿದ್ದಾರೆ. ರೈಲ್ವೇ ಮೇಲ್ಸೆತುವೆಯ ರಸ್ತೆಯನ್ನು ಬಂದ್ ಮಾಡಿದ್ದಾರೆ. ಇದರಿಂದ ಬಸ್ಸು, ಲಾರಿ, ಬೈಕ್ಗಳು ಹೋಗಲಾಗದೇ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ, ಬೆಳಗಾವಿಯ ಕುಟುಂಬಕ್ಕೆ ಯುಪಿ ಸರ್ಕಾರದಿಂದ 1 ಕೋಟಿ ಜಮೆ!
ಕೊಪ್ಪಳದ ಕಾಳಿದಾಸ ನಗರದ ನಿವಾಸಿಗಳಿಂದ ರಸ್ತೆ ತಡೆದು ಪ್ರತಿಭಟನೆ ಆರಂಭಿಸಿದ್ದು, ನಗರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೀರಿನ ಅಸಮರ್ಪಕ ಪೂರೈಕೆ ಬಗ್ಗೆ ಅನೇಕ ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಆಕ್ರೋಶಗೊಂಡ ಕಾಳಿದಾಸ ನಿವಾಸಿಗಳಿಂದ ಪ್ರತಿಭಟನೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆಯಿಂದ ರಸ್ತೆಯಲ್ಲಿ ವಾಹನಗಳ ಸಂದಣಿ ಹೆಚ್ಚಾಗಿದ್ದು, ಪೊಲೀಸರು ಮನವೊಲಿಕೆಗೂ ಬಗ್ಗಲಿಲ್ಲ. ಕೊನೆಗೆ ನಗರಸಭೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮರ್ಪಕವಾಗಿ ನೀರಿನ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದು, ರಸ್ತೆಯನ್ನು ತೆರವು ಮಾಡಿದ್ದಾರೆ.