ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೋದ ಮಹಿಳೆ ಸಿಡಿಲಿಗೆ ಬಲಿ

By Sathish Kumar KHFirst Published May 29, 2023, 10:48 PM IST
Highlights

ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೊಲಕ್ಕೆ ಹೋಗಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ. ಇನ್ನು ರಾಜ್ಯದಲ್ಲಿ ಒಂದೇ ದಿನ ಸಿಡಿಲಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗ (ಮೇ 29): ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಕುರಿ ಮೇಯಿಸಲು ಹೊಲಕ್ಕೆ ಹೋಗಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ. ಇನ್ನು ರಾಜ್ಯದಲ್ಲಿ ಒಂದೇ ದಿನ ಸಿಡಿಲಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯಕ್ಕೆ ಮುಂಗಾರು ಮಳೆಯೇ ಕಾಲಿಟ್ಟಿಲ್ಲ. ಆದರೂ ರಾಜ್ಯಾದ್ಯಂತ ಮುಂಗಾರುಪೂರ್ವ ಮಳೆ ಅಬ್ಬರಿಸುತ್ತಿದೆ. ಬಿರುಗಾಳಿ ಸಹಿತ ಮಳೆಗೆ ಮರಗಳು ಧರೆಗುರುಳುತ್ತಿವೆ. ಮತ್ತೊಂದೆಡೆ ಸಿಡಿಲಿಗೆ ಮನುಷ್ಯರು, ದನ ಕರುಗಳು, ಕುರಿ- ಮೇಕೆಗಳು ಸಾವನ್ನಪ್ಪುತ್ತಿವೆ. ಇನ್ನು ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು ಸಿಡಿಲಿಗೆ ಸುಟ್ಟು ಕರಕಲಾಗುತ್ತಿವೆ. ಇಂದು ಸಂಜೆ ಸುರಿದ ಮಳೆಯ ವೇಳೆ ಹೊಲದಲ್ಲಿ ಕುರಿ ಮೇಯಿಸಲು ಹೋಗಿ ವಾಪಸ್‌ ಬರುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ. ಮೈಯೆಲ್ಲಾ ಸುಟ್ಟ ಗಾಯದಂತಾಗಿದ್ದು, ಕಣ್ಣು ಬಿಟ್ಟುಕೊಂಡೇ ಮೃತಳಾಗಿದ್ದಾಳೆ.

Karnataka Rain: ಹೊಲದಲ್ಲಿ ಉಳುಮೆ ಮಾಡುತ್ತಲೇ ಸಿಡಿಲಿಗೆ ಬಲಿಯಾದ ರೈತರು: ಈ ಸಾವು ನ್ಯಾಯವೇ.?

ಮೃತಳನ್ನು ಲಕ್ಷ್ಮೀಬಾಯಿ (28) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಬಳಿ ನಡೆದ ಘಟನೆ ನಡೆದಿದೆ. ವಿನೊಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ. ಗಾರೆ ಕೆಲಸ ಮಾಡುವ ಕುಮಾರ ನಾಯಕ ಎಂಬುವವರ ಪತ್ನಿ ಆಗಿದ್ದು, ಕುರಿಗಳನ್ನು ಮೇಯಿಸಲು ಹೋಗಾದ ಈ ದುರ್ಘಟನೆ ನಡೆದಿದೆ. ಇನ್ನು ಮಹಿಳೆಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. 

ಬಳ್ಳಾರಿಯಲ್ಲಿ ಉಳುಮೆ ಮಾಡುತ್ತಿದ್ದ ರೈತ ಸಾವು: ಬಳ್ಳಾರಿ ತಾಲೂಕಿನಲ್ಲಿಯೂ ಕೂಡ ಸಂಜೆ ಮಳೆಯ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾರೆ. ಬಳ್ಳಾರಿ ತಾಲೂಕಿನ ಕುಂಟನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ ರೈತನನ್ನು ಪಂಪಣ್ಣ (50) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಉಳುಮೆ ಮಾಡಲು ತೆರಳಿದ್ದನು. ಈ ವೇಳೆ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಎತ್ತುಗಳನ್ನು ಹೊಲದಲ್ಲಿ ಬಿಟ್ಟು ರೈತ ಪಂಪಣ್ಣ ಮರದ ಬಳಿ ಬಂದು ನಿಂತಿದ್ದರು. ಆದರೆ, ಸಿಡಿಲು ಮರದ ಬುಡಕ್ಕೆ ಹೊಡೆದಿದ್ದು, ಮರದಡಿ ನಿಂತಿದ್ದ ರೈತನೂ ಬರಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ವಿಜಯಪುರದ ಯುವ ರೈತ ಸಾವು:  ವಿಜಯಪುರ ತಾಲೂಕಿನ ಕಿರಶ್ಯಾಳ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಯುವ ರೈತನೊಬ್ಬ ಮೃತಪಟ್ಟರೆ ಇಬ್ಬರು ಮೂರ್ಛೆ ಹೋದ ಘಟನೆ ಜರುಗಿದೆ. ಕಿರಿಶ್ಯಾಳ ಗ್ರಾಮದ ದ್ಯಾಮಣ್ಣ ಸಿದ್ದಪ್ಪ ಸೀರೆಕಾರ (22) ಮೃತಪಟ್ಟವರು. ದ್ಯಾಮಣ್ಣ ಸೀರೆಕಾರ, ಬಸಪ್ಪ ಸೀರೆಕಾರ (25) ಹಾಗೂ ಬಸಪ್ಪ ಹೊನ್ನಪ್ಪ ವಗ್ಗರ (25) ಅವರು ಜಮೀನಿನಲ್ಲಿ ಸಂಗ್ರಹಿಸಿದ್ದ ಈರುಳ್ಳಿಗೆ ಹಾಳೆ ಹೊದಿಸುತ್ತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಿದ್ದಿದ್ದರಿಂದ ದ್ಯಾಮಣ್ಣ ಸ್ಥಳದಲ್ಲೇ ಮೃತಪಟ್ಟರೆ ಅವರ ಜತೆಗಿದ್ದ ಇಬ್ಬರು ಮೂರ್ಛೆಗೊಂಡಿದ್ದರು. 

Mysuru-Bengaluru Train: ರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ರೈಲಿನಲ್ಲೇ ನರಳಿ ಪ್ರಾಣಬಿಟ್ಟ ಪ್ರಯಾಣಿಕ!

ಮುಂದಿನ 5 ದಿನ ರಾಜ್ಯಾದ್ಯಂತ ಭಾರಿ ಮಳೆ:  ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮತ್ತೊಮ್ಮೆ ಮೂನ್ಸೂಚನೆ ನೀಡಿದೆ. ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮೇ 31ರಂದು, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾ ಪುರ, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರಿನಲ್ಲಿ ಹಾಗು ಜೂ 1 ರಂದು ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

click me!