ಹುಬ್ಬಳ್ಳಿ: ಮೋದಿ ಕಾರ್ಯಕ್ರಮದಲ್ಲಿ ನಾಡಗೀತೆ ವೇಳೆ ಕುಸಿದು ಬಿದ್ದ ಯುವತಿ

By Kannadaprabha NewsFirst Published Jan 13, 2023, 11:11 AM IST
Highlights

ನರೇಂದ್ರ ಮೋದಿ ವೇದಿಕೆಗೆ ಬರುವ ಮುನ್ನ ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿಯರು ಸೇರಿದಂತೆ ಬೇರೆ ಬೇರೆ ತಂಡಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ವೇಳೆ ‘ಶ್ರಾವಣ ಬಂತು ನಾಡಿಗೆ’ ಎಂಬ ಹಾಡಿಗೆ ಬೇರೆ ಬೇರೆ ರಾಜ್ಯಗಳಿಂದ ನೆರೆದಿದ್ದ ಹಾಗೂ ಕರ್ನಾಟಕದ ಯುವ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. 

ಹುಬ್ಬಳ್ಳಿ(ಜ.13):  ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನಾ ಸಮಾರಂಭದ ವೇಳೆ ನಾಡಗೀತೆ ಹೇಳುತ್ತಿದ್ದ ಯುವತಿಯೊಬ್ಬಳು ಕುಸಿದುಬಿದ್ದ ಘಟನೆ ನಡೆಯಿತು. ವೇದಿಕೆಯ ಪಕ್ಕದಲ್ಲಿ ನಾಡಗೀತೆ, ಮಲ್ಲಕಂಬ ಹಾಗೂ ಯೋಗಾಸನ ಪ್ರದರ್ಶನಕ್ಕೆ ಪ್ರತ್ಯೇಕ ವೇದಿಕೆ ಹಾಕಲಾಗಿತ್ತು. ನಾಡಗೀತೆಯನ್ನು ಇಲ್ಲಿನ ಮೂರು ಸಾವಿರ ಮಠ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಹಾಡುತ್ತಿದ್ದರು. ಅದಕ್ಕಿಂತ ಮುನ್ನ ಸುಗಮ ಸಂಗೀತ, ಭಾವಗೀತೆ, ಜಾನಪದ ಹೀಗೆ ಸಾಲುಸಾಲು ಐದು ಹಾಡುಗಳನ್ನು ಹಾಡಿದ್ದ ವಿದ್ಯಾರ್ಥಿನಿಯರು ನಾಡಗೀತೆ ಹಾಡುತ್ತಿದ್ದ ವೇಳೆ ಮಧ್ಯದಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದಳು.

ಕೂಡಲೇ ಆಕೆಯನ್ನು ವೈದ್ಯರ ಬಳಿ ಕರೆದೊಯ್ಯಲಾಯಿತು. ಬೆಳಿಗ್ಗೆಯಿಂದ ಕುಳಿತಿದ್ದರಿಂದ ನಿತ್ರಾಣಗೊಂಡಿದ್ದ ಯುವತಿಯನ್ನು ನಂತರ ಸುಧಾರಿಸಲಾಯಿತು. ಇದೇ ವೇಳೆ ಒಂದೇ ಕಾಲೇಜಿಗೆ ಇಷ್ಟು ಹಾಡುಗಳನ್ನು ಹಾಡಲು ಅವಕಾಶ ನೀಡುವ ಮೂಲಕ ಸಂಘಟಕರು ಉಳಿದ ಕಾಲೇಜಿನ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದವು.

9 ಕಿಮೀ ಪ್ರಧಾನಿ ಮೋದಿ ರೋಡ್‌ ಶೋ; ದಾರಿಯುದ್ದಕ್ಕೂ ಮೊಳಗಿದ ಜೈಕಾರ!

ಕುಣಿದು ಕುಪ್ಪಳಿಸಿದ ಯುವಸಮೂಹ: 

ನರೇಂದ್ರ ಮೋದಿ ವೇದಿಕೆಗೆ ಬರುವ ಮುನ್ನ ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿಯರು ಸೇರಿದಂತೆ ಬೇರೆ ಬೇರೆ ತಂಡಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ವೇಳೆ ‘ಶ್ರಾವಣ ಬಂತು ನಾಡಿಗೆ’ ಎಂಬ ಹಾಡಿಗೆ ಬೇರೆ ಬೇರೆ ರಾಜ್ಯಗಳಿಂದ ನೆರೆದಿದ್ದ ಹಾಗೂ ಕರ್ನಾಟಕದ ಯುವ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. ಉತ್ಸಾಹಿತರಾದ ಯುವಕರು 3 ಬಾರಿ ಮತ್ತೆ ಮತ್ತೆ ಇದೇ ಹಾಡಿಗೆ ಯುವಕರಿಂದ ಬೇಡಿಕೆಯಿರಿಸಿದರು. ‘ಖಡಕ್‌ ರೊಟ್ಟಿ, ಚಟ್ನಿ..’ಎಂಬಂತಹ ಉತ್ತರ ಕರ್ನಾಟಕದ ಜಾನಪದ ಗೀತೆಗಳು ಜನರನ್ನು ರಂಜಿಸಿದವು.

click me!