ನೀವು ಕೊಲೆಗಡುಕರಿದ್ದೀರಿ. ನಿಮ್ಮನ್ನು ನಂಬಿದವರ ಕತ್ತು ಹಿಸುಕಿದ್ದೀರಿ. ನೀವು ಸ್ವಾಭಿಮಾನಿಯಲ್ಲ, ಬೆನ್ನಿಗೆ ಚೂರಿ ಹಾಕುವವರು ಎನ್ನುವುದನ್ನು ಹೇಳಿ ಎಂದು ಸಂಸದೆ ಸುಮಲತಾ ವಿರುದ್ಧ ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಕಿಡಿಕಾರಿದರು.
ಮಂಡ್ಯ : ನೀವು ಕೊಲೆಗಡುಕರಿದ್ದೀರಿ. ನಿಮ್ಮನ್ನು ನಂಬಿದವರ ಕತ್ತು ಹಿಸುಕಿದ್ದೀರಿ. ನೀವು ಸ್ವಾಭಿಮಾನಿಯಲ್ಲ, ಬೆನ್ನಿಗೆ ಚೂರಿ ಹಾಕುವವರು ಎನ್ನುವುದನ್ನು ಹೇಳಿ ಎಂದು ಸಂಸದೆ ಸುಮಲತಾ ವಿರುದ್ಧ ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಕಿಡಿಕಾರಿದರು.
ಇತ್ತೀಚೆಗಷ್ಟೇ ಜಿಲ್ಲಾ ನಾಯಕರು ಅತೃಪ್ತಿ, ಆಕ್ರೋಶವನ್ನು ಹೊರಹಾಕಿದ್ದ ಡಾ.ಎಚ್.ಎನ್.ರವೀಂದ್ರ ಇದೀಗ ಸಂಸದೆ ಸುಮಲತಾಗೆ ಸಂಪೂರ್ಣ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಫೇಸ್ಬುಕ್ನಲ್ಲಿ ಹರಿಹಾಯ್ದಿದ್ದಾರೆ.
ಇನ್ನು ಮುಂದೆ ನೀವು ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ. ಸ್ವಾಭಿಮಾನವನ್ನು ನಿಮ್ಮ ಸ್ವಾರ್ಥಕ್ಕಾಗಿ ಅಡವಿಡಬೇಡಿ. ನೀವೊಬ್ಬರು ಕೊಲೆಗಡುಕರಾಗಿದ್ದೀರಿ, ನಂಬಿದವರ ಕತ್ತು ಹಿಸುಕಿದ್ದೀರಿ. ತಾವು ಬೆನ್ನಿಗೆ ಚೂರಿ ಹಾಕೋರು ಎನ್ನುವುದನ್ನು ಜನರೆದುರು ಬಹಿರಂಗವಾಗಿ ಹೇಳುವಂತೆ ಒತ್ತಾಯಿಸಿದರು.
ಸುಮಲತಾ ಅವರಿಗಾಗಿ ಮತ್ತು ಜಿಲ್ಲೆಯ ಅಸ್ಮಿತೆ, ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ನನ್ನಂತಹ ಹಲವರ ಹೋರಾಟದಿಂದ ಸುಮಲತಾ ಗೆಲುವು ಸಾಧಿಸಿದರು. ಆದಾದ ಬಳಿಕ ನೀವು ಎಲ್ಲಿಗೆ ಹೋದಿರಿ. ಗೆದ್ದ ಮೇಲೆ ಜಿಲ್ಲೆಗೆ ಏನಾದರೂ ಮಾಡಬೇಕು ಎಂಬ ಬಗ್ಗೆ ಪ್ರಯತ್ನ ಪಟ್ಟಿರಾ ಎಂದು ಪ್ರಶ್ನಿಸಿದರು.
ನಿಮ್ಮ ರಾಜಕೀಯ ಮಾರ್ಗದರ್ಶಕರು ಯಾರೋ ಗೊತ್ತಿಲ್ಲ. ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಅಂತಾ ಹೇಳುವ ಯೋಗ್ಯತೆ ನಮಗೆ ಇರಲಿಲ್ವ. ಆ ಯೋಗ್ಯತೆ ನಮಗಿಲ್ಲ ಎಂದು ನೀವೇಕೆ ಅಂದುಕೊಂಡಿರಿ. ಇವತ್ತು ಏಕೆ ಸ್ವಾಭಿಮಾನಿ ಪದವನ್ನು ಪದೇ ಪದೇ ಬಳಸುತ್ತೀರಿ. ಸ್ವಾಭಿಮಾನಕ್ಕೂ ನಿಮಗೂ ಎಲ್ಲಿಂದೆಲ್ಲಿ ಸಂಬಂಧ.!?, ಯಾವ ಸ್ವಾಭಿಮಾನದ ಕೆಲಸವನ್ನು ನೀವು ಮಾಡಿದ್ದೀರಾ ಎಂದು ಖಾರವಾಗಿ ನುಡಿದರು.
ನಿಮ್ಮನ್ನು ಇವತ್ತು ಬರ್ತೀರಾ, ನಾಳೆ ಬರ್ತೀರಾ ಎಂದು ಕಾದಿದ್ದು ಜಿಲ್ಲೆಯ ಜನರಿಗೆ ಸಿಕ್ಕ ಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಅವರ ಅದ್ಭುತ ಕಾರ್ಯದಿಂದ ಅವರನ್ನ ಸಂಪೂರ್ಣ ಬೆಂಬಲಿಸುತ್ತೇನೆ ಎಂದಿದ್ದೀರಿ. ಅವತ್ತು ನಿಮ್ಮನ್ನು ಗೆಲ್ಲಿಸಲು ಹೋರಾಟ ಮಾಡಿದವರ ಕತೆ ಏನು ಎಂದು ಮತ್ತೊಮ್ಮೆ ಪ್ರಶ್ನಿಸಿದರು.
ನಾನು, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡೀಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಬಿ.ಚಂದ್ರಶೇಖರ್ ಅಂದು ನಿಮ್ಮ ಜೊತೆ ನಿಂತೆವು. ಇವತ್ತು ಯಾರಿಗೆ ನೀವು ನ್ಯಾಯ ಕೊಡುತ್ತಿದ್ದೀರಾ?, ನೀವು ಈಗಲೇ ಉತ್ತರ ಕೊಡಿ. ನಿಮ್ಮ ಬಾಯಲ್ಲಿ ಇಂದಿನಿಂದ ಸ್ವಾಭಿಮಾನ ಅನ್ನೋ ಪದ ಬರಬಾರದು.!. ನಮ್ಮ ಜಿಲ್ಲೆಯ ಸ್ವಾಭಿಮಾನವನ್ನ ನೀವು ಅಡವಿಡಲು ಹೋಗಬೇಡಿ. ನಿಮಗೆ ಸ್ವಾಭಿಮಾನ ಅಂತೇಳಲು ಯಾವುದೇ ಹಕ್ಕಿಲ್ಲ ಎಂದು ಕಟುವಾಗಿ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಸಚ್ಚಿದಾನಂದನನ್ನು ಬಿಟ್ಟುಕೊಡಲು ನಿಮಗೆ ಆಗೋಲ್ಲ. ಹಾಗಾದರೆ ನಿಮಗೆ ಬೆಂಬಲವಾಗಿ ನಿಂತಿದ್ದ ರಮೇಶ್ ಬಂಡೀಸಿದ್ದೇಗೌಡ, ರೈತ ಸಂಘಕ್ಕೆ ಏನು ನ್ಯಾಯ ಕೊಡ್ತೀರಾ. ಹೀಗೆಲ್ಲಾ ಮಾಡಿಕೊಂಡು ನಮ್ಮಣ್ಣನ ಮರ್ಯಾದೆ ಕಳೆಯಲು ಹೋಗಬೇಡಿ. ನೀವು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ. ಇಲ್ಲದಿದ್ದರೆ ಇನ್ನು ಹತ್ತು ಹಲವು ವಿಚಾರಗಳು ಹೊರಗೆ ಬರುತ್ತವೆ.
ಭವಿಷ್ಯದಲ್ಲಿ ಯಾವತ್ತು ಸ್ವಾಭಿಮಾನಿ ಅನ್ನೋ ಪದ ಉಪಯೋಗಿಸಬೇಡಿ ಎಂದು ಸಂಸದೆಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ.
(ಡಾ.ಎಚ್.ಎನ್.ರವೀಂದ್ರ- ಅವರ ಹೆಸರಿನಲ್ಲೇ ಫೋಟೋ ಇದೆ)