
ಮಂಗಳೂರು: ಹೊರ ಜಿಲ್ಲೆ, ಹೊರರಾಜ್ಯಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದ.ಕ. ಜಿಲ್ಲೆಯ ಎ, ಬಿ, ಸಿ ಅಡಿಯಲ್ಲಿ ಬರುವ 491 ದೇವಾಲಯಗಳ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ವೆಬ್ಸೈಟ್ ಆರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅನಾವರಣಗೊಳಿಸಿದ್ದಾರೆ.
www.dkannadatemples.com ಎಂಬ ಹೆಸರಿನ ವೆಬ್ಸೈಟ್ ಇದಾಗಿದ್ದು, ದ.ಕ. ಜಿಲ್ಲಾಡಳಿತ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ದೇವಾಲಯಗಳಿಗೆ ಭೇಟಿ ನೀಡಿ, ಸಮೀಕ್ಷೆಯ ಮೂಲಕ ಸಂಗ್ರಹಿಸಿದ ಮಾಹಿತಿಗಳನ್ನು ಇದರಲ್ಲಿ ಹಾಕಲಾಗಿದೆ.
ದೇವಾಲಯಗಳ ಇತಿಹಾಸ, ಪೂಜಾ ವಿವರ, ಪೂಜಾ ದರಪಟ್ಟಿ, ಸೌಕರ್ಯ ಮತ್ತು ಸೌಲಭ್ಯಗಳು, ದೇವಾಲಯಕ್ಕೆ ತಲುಪುವ ರಸ್ತೆ ಮಾರ್ಗ, ರೈಲು ಮಾರ್ಗದ ವಿವರ, ನಕ್ಷೆ, ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವಿವರಗಳನ್ನು ವೆಬ್ಸೈಟ್ನಲ್ಲಿ ನೀಡಲಾಗಿದೆ. ಕಾಲಕಾಲಕ್ಕೆ ಈ ಮಾಹಿತಿಗಳನ್ನು ಪರಿಷ್ಕರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಖಾದರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ವೆಬ್ಸೈಟ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅನಾವರಣಗೊಂಡಿದ್ದು, ಸಾರ್ವಜನಿಕರು ಮತ್ತು ಭಕ್ತರಿಗೆ ಇದು ವೇದಿಕೆಯೂ ಆಗಿದೆ. ವಾರ್ಷಿಕ ಜಾತ್ರೆ, ವಿಶೇಷ ಪೂಜೆ, ಜಾತ್ರೆ ಫೋಟೊ ಮತ್ತು ವಿಡಿಯೊಗಳನ್ನು ಇದರಲ್ಲಿ ಅಪ್ಲೋಡ್ ಮಾಡಬಹುದು. ಪ್ರತಿ ದೇವಾಲಯದ ವಿಮರ್ಶೆ ಮಾಡಲು ಪುಟಗಳನ್ನು ಮತ್ತು ರಯಾಂಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೂಡಾ ಮಾಡಬಹುದಾಗಿದೆ.
ಜಿಲ್ಲೆಯ ಯಾತ್ರಾ ಸ್ಥಳಗಳ ಪ್ರಚಾರದೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ವೆಬ್ ಸೈಟ್ ಅನಾವರಣ ಮಾಡಲಾಗಿದ್ದು, ಇದರಿಂದ ಪರೋಕ್ಷವಾಗಿ ಜಿಲ್ಲೆಯ ಆರ್ಥಿಕತೆ ಇನ್ನಷ್ಟು ಉತ್ತಮವಾಗುತ್ತದೆ ಎಂದು ಸಚಿವ ಖಾದರ್ ಲೆಕ್ಕಾಚಾರ.