4 ದಿನ ಭಾರೀ ಮಳೆ: ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌

By Kannadaprabha NewsFirst Published Apr 15, 2021, 7:44 AM IST
Highlights

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್  ಘೋಷಣೆ ಮಾಡಲಾಗಿದೆ. 

ಬೆಂಗಳೂರು (ಏ.15):  ರಾಜ್ಯದ ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಜೋರು ಮಳೆ ಸುರಿದಿದೆ. ಏ.16ರವರೆಗೆ ನಾಡಿನಾದ್ಯಂತ ಮಳೆ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಭಾಗದಲ್ಲಿ ಭೂಮಿ ಮೇಲ್ಮೈನಲ್ಲಿ ಸುಳಿಗಾಳಿ ತೀವ್ರಗೊಂಡ ಪರಿಣಾಮ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಆಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಹೊಸ ವರ್ಷದ ಮೊದಲ ಮಳೆ ತಂಪೆರೆದಿದೆ.

ಕಲಬುರಗಿ, ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದೆ. ವಿಜಯಪುರ, ಬೀದರ್‌, ಹಾವೇರಿ, ಗದಗ ಕಡೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಒಂದೆರಡು ಕಡೆಗಳಲ್ಲಿ ಕೆಲ ಕಾಲ ಮಳೆ ಬಿರುಸಾಗಿತ್ತು. ಉಳಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಸುರಿದಿದೆ. ಮಳೆಯಿಂದ ರಾಜ್ಯದಲ್ಲಿ ಏರುಗತಿಯಲ್ಲಿದ್ದ ತಾಪಮಾನದ ಪ್ರಮಾಣ ಕುಸಿದಿದೆ.

ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ! ..

ಮಂಗಳವಾರ ಕಲಬುರಗಿ, ಧಾರವಾಡ ಜಿಲ್ಲೆಯ ಕಲಘಟಗಿ, ಬೆಳಗಾವಿಯ ನಿಪ್ಪಾಣಿಯಲ್ಲಿ ತಲಾ 3 ಸೆಂ.ಮೀ., ಉತ್ತರ ಕನ್ನಡದ ಕಿರವತ್ತಿ, ಧಾರವಾಡದ ಕುಂದಗೋಳ, ಕಲಬುರಗಿ ಸೇಡಂ, ಚಿಕ್ಕಮಗಳೂರಿನ ಶಂಗೇರಿ ತಲಾ 2 ಸೆಂ.ಮೀ. ಮಳೆ ಆಗಿದೆ. ರಾಯಚೂರಿನಲ್ಲಿ (37.4 ಡಿಗ್ರಿ ಸೆಲ್ಸಿಯಸ್‌) ರಾಜ್ಯದ ಗರಿಷ್ಠ ತಾಪಮಾನ ಹಾಗೂ ಧಾರವಾಡದಲ್ಲಿ (18.9ಡಿ.ಸೆ.) ಕನಿಷ್ಠ ತಾಪಮಾನ ದಾಖಲಾಗಿದೆ.

ಇಂದು, ನಾಳೆ ಯಲ್ಲೋ ಅಲರ್ಟ್‌ :  ಹೆಚ್ಚು ಮಳೆ ಬೀಳುವ ಸಂಭವ ಇರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಚಾಮರಾಜನಗರಕ್ಕೆ ಏ.15 ಮತ್ತು 16ರಂದು ಎರಡು ದಿನ ಹಾಗೂ ಕೊಪ್ಪಳ ಮತ್ತು ಗದಗ ಜಿಲ್ಲೆ ಹೊರತುಪಡಿಸಿ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಿಗೆ ಏ.15ರಂದು ಮಾತ್ರ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಏ.17 ಮತ್ತು 18ರಂದು ರಾಜ್ಯದ ಕೆಲವೆಡೆ ಮಾತ್ರ ತುಂತುರು ಮಳೆ ಬೀಳುವ ಸಾಧ್ಯತೆ ಇದೆ.

click me!