Uttara Kannada News: ಶಿರಸಿ ನಗರದಲ್ಲಿ ಗುಡ್ಡವಾಗಿ ಮಾರ್ಪಟ್ಟ ತ್ಯಾಜ್ಯ ರಾಶಿ!

By Kannadaprabha NewsFirst Published Nov 7, 2022, 1:22 PM IST
Highlights
  • ಗುಡ್ಡವಾಗಿ ಮಾರ್ಪಟ್ಟತ್ಯಾಜ್ಯ ರಾಶಿ
  • 98 ಸಾವಿರ ಟನ್‌ ತ್ಯಾಜ್ಯ ನಿರ್ನಾಮಕ್ಕೆ ನಗರಸಭೆ ಹರಸಾಹಸ
  • ಪ್ರತಿದಿನ 20 ಟನ್‌ ತ್ಯಾಜ್ಯ ಸಂಗ್ರಹ

ಮಂಜುನಾಥ ಸಾಯೀಮನೆ

 ಶಿರಸಿ (ನ.7) : ಬೆಳೆಯುತ್ತಿರುವ ಶಿರಸಿ ನಗರಕ್ಕೆ ತ್ಯಾಜ್ಯವೇ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿಯ ಹುಸುರಿ ರಸ್ತೆಯಲ್ಲಿರುವ ಲಾಲ್‌ಗೌಡರ ನಗರದಲ್ಲಿರುವ ಎರಡು ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಸಂಗ್ರಹಗೊಂಡಿರುವ ಸುಮಾರು 98 ಸಾವಿರ ಟನ್‌ ತ್ಯಾಜ್ಯ ನಿರ್ನಾಮಕ್ಕೆ ಸಾಹಸ ಪಡುತ್ತಿದೆ.

ಜಾಗೃತಿ ಮೂಡಿಸಿದರೂ ನಿಲ್ಲದ ರಸ್ತೆ ಬದಿ ಕಸದ ರಾಶಿ

ನಗರದಲ್ಲಿ ಹಸಿ ಕಸ, ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುತ್ತಿದ್ದರೂ ಪ್ರತಿನಿತ್ಯ ಸರಾಸರಿ 20 ಟನ್‌ನಷ್ಟುತ್ಯಾಜ್ಯ ಸಂಗ್ರಹಗೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಕಸದ ರಾಶಿ ವಿಸ್ತಾರಗೊಳ್ಳುತ್ತಿದೆ. ವಿಲೇವಾರಿಗೆ ಜಾಗ ಪ್ರಮಾಣ ಇಳಿಕೆಯಾಗುತ್ತಿದೆ.

ಸದ್ಯ ತ್ಯಾಜ್ಯ ವಿಲೇವಾರಿ ಘಟಕವಿರುವ ಜಾಗ 11 ಎಕರೆ ವಿಸ್ತಾರವಾಗಿದೆ. ಇದರ ಪಕ್ಕದಲ್ಲಿರುವ ಸ.ನಂ.150/ಎ2 ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಈ ಮೊದಲು ತ್ಯಾಜ್ಯ ಸಂಗ್ರಹಣೆಗೆ ಬಳಕೆ ಮಾಡಲಾಗಿತ್ತು. ಕಳೆದ ಏಳು ದಶಕಗಳವರೆಗೆ ಇದೇ ಜಾಗದಲ್ಲಿ ಕಸ ಸಂಗ್ರಹಣೆ ಮಾಡಲಾಗಿತ್ತು. 2004ರ ಬಳಿಕ ಹೊಸ ಘಟಕಕ್ಕೆ ಕಸ ರವಾನೆಯಾಗುತ್ತಿದೆ.

ಹಳೆಯ ಘಟಕದಲ್ಲಿ ಸಂಗ್ರಹಗೊಂಡ ಘನ ತ್ಯಾಜ್ಯ ಹಾಗೆಯೇ ಉಳಿದುಕೊಂಡಿದೆ. ಅಲ್ಲಿ ಗಿಡ-ಗಂಟಿಗಳು ಬೆಳೆದುಕೊಂಡಿವೆ. ಅವುಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

ಇತ್ತೀಚೆಗೆ ನಡೆದ ಸಭೆಯಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕೂಡ ಹೊರವಲಯದ ಹಳೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದಾಸ್ತಾನಾಗಿರುವ ಕಸ ವಿಲೇವಾರಿಗೊಳಿಸಲು ಕ್ರಮವಾಗಲಿ. ಆ ಜಾಗವನ್ನು ನಗರಸಭೆ ಪೂರಕ ಚಟುವಟಿಕೆಗೆ ಬಳಸಿಕೊಳ್ಳಬಹುದು ಎಂದಿದ್ದಾರೆ.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಮಾರ್ಪಡಿಸಿ ಮಾರಾಟ ಮಾಡಲಾಗುತ್ತಿದೆ. ಘನ ತ್ಯಾಜ್ಯವನ್ನು ಸಾಧ್ಯವಾದಷ್ಟುಸಂಸ್ಕರಿಸಲಾಗುತ್ತಿದೆ. ಆದರೂ ಕಸದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಸಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಸದ ರಾಶಿಯಿಂದ ವ್ಯಾಪಿಸಿದ ಬೆಂಕಿ : ದೆಹಲಿಯಲ್ಲಿ ಶಾಲೆ ಬಂದ್‌

ಟೆಂಡರ್‌ ಕರೆದು ವಿಲೇ:

ಹಳೆಯ ಮತ್ತು ಈಗಿನ ವಿಲೇವಾರಿ ಘಟಕದಲ್ಲಿ ದಾಸ್ತಾನಿರುವ ತ್ಯಾಜ್ಯದ ಪ್ರಮಾಣವನ್ನು ಕಳೆದ ಮಾಚ್‌ರ್‍ನಲ್ಲಿ ಡ್ರೋಣ್‌ ಸರ್ವೆ ಮೂಲಕ ಅಳೆಯಲಾಗಿದೆ. 98 ಸಾವಿರ ಟನ್ನಷ್ಟುತ್ಯಾಜ್ಯ ದಾಸ್ತಾನಿದೆ. ವಿಲೇವಾರಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುವುದು. ಬಳಿಕ ಟೆಂಡರ್‌ ಕರೆದು ವಿಲೇವಾರಿಗೊಳಿಸಲಾಗುವುದು ಎನ್ನುತ್ತಾರೆ ಪೌರಾಯುಕ್ತ ಕೇಶವ ಚೌಗುಲೆ.

ಹಳೆಯ ತ್ಯಾಜ್ಯ, ಈಗ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಬಯೋ ಮೈನಿಂಗ್‌ಗೆ ಒಳಪಡಿಸಿ ವಿಲೇವಾರಿ ಮಾಡುವ ಯೋಚನೆಯಲ್ಲಿದ್ದೇವೆ.

-ನಾರಾಯಣ ನಾಯಕ, ಶಿರಸಿ ನಗರಸಭೆ ಪರಿಸರ ವಿಭಾಗದ ಎಇಇ

ನಗರದಲ್ಲಿ ಸಂಗ್ರಹವಾಗುತ್ತಿರುವವ ತ್ಯಾಜ್ಯ ಮತ್ತು ಹಳೆಯ ವಿಲೇವಾರಿ ಘಟಕದಲ್ಲಿರುವ ತ್ಯಾಜ್ಯಗಳನ್ನು ವೈಜ್ಞಾನಿಕ ಕ್ರಮಗಳೊಂದಿಗೆ ವಿಲೇವಾರಿಗೊಳಿಸಲು ಅಗತ್ಯ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

-ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ

click me!