ಯಲ್ಲಾಪುರ: ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

By Girish GoudarFirst Published Mar 23, 2023, 2:00 AM IST
Highlights

1000ಕ್ಕೂ ಹೆಚ್ಚು ಮತಗಳಿರುವ ಗ್ರಾಮಗಳ ಜನರಿಂದ ಸೇತುವೆಗಾಗಿ ಬೇಡಿಕೆಯಿದ್ದು, ಎರಡು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿರುವ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. 

ಉತ್ತರಕನ್ನಡ(ಮಾ.23): ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿ ಇದೀಗ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಕಾಣಿಸಿದೆ.‌ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿರಸಿ ತಾಲೂಕಿನ ಗ್ರಾಮಗಳಾದ ಅಜ್ಜರಣಿ, ಗುಡ್ನಾಪುರ ಮತ್ತು ಮತಗುಣಿ ಗ್ರಾಮಸ್ಥರು ಸೇತುವೆ ನಿರ್ಮಿಸಿದ ಬಳಿಕ ಮತ ಕೇಳಿ ಎಂದು ಗ್ರಾಮದ ಹೆಬ್ಬಾಗಿಲಿಗೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಮಳೆಗಾಲ ಸಂದರ್ಭದಲ್ಲಿ ವರದಾ ನದಿಯ ಹಿನ್ನೀರಿನಿಂದ ಇಲ್ಲಿನ‌ ಗ್ರಾಮಗಳು ಸಂಪರ್ಕ ಕಳೆದುಕೊಳ್ಳುತ್ತವೆ‌. ಈ ಕಾರಣದಿಂದ ವರದಾ ನದಿ ಹಿನ್ನೀರು ನಿಲ್ಲುವ ಸ್ಥಳದಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. 

ಸಿದ್ದರಾಮಯ್ಯ ಗೆದ್ದ ಕ್ಷೇತ್ರಕ್ಕೆ ಒಳ್ಳೆಯದನ್ನ ಮಾಡಲಿ: ಸಚಿವ ಮುರುಗೇಶ್‌ ನಿರಾಣಿ

Latest Videos

ಜನರ ಸಂಚಾರಕ್ಕೆ ಸೇತುವೆ ನಿರ್ಮಿಸಿಕೊಡಿ ಎಂದು ಜನರು ಮನವಿ ಮಾಡಿದ್ದರು. ಈ ಹಿನ್ನೆಲೆ ಮೂರು ವರ್ಷಗಳ ಹಿಂದೆ ಸೇತುವೆ ಕಾಮಗಾರಿಗೆ ಸಚಿವ ಹೆಬ್ಬಾರ್ ಗುದ್ದಲಿ ಪೂಜೆ ಮಾಡಿದ್ದರು. 3 ಕೋಟಿ‌ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡುವ ಉದ್ದೇಶದಿಂದ ಹಳೇ ಸೇತುವೆಯನ್ನು ಪುಡಿಗಟ್ಟಲಾಗಿತ್ತು. ಆದರೆ, ನೂತನ ಸೇತುವೆಗೆ ಶಂಕುಸ್ಥಾಪನೆ ಮಾಡಲಾಗಿದ್ರೂ ಸೇತುವೆ ಮಾತ್ರ ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ. ಸೇತುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ನಿರ್ಲಕ್ಷ್ಯ ಮಾಡಿದ್ದರಿಂದ ಸುಮಾರು 300 ಕುಟುಂಬಗಳು ಅತಂತ್ರರಾಗಿವೆ ಅಂತ ಗ್ರಾಮಸ್ಥರು ಆಕ್ರೋಶವನ್ನ ಹೊರಹಾಕಿದ್ದಾರೆ. 

1000ಕ್ಕೂ ಹೆಚ್ಚು ಮತಗಳಿರುವ ಗ್ರಾಮಗಳ ಜನರಿಂದ ಸೇತುವೆಗಾಗಿ ಬೇಡಿಕೆಯಿದ್ದು, ಎರಡು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿರುವ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಸೇತುವೆ ನಿರ್ಮಾಣವಾಗೋದಾಗಿ ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಆದರೆ, ಸೇತುವೆ ನಿರ್ಮಾಣ ಕಾಮಗಾರಿ ನಡೆಯದವರೆಗೆ ಚುನಾವಣೆ ಬಹಿಷ್ಕರಿಸುವುದಾಗಿ ಜನರು ಪಟ್ಟು ಹಿಡಿದಿದ್ದಾರೆ.

click me!