ಲಂಚ ಪಡೆದು ಸಿಕ್ಕಿಬಿದ್ದ ರಮ್ಯಾಗೆ ಅದ್ದೂರಿ ಸ್ವಾಗತ

By Kannadaprabha NewsFirst Published Jan 21, 2021, 6:51 AM IST
Highlights

ಲಂಚ ಪಡೆದು ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗೆ ಅದ್ದೂರಿ ಸ್ವಾಗತ ಕೋರಿರುವ ಘಟನೆಯೊಂದು ನಡೆದಿದೆ. ಗ್ರಾಮಸ್ಥರು ಜಾಮೀನು ಪಡೆದು ಬಂದ ಅಧಿಕಾರಿಗೆ ಅದ್ದೂರಿ ಸ್ವಾಗತ ಮಾಡಿದ್ದಾರೆ. 

ಕನಕಪುರ (ಜ.21):  ಲಂಚ ಸ್ವೀಕಾರ ಪ್ರಕರಣದಲ್ಲಿ ಎಸಿಬಿ ಬಲೆಗೆ ಸಿಕ್ಕಿಬಿದ್ದು ಜಾಮೀನು ಪಡೆದು ಹೊರ ಬಂದ ತೋ​ಕ​ಸಂದ್ರ ಗ್ರಾಮ ಪಂಚಾ​ಯಿ​ತಿಯ ಪಿಡಿಒಗೆ ಗ್ರಾಮಸ್ಥರ ಗುಂಪೊಂದು ಅದ್ಧೂರಿಯಾಗಿ ಸ್ವಾಗತ ಕೋರಿ ಸಂಭ್ರ​ಮಿ​ಸಿದೆ.

ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮ್ಯಾ ಕಳೆದ ವಾರ ಪಂಚಾಯಿತಿ ಕಚೇರಿಯಲ್ಲಿ ನರೇಗಾ ಕಾಮಗಾರಿಯಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಲು ಕಟ್ಟಡ ಸಾಮಗ್ರಿ ಸರ​ಬ​ರಾಜು ಮಾಡಿ​ದ್ದ​ವ​ರಿಂದ ಲಂಚದ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿ​ದ್ದರು. ದೂರು ದಾಖ​ಲಿ​ಸಿ​ಕೊಂಡಿದ್ದ ಎಸಿಬಿ ಅಧಿ​ಕಾ​ರಿ​ಗಳು ಪಿಡಿಒ ರಮ್ಯಾ ಅವ​ರನ್ನು ನ್ಯಾಯಾಲಯಕ್ಕೆ ಹಾಜರು ಪಡಿ​ಸಿ​ದ್ದರು. ಶನಿ​ವಾ​ರವೇ ನ್ಯಾಯಾ​ಲ​ಯ​ದಲ್ಲಿ ಜಾಮೀನು ಪಡೆ​ದು​ಕೊಂಡು ರಮ್ಯಾ ಸೋಮ​ವಾರ ಗ್ರಾಮಕ್ಕೆ ಆಗ​ಮಿ​ಸಿ​ದ್ದಾರೆ.

ಈ ವಿಚಾರ ತಿಳಿ​ದಿದ್ದ ಗ್ರಾಮ​ಸ್ಥರ ಗುಂಪೊಂದು ಗ್ರಾಮದ ದ್ವಾರ​ದ​ಲ್ಲಿಯೇ ಪಿಡಿಒ ಅವ​ರಿಗೆ ಹೂಗುಚ್ಛ ನೀಡಿ, ಹೂವಿನ ಹಾರ ಹಾಕಿದರ​ಲ್ಲದೆ ಪಟಾಕಿ ಸಿಡಿಸಿ ಅದ್ಧೂ​ರಿ​ಯಾಗಿ ಸ್ವಾಗತ ಕೋರಿ ಸಂಭ್ರ​ಮಿ​ಸಿ​ದರು. ಅಲ್ಲದೆ, ಕಚೇ​ರಿಗೂ ಬಾಳೆ ಕಂದು, ಹೂವಿ​ನಿಂದ ಅಂಲ​ಕಾರ ಮಾಡ​ಲಾ​ಗಿತ್ತು.

2 ಲಕ್ಷ ಲಂಚ ಬೇಡಿಕೆ ಇಟ್ಟ ಲೇಡಿ ಎಸ್‌ಐ, ಮುಖ್ಯಪೇದೆ ಅರೆಸ್ಟ್‌ ...

ಭ್ರಷ್ಟಅಧಿಕಾರಿಗಳನ್ನು ಬೆಂಬಲಿಸಿ ಗ್ರಾಮದ ಕೆಲ ಮುಖಂಡರು ಪಂಚಾಯಿತಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಸಂಭ್ರಮಿಸುತ್ತಿರುವುದು ನೋವಿನ ಸಂಗತಿ. ಈ ಮೂಲಕ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ನಾವು ನೀಡುತ್ತಿದ್ದೇವೆ ಎಂಬು​ದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದು ಗ್ರಾಮದ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವ ವಿಚಾರ ಎಂದು ಕೆಲ ಗ್ರಾಮ​ಸ್ಥರು ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ.

ಪಂಚಾ​ಯಿತಿ ಅಭಿ​ವೃದ್ಧಿ ಅಧಿ​ಕಾರಿ ರಮ್ಯಾ ಗ್ರಾಮಸ್ಥರೊಂದಿಗೆ ಅನ್ಯೋನ್ಯ​ವಾ​ಗಿದ್ದು, ಬಡವರ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿ​ದ್ದಾರೆ. ಗ್ರಾಮದ ಕೆಲವರು ರಾಜಕೀಯ ದುರುದ್ದೇಶದಿಂದ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.

ಶಿವ​ರುದ್ರ, ಗ್ರಾಪಂ ಸದ​ಸ್ಯರು, ತೋಕ​ಸಂದ್ರ

click me!