
ಹಾಸನ(ಡಿ.29): ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಕಾಡಾನೆಗಳ ಕಾಟಕ್ಕೆ ಬ್ರೇಕ್ ಹಾಕಲು ಗ್ರಾಮಸ್ಥರೇ ಮುಂದಾಗಿದ್ದಾರೆ.
ಇಲ್ಲಿನ ಜನರು ಕಾಡಾನೆಗಳಿಗೆ ಖೆಡ್ಡಾ ಸಿದ್ದಗೊಳಿಸಿದ್ದಾರೆ. ರೈತರು ಹಾಗೂ ಕಾಫಿ ಬೆಳೆಗಾರರು 20 ಅಡಿ ಅಗಲ 20 ಅಡಿ ಆಳದ ಕಂದಕವನ್ನ ತೋಡಿದ್ದಾರೆ. ಕಂದಕದ ಮೇಲೆ ಬಿದಿರು ಹಾಗೂ ಕಟ್ಟಿಗೆಗಳನ್ನು ಇಟ್ಟು ಅದರ ಮೇಲೆ ಪ್ಲಾಸ್ಟಿಕ್ ಚೀಲ ಹಾಕಿ, ಚೀಲದ ಮೇಲೆ ಸೊಪ್ಪು ಹಾಕಿ ಮುಚ್ಚಲಾಗಿದೆ. ಈ ಮೂಲಕ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮಸ್ಥರು ಸರ್ಕಾರಕ್ಕೆ ಸವಾಲ್ ಎಸೆದಿದ್ದಾರೆ.
HASSAN MIXI BLAST: ನಿನ್ನೆ ಪತ್ನಿಗೆ ಅವಳಿ ಜವಳಿ ಮಕ್ಕಳಾಗಿದ್ದರೂ ಮುಖ ನೋಡಲಾಗಿಲ್ಲ: ಗಾಯಾಳು ಶಶಿ ಅಳಲು
ಯಾವಾಗ ಬೇಕಾದರೂ ಕಾಡಾನೆಗಳು ಖೆಡ್ಡಾಗೆ ಬೀಳುವ ಸಾಧ್ಯತೆ ಇದೆ. ಕಾಡಾನೆಗಳ ಕಾಟದಿಂದ ರೋಸಿ ಹೋದ ಗ್ರಾಮಸ್ಥರು ಇದೀಗ ಖೆಡ್ಡಾ ತೋಡಿದ್ದಾರೆ. ಹೊಸಕೊಪ್ಪಲು ಗ್ರಾಮದ ಅಮೃತ್ ಎಂಬುವವರ ಜಮೀನಿನಲ್ಲಿ ಗಜಪಡೆಗೆ ಖೆಡ್ಡಾ ಸಿದ್ಧವಾಗಿದೆ. ಆಹಾರ ಅರಸಿ ಕಾಡಾನೆಗಳ ಹಿಂಡು ಬೆಳಗ್ಗೆ, ರಾತ್ರಿ ಭತ್ತದ ಗದ್ದೆ, ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿವೆ. ಕಾಡಾನೆಗಳು ಸಂಚರಿಸುವ ಜಾಗದಲ್ಲಿ ಕಂದಕ ತೋಡಲಾಗಿದೆ. ಕಾಡಾನೆಗಳು ಕಂದಕಕ್ಕೆ ಬಿದ್ದರೆ ಸರ್ಕಾರವೇ ಹೊಣೆ ಎನ್ನುತ್ತಿದ್ದಾರೆ ಗ್ರಾಮಸ್ಥರು.