Vijaypura: ಬೈಕ್‌ನಲ್ಲಿ ಬೆನ್ನಟ್ಟಿದ ಭಜರಂಗದಳ ಕಾರ್ಯಕರ್ತರು; ಕೊನೆಗೆ ಸಿಕ್ಕಿಬಿತ್ತು 8 ಟನ್ ಗೋಮಾಂಸ ತುಂಬಿದ ಲಾರಿ!

Published : Aug 30, 2026, 07:52 PM IST
Vijayapura

ಸಾರಾಂಶ

ವಿಜಯಪುರ ಜಿಲ್ಲೆಯಲ್ಲಿ, ಭಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಲಾರಿಯೊಂದನ್ನು ಬೆನ್ನಟ್ಟಿ ಅಕ್ರಮ ಗೋಮಾಂಸ ಸಾಗಾಟ ಜಾಲವನ್ನು ಬಯಲಿಗೆಳೆದಿದ್ದಾರೆ. ತೆಲಂಗಾಣಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 8 ಟನ್ ಗೋಮಾಂಸವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.

ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ ಜಾಲವೊಂದನ್ನು ಭಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಬೆನ್ನಟ್ಟಿ ಬಯಲಿಗೆಳೆದಿದ್ದಾರೆ. ವಿಜಯಪುರ ನಗರದಿಂದ ಇಂಡಿ ಮಾರ್ಗವಾಗಿ ನೆರೆ ರಾಜ್ಯ ತೆಲಂಗಾಣಕ್ಕೆ ಅಕ್ರಮವಾಗಿ ರವಾನೆಯಾಗುತ್ತಿದ್ದ ಭಾರಿ ಪ್ರಮಾಣದ ಗೋಮಾಂಸವನ್ನು ಭಜರಂಗದಳದ ಕಾರ್ಯಕರ್ತರು ಸಿನಿಮೀಯ ಶೈಲಿಯಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ರಾಜಾರೋಷವಾಗಿ ಸಾಗಾಟ, ಸಿನಿಮೀಯ ಚೇಸ್!

ವಿಜಯಪುರ ನಗರದಿಂದ ಇಂಡಿ ತಾಲೂಕಿನ ಗಡಿ ಮಾರ್ಗವಾಗಿ ಲಾರಿಯೊಂದರಲ್ಲಿ ಅಪಾರ ಪ್ರಮಾಣದ ಗೋಮಾಂಸ ಸಾಗಣೆಯಾಗುತ್ತಿರುವ ಕುರಿತು ಭಜರಂಗದಳದ ಕಾರ್ಯಕರ್ತರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಲಾರಿಯನ್ನು ಬೆನ್ನಟ್ಟಿದ್ದಾರೆ. ಕಂಟೇನರ್ ಲಾರಿಯು ವೇಗವಾಗಿ ತೆರಳುತ್ತಿದ್ದರೂ ಲೆಕ್ಕಿಸದೆ ತಮ್ಮ ದ್ವಿಚಕ್ರ ವಾಹನಗಳಲ್ಲಿ (ಬೈಕ್) ಹಲವು ಕಿಲೋಮೀಟರ್‌ಗಳವರೆಗೆ ಚೇಸ್ ಮಾಡಿದ್ದಾರೆ. ಕೊನೆಗೆ ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಲಾರಿಯನ್ನು ತಡೆದು ನಿಲ್ಲಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಲಾರಿಯಲ್ಲಿ ಪತ್ತೆಯಾಯ್ತು ೮ ಟನ್ ಮಾಂಸ!

ಲಾರಿಯನ್ನು ತಡೆದು ಪರಿಶೀಲಿಸಿದಾಗ ಕಾರ್ಯಕರ್ತರಿಗೆ ಆಘಾತ ಕಾದಿತ್ತು. ಕಂಟೇನರ್ ಒಳಗೆ ಅಂದಾಜು ೮ ಟನ್‌ಗೂ ಹೆಚ್ಚು ಗೋಮಾಂಸವನ್ನು ಅತ್ಯಂತ ಗೋಪ್ಯವಾಗಿ ಹಾಗೂ ಅಕ್ರಮವಾಗಿ ತುಂಬಲಾಗಿತ್ತು. ತಕ್ಷಣವೇ ಕಾರ್ಯಕರ್ತರು ಸ್ಥಳೀಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಜಯಪುರದಿಂದ ನಾಂಪಲ್ಲಿಗೆ ರಫ್ತು!

ಪ್ರಾಥಮಿಕ ತನಿಖೆ ಮತ್ತು ಲಾರಿ ಚಾಲಕನ ವಿಚಾರಣೆಯಿಂದ ಈ ಅಕ್ರಮ ದಂಧೆಯ ಜಾಲ ತೆರೆದುಕೊಂಡಿದೆ. ವಿಜಯಪುರ ನಗರದ ಜೈಲ್ ರಸ್ತೆಯ ನಿವಾಸಿ ಖಾಸಿಂಸಾಬ್ ಮುಲ್ಲಾ ಎಂಬಾತ ಈ ಗೋಮಾಂಸವನ್ನು ಸರಬರಾಜು ಮಾಡುತ್ತಿದ್ದ ಮುಖ್ಯ ರೂವಾರಿಯಾಗಿದ್ದಾನೆ. ಈತ ತೆಲಂಗಾಣ ರಾಜ್ಯದ ನಾಂಪಲ್ಲಿ ವ್ಯಾಪ್ತಿಯ ಮೆಹೆಬೂನ್ ನಗರದ ನಿವಾಸಿ ಇಮ್ರಾನ್ ಶೇಖ್ ಎಂಬಾತನಿಗೆ ಈ ಅಪಾರ ಪ್ರಮಾಣದ ಗೋಮಾಂಸವನ್ನು ಅಕ್ರಮವಾಗಿ ರಫ್ತು ಮಾಡುತ್ತಿದ್ದ ಎಂಬ ಸಂಗತಿ ಬಯಲಾಗಿದೆ.

ಪೊಲೀಸ್ ಕಸ್ಟಡಿಗೆ ಲಾರಿ, ತನಿಖೆ ಚುರುಕು!

ಸ್ಥಳಕ್ಕೆ ದೌಡಾಯಿಸಿದ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು ಗೋಮಾಂಸ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಂಸದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜೈಲ್ ರಸ್ತೆಯ ಖಾಸಿಂಸಾಬ್ ಮುಲ್ಲಾ ಹಾಗೂ ತೆಲಂಗಾಣದ ಇಮ್ರಾನ್ ಶೇಖ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಾಲ ಬೀಸಿದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಸರಬರಾಜಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಕ್ರಮ ಕಸಾಯಿಖಾನೆಗಳು ಮತ್ತು ರಫ್ತು ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಧಾರವಾಡದಲ್ಲಿ ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನ, ಠಾಣೆಗೆ ಧಾವಿಸಿದ ಶಾಸಕ ಬೆಲ್ಲದ್
ಬೆಂಗಳೂರಿಗೆ ಮತ್ತೊಂದು ಟೋಲ್ ಆಧಾರಿತ ಎಲಿವೇಟೆಡ್ ಕಾರಿಡಾರ್! ರಾಗಿಗುಡ್ಡ ಟು ಕನಕಪುರ ರಸ್ತೆ..! ವಿಶೇಷತೆ ಏನು?