ವಿಜಯಪುರ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಏಳು ಕಾರ್ಮಿಕರ ಸಾವು: ಮೃತರ ಕುಟುಂಬಕ್ಕೆ ತಲಾ 7 ಲಕ್ಷ ಪರಿಹಾರ

By Sathish Kumar KHFirst Published Dec 5, 2023, 4:00 PM IST
Highlights

ವಿಜಯಪುರ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಏಳು ಕಾರ್ಮಿಕರ ಮೃತಪಟ್ಟಿದ್ದು, ಸಂತ್ರಸ್ತ ಕುಟುಂಬಕ್ಕೆ ತಲಾ 7 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ವಿಜಯಪುರ (ಡಿ.05): ವಿಜಯಪುರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಸಂಭವಿಸಿರುವ ದುರಂತದಲ್ಲಿ ಮೃತರಾಗಿರುವ ಏಳು ಕಾರ್ಮಿಕರಿಗೂ ತಲಾ 7 ಲಕ್ಷ ರೂ. ಪರಿಹಾರ ಕೊಡಲಾಗುವುದು. ಜೊತೆಗೆ ಗಾಯಾಳುಗಳಿಗೆ ಚಿಕಿತ್ಸೆಗೆಂದು ತಲಾ 50 ಸಾವಿರ ರೂ. ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಭಾರಿ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಕಿಶೋರ್ ಜೈನ್ ಅವರ ಒಡೆತನದ ಈ ಉದ್ಯಮ ಘಟಕದಲ್ಲಿ ಮಿತಿ ಮೀರಿ ತುಂಬಿದ್ದ ಟ್ಯಾಂಕರುಗಳ ಪಿಲ್ಲರ್ ಗಳು ಸೋಮವಾರ ಕುಸಿದು, ಅದರಡಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವರು ಬೆಳಗಾವಿಯಿಂದ ರಾತ್ರಿಯೇ ಇಲ್ಲಿಗೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಮತ್ತು ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಮಧ್ಯರಾತ್ರಿಯವರೆಗೂ ಅವರು ಸ್ಥಳದಲ್ಲೇ ಇದ್ದು ಸೂಕ್ತ ನಿರ್ದೇಶನ ನೀಡಿದರು.ಮಂಗಳವಾರ ಬೆಳಿಗ್ಗೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು. ಎನ್ ಡಿಆರ್ ಎಫ್ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವರನ್ನು ಅಭಿನಂದಿಸಿದರು. ಜೊತೆಗೆ, ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಿದರು. ಅಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಅರ್ಜುನನಿಗೆ ಅನ್ಯಾದ ಸಾವಾಗಿದೆ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

ಇನ್ನು ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಮೃತ ಕಾರ್ಮಿಕರೆಲ್ಲರೂ ಬಿಹಾರದವರು. ಇವರ ಪಾರ್ಥಿವ ಶರೀರಗಳನ್ನು ಬೆಳಗಾವಿ ಅಥವಾ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪಾಟ್ನಾಗೆ ಕಳಿಸಿ ಕೊಡಲಾಗುವುದು. ಬಳಿಕ, ಮೃತ ಕಾರ್ಮಿಕರ  ಊರುಗಳಲ್ಲಿರುವ ಕುಟುಂಬಗಳಿಗೆ ಶವಗಳನ್ನು ತಲುಪಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ವ್ಯವಸ್ಥೆ ಮಾಡಲಾಗಿದೆ. ಮೃತರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ವಿಪತ್ತು ಪರಿಹಾರ ಕಾರ್ಯಾಚರಣೆ ತಂಡಗಳು ಮೃತ ದೇಹಗಳನ್ನು ಹೊರತೆಗೆದಿದ್ದು, ಹೆಚ್ಚಿನ ಶೋಧ ಮುಂದುವರಿದಿದೆ ಎಂದು ತಿಳಿಸಿದರು.

ಮೃತರ ಕುಟುಂಬಗಳಿಗೆ ಕೈಗಾರಿಕೆಯ ಮಾಲೀಕರ ವತಿಯಿಂದ ತಲಾ 5 ಲಕ್ಷ ರೂ. ಮತ್ತು ಸರಕಾರದ ಕಡೆಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ದುರಂತ ಸಂಭವಿಸಿರುವುದು ನಿಜಕ್ಕೂ ನೋವಿನ ವಿಷಯವಾಗಿದೆ. ಜೊತೆಗೆ, ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ಇರದಂತೆ ನೋಡಿಕೊಳ್ಳಲು ಹೆಚ್ಚಿನ ಸುರಕ್ಷಾ ಕ್ರಮಗಳಿಗೆ ಆದ್ಯತೆ ಕೊಡಲಾಗುವುದು. ಜತೆಗೆ, ಈ ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಹೇಳಿದರು. 

ಗ್ಯಾರಂಟಿ ಸರ್ಕಾರಕ್ಕೆ ಫೈನಾನ್ಸ್ ಬೂಸ್ಟರ್ ಕೊಟ್ಟ ಬಿಯರ್ ಪ್ರಿಯರು: 22,500 ಕೋಟಿ ರೂ. ಆದಾಯ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಪಾಲನ್, ಜಿಲ್ಲಾ ಪೊಲೀಸ್ ವರಿಷ್ಠ ಹೃಷಿಕೇಶ ಸೋನಾವಣೆ, ಜಿಪಂ ಸಿಇಒ ರಾಹುಲ್ ಶಿಂದೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಡಿವೈಎಸ್ಸಿ ಬಸವರಾಜ ಯಲಿಗಾರ ಮುಂತಾದವರು ಇದ್ದರು.

click me!