ನದಿಗಳ ಜೋಡಣೆಯಿಂದ ಅಭಿವೃದ್ಧಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Kannadaprabha News   | Asianet News
Published : Aug 21, 2021, 12:43 PM IST
ನದಿಗಳ ಜೋಡಣೆಯಿಂದ ಅಭಿವೃದ್ಧಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಾರಾಂಶ

*   ದೇಶದ ಅಭಿವೃದ್ಧಿ ದೃಷ್ಟಿಯಿಂದ ನದಿಗಳ ಜೋಡಣೆ ಅವಶ್ಯಕ  *   ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಲಿದೆ ಎಂಬ ಆತಂಕ *   ನೀರಿನ ಮಿತ ಬಳಕೆ, ಮರು ಬಳಕೆ ನಮ್ಮ ಮಂತ್ರವಾಗಬೇಕು   

ಹೊಸಪೇಟೆ(ಆ.21):  ವ್ಯಾಜ್ಯ, ಸಮಸ್ಯೆ ಇಲ್ಲದಿರುವ ಹಾಗೂ ಕಾರ್ಯ ಸಾಧುವಾಗುವ ನದಿ ನೀರಿನ ಮೂಲಗಳಿರುವ ಕಡೆಯಲ್ಲೆಲ್ಲ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರು ಸಂಗ್ರಹಿಸುವ ಮತ್ತು ಕೃಷಿ ಇನ್ನಿತರ ಕಾರ್ಯಗಳಿಗೆ ಬಳಸುವ ಕೆಲಸವಾಗಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯವನ್ನು ಶುಕ್ರವಾರ ಸಂಜೆ ವೀಕ್ಷಿಸಿ ಮಾತನಾಡಿದರು. ನದಿಗಳ ಜೋಡಣಾ ಯೋಜನೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಉಪರಾಷ್ಟ್ರಪತಿಗಳು ನದಿಗಳ ಜೋಡಣಾ ಯೋಜನೆ ಜಾರಿಯಾದರೆ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಲಿವೆ. ಇದಕ್ಕೆ ಎಲ್ಲ ರಾಜ್ಯಗಳು ಕೈಜೋಡಿಸಬೇಕಿದೆ ಎಂದರು.

ಈ ಯೋಜನೆ ಜಾರಿಯಾದರೆ ಗೋದಾವರಿ, ಮಹಾನದಿ, ಕೃಷ್ಣ, ಕಾವೇರಿ, ತುಂಗಾಭದ್ರಾ ಸೇರಿದಂತೆ ಇನ್ನಿತರ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುವುದಕ್ಕೆ ತಡೆ ಬೀಳಲಿದೆ. ಈ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕ ಎಂದರು.

ಬೆಂಗಳೂರಿನ HAL ಬಳಿಕ ತುಂಗಭದ್ರಾ ಅಣೆಕಟ್ಟಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ!

ರಾಯಲಸೀಮಾ, ತೆಲಂಗಾಣದ ಪ್ರದೇಶಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ತುಂಬಿರುವುದನ್ನು ನೋಡಿ ಸಂತಸಗೊಂಡಿರುವೆ ಎಂದು ಹೇಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಈ ಭಾಗಗಳ ಜನರು ಮತ್ತು ರೈತರ ಅಕ್ಷಯ ಪಾತ್ರೆಯಾಗಿರುವ ಈ ಜಲಾಶಯ ಕಳೆದ ನಾಲ್ಕು ವರ್ಷಗಳಿಂದ ತುಂಬಿದಂತೆ ಮುಂದಿನ ದಿನಗಳಲ್ಲಿಯೂ ತುಂಬಲಿ. ನಮಗೆಲ್ಲ ಅನ್ನ ನೀಡುವ ಈ ಭಾಗದ ರೈತರು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ನಾನೂ ಕೂಡ ರೈತನ ಮಗ; ಕೃಷಿ ಕೆಲಸಗಳನ್ನು ಮಾಡುತ್ತಲೇ ಉಪ ರಾಷ್ಟ್ರಪತಿಯಂತಹ ಸಂವಿಧಾನದ ಉನ್ನತ ಹುದ್ದೆಗೇರಿರುವೆ. ಮನಸು ಸದಾ ಕೃಷಿ-ಕೃಷಿಕರ ಕಲ್ಯಾಣದ ಬಗ್ಗೆ ಚಿಂತಿಸುತ್ತಿರುತ್ತದೆ ಎಂದರು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಲಿದೆ ಎಂಬ ಆತಂಕವನ್ನು ತಮ್ಮ ಮಾತುಗಳಲ್ಲಿ ವ್ತಕ್ತಪಡಿಸಿದ ಉಪರಾಷ್ಟ್ರಪತಿಗಳು ನೀರಿನ ಮಿತ ಬಳಕೆ, ಮರು ಬಳಕೆ ನಮ್ಮ ಮಂತ್ರವಾಗಬೇಕು ಎಂದರು. ನೀರಿನ ಸಂರಕ್ಷಣೆ, ನೀರಿನ ಸಂಗ್ರಹಣೆ, ವೈಯಕ್ತಿಕವಾಗಿ ಮಳೆ ನೀರು ಕೊಯ್ಲು ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ಅವರ ಪತ್ನಿ ಎಂ. ಉಷಾ ಮತ್ತು ಕುಟುಂಬಸ್ಥರು ಇದ್ದರು.
 

PREV
click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ