Karnataka Rains Effect: ಇನ್ನೂ 2 ತಿಂಗಳು ತರಕಾರಿ ಬೆಲೆ ಇಳಿಯಲ್ಲ..!

By Kannadaprabha NewsFirst Published Dec 12, 2021, 6:15 AM IST
Highlights

*   ಮಳೆಯಿಂದಾಗಿ ಜಮೀನಿನಲ್ಲೇ ಪೂರ್ಣ ಹಾಳಾದ ತರಕಾರಿ
*   ಹೊಸದಾಗಿ ತರಕಾರಿ ಬೆಳೆ ರೈತರ ಕೈಸೇರುವವರೆಗೂ ಇದೇ ಸ್ಥಿತಿ
*   ಕುಸಿದಿದ್ದ ಟೊಮೆಟೋ, ಇತರ ತರಕಾರಿ ಬೆಲೆ ಮತ್ತೆ ಏರಿಕೆ
 

ಬೆಂಗಳೂರು(ಡಿ.12):  ಮಳೆಯಿಂದಾಗಿ(Rain) ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ನಗರಕ್ಕೆ(Bengaluru) ಮತ್ತೆ ತರಕಾರಿ(Vegetable) ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದ್ದು, ಮುಂದಿನ ಎರಡು ತಿಂಗಳು ಇದೆ ಪರಿಸ್ಥಿತಿ ಇರಲಿದೆ. ಗ್ರಾಹಕರು(Customers) ದುಬಾರಿ ಬೆಲೆಗೆ ತರಕಾರಿ ಖರೀದಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ನಿರಂತರ ಮಳೆಯಿಂದಾಗಿ ಕೆಲವು ವಾರಗಳಿಂದ ಎಲ್ಲ ತರಕಾರಿಗಳು ಬೆಲೆ ಗಗನಕ್ಕೇರಿವೆ. ಈ ಏರಿಕೆ ಮತ್ತಷ್ಟು ಕಾಲ ಮುಂದುವರೆಯುವ ಲಕ್ಷಣಗಳಿವೆ. ಮುಖ್ಯವಾಗಿ ಕ್ಯಾಪ್ಸಿಕಂ, ಕ್ಯಾರೆಟ್‌, ನುಗ್ಗೇಕಾಯಿ, ಟೊಮೆಟೋ ಮತ್ತಿತರ ಅಗತ್ಯ ತರಕಾರಿಗಳ ಬೆಲೆ ಕಡಿಮೆ ಆಗಲು ಸುಮಾರು ಒಂದೂವರೆಯಿಂದ ಎರಡು ತಿಂಗಳು ಬೇಕಾಗಬಹುದು. ಏಕೆಂದರೆ, ಮಳೆ ನಿಂತ ನಂತರ ಮತ್ತೆ ಈ ತರಕಾರಿ ಬೆಳೆಯಲು ರೈತರು ಆರಂಭಿಸಬೇಕಿದೆ. ಹೀಗಾಗಿ ಇಳುವರಿ ಮಾರುಕಟ್ಟೆಗೆ(Market) ಬರಲು ಎರಡು ತಿಂಗಳಾದರೂ ಬೇಕಾಗುತ್ತದೆ ಎಂದು ಹೇಳುತ್ತಾರೆ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ.

Untimely Rain Effect: ಶತಕ ದಾಟಿದ ತರಕಾರಿ ಬೆಲೆ: ರೇಟ್‌ ಕೇಳಿ ಹೌಹಾರಿದ ಗ್ರಾಹಕ..!

ಏರಿಕೆಯಾಗಿರುವ ತರಕಾರಿಗಳ ಪೈಕಿ ಟಮೆಟೋ ದರ ಒಂದು ವಾರ ಹಿಂದೆ ದಿಢೀರನೇ ಇಳಿಕೆಯಾಗಿತ್ತು. ಆಗ 4 ದಿನ ಬೇರೆ ಬೇರೆ ಭಾಗಗಳಿಂದ ಗುಣಮಟ್ಟದ ಟೊಮೆಟೋ ಹೇರಳವಾಗಿ ಬಂದಿದ್ದರಿಂದ ಕೇಜಿಗೆ .40 ಆಸುಪಾಸಿಗೆ ಮಾರಾಟವಾಗಿತ್ತು. ನಂತರ ಮತ್ತೆ ಉತ್ಪಾದನೆ ಕುಂಟಿತಗೊಂಡು ಟೊಮೆಟೋ ಸರಬರಾಜು ಕಡಿಮೆಯಾದ ಹಿನ್ನೆಲೆಯಲ್ಲಿ ದರ ಮತ್ತೆ ಹೆಚ್ಚಳವಾಗಿದೆ. ಇದೇ ವೇಳೆ ಉಳಿದ ತರಕಾರಿಗಳ ಪೂರೈಕೆಯೂ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ ನಗರಕ್ಕೆ ತರಕಾರಿ ಪೂರೈಕೆಯಾಗುವ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆ ಮಳೆಯಿಂದಾಗಿ ಹಾಳಾಗಿರುವುದು ಮುಖ್ಯ ಕಾರಣ.

ಇದರ ಜತೆಗೆ ನಗರಕ್ಕೆ ತರಕಾರಿ ಪೂರೈಕೆಯ(Vegetable Supply) ಮತ್ತೊಂದು ಪ್ರಮುಖ ಪ್ರದೇಶವಾದ ತಮಿಳುನಾಡಿನಲ್ಲೂ(Tamil Nadu) ಬೆಳೆ ಅತಿಯಾದ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದ್ದು, ಆ ಭಾಗದಿಂದ ಸದ್ಯಕ್ಕೆ ತರಕಾರಿ ಪೂರೈಕೆ ನಿರೀಕ್ಷಿಸುವ ಸ್ಥಿತಿ ಇಲ್ಲ ಎಂದು ತರಕಾರಿ ವರ್ತಕರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ಹೇಳುತ್ತಾರೆ.

ಚಿಲ್ಲರೆ ದರ ಅಧಿಕ

ಕಲಾಸಿಪಾಳ್ಯದಲ್ಲಿ ಶನಿವಾರ ಚಿಲ್ಲರೆ ರೂಪದಲ್ಲಿ ಗುಣಮಟ್ಟದ ಕೇಜಿ ಟೊಮೆಟೋ .100-120ರವರೆಗೆ ಮಾರಾಟವಾಗಿದೆ. ಅದೇ ರೀತಿ ಕೇಜಿ ಈರುಳ್ಳಿ .35-45, ಬದನೆ .90-110, ಕ್ಯಾರೆಟ್‌ .80-100, ಕ್ಯಾಪ್ಸಿಕಂ .80-100, ಬೀನ್ಸ್‌ .70-85, ಕ್ಯಾಬೀಜ್‌ .60-70, ಆಲೂಗಡ್ಡೆ .40, ನುಗ್ಗೇಕಾಯಿ .260-315, ಹಸಿಮೆಣಸಿನಕಾಯಿ .50-55ಕ್ಕೆ ಗ್ರಾಹಕರು ಖರೀದಿಸುತ್ತಿದ್ದಾರೆ. ಕೊತ್ತಂಬರಿ, ಮೆಂತ್ಯ, ಪುದಿನ ಸೋಪ್ಪುಗಳು ಒಂದು ಕಟ್ಟಿನ ಬೆಲೆ .15-25 ಇತ್ತು. ಕೆಲವೆಡೆ ಚಿಲ್ಲರೆ ವ್ಯಾಪಾರಿಗಳು ಮನಬಂದ ಬೆಲೆಗೆ ತರಕಾರಿ ಮಾರಾಟ ಮಾಡಿದ್ದು ಸಹ ಕಂಡು ಬಂತು.

Rain Effect: ಕೇಜಿಗೆ 360 ರೂ.: ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಗ್ರಾಹಕ..!

ಟೊಮೆಟೋ ಪೈಕಿ ಉತ್ತಮ ಗುಣಮಟ್ಟದ್ದು ಕೇಜಿ ಸಗಟು ಬೆಲೆ .70-75, ಮಧ್ಯಮ .60-65 ಹಾಗೂ ಸಾಧಾರಣ .30-40 ಇದೆ. ಆದರೆ, ಚಿಲ್ಲರೆ ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಎಲ್ಲ ತರಕಾರಿಗಳು .100ಕ್ಕೂ ಹೆಚ್ಚು ಮೊತ್ತವನ್ನು ಪ್ರತಿ ಕೇಜಿಗೆ ಗ್ರಾಹಕರು ತೆತ್ತಬೇಕಾಗಿದೆ. ಇಲ್ಲಿ ಸಾಗಾಣೆ ವೆಚ್ಚ, ಟೊಮೆಟೋ ಗುಣಮಟ್ಟದ ಆಧಾರದಲ್ಲಿ ವ್ಯಾಪಾರಿಗಳು ಚಿಲ್ಲರೆ ಬೆಲೆ ನಿಗದಿಪಡಿಸುವುದರಿಂದ ದರದಲ್ಲಿ ನಿತ್ಯ ಬದಲಾವಣೆಗಳು ಆಗುತ್ತಿವೆ. ಇದರ ಬಿಸಿ ಜನರಿಗೆ ತಟ್ಟುತ್ತಿದೆ.

ಮಳೆ ಕಡಿಮೆ ಆಗಿದ್ದರಿಂದ ಮುಂದಿನ 3-4 ವಾರಗಳಲ್ಲಿ ಬೀನ್ಸ್‌, ಬಿಟ್‌ರೂಟ್‌, ಮೂಲಂಗಿ ಹಾಗೂ ಸೊಪ್ಪುಗಳ ಪೂರೈಕೆ ಹೆಚ್ಚಾಗಿ ದರ ಕಡಿಮೆಯಾಗಬಹುದು. ರೈತರು ಬೆಳೆ ಬೆಳೆದು ಗ್ರಾಹಕರಿಗೆ ಒದಗಿಸಬೇಕಾದ ಅನಿವಾರ್ಯತೆ ಇದೆ.

ದರಪಟ್ಟಿ(ಕೇಜಿ) ತರಕಾರಿಗಳು ಹಾಪ್‌ಕಾಮ್ಸ್‌

ಟೊಮೆಟೋ 95
ಈರುಳ್ಳಿ 35
ಬದನೆ 103
ಕ್ಯಾರೇಟ್‌ 94
ಕ್ಯಾಪ್ಸಿಕಂ 105
ಮೂಲಂಗಿ 86
ಬೀನ್ಸ್‌ 82
ಕ್ಯಾಬೀಜ್‌ 67
ಆಲೂಗಡ್ಡೆ 40
ನುಗ್ಗೇಕಾಯಿ 350
ಹಸಿಮೆಣಸಿನಕಾಯಿ 64
ಕೊತ್ತಂಬರಿ 60
ಪುದಿನ 78 10
ಮೆಂತ್ಯ 120
ಪಾಲಾಕ್‌ 110
 

click me!