ವೀರಶೈವ ಲಿಂಗಾಯತ ಉಪ ಪಂಗಡಗಳು ಒಂದಾಗಬೇಕು: ಸಂಸದ ರಾಘವೇಂದ್ರ

By Kannadaprabha NewsFirst Published Sep 14, 2024, 10:46 PM IST
Highlights

ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳು ಒಂದಾಗಬೇಕು. ಸಮಾಜಕ್ಕೆ ಸಂಕಷ್ಟ ಒದಗಿದಾಗ ಎಲ್ಲರೂ ವೀರಭದ್ರರಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ಶಿವಮೊಗ್ಗ (ಸೆ.14): ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳು ಒಂದಾಗಬೇಕು. ಸಮಾಜಕ್ಕೆ ಸಂಕಷ್ಟ ಒದಗಿದಾಗ ಎಲ್ಲರೂ ವೀರಭದ್ರರಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ನಗರದ ಚೌಕಿ ಮಠದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ -2024 ಉದ್ಘಾಟಿಸಿ ಅವರು ಮಾತನಾಡಿ, ವೀರಭದ್ರ ದೇವರು ದುರ್ಬಲರಿಗೆ ಶಕ್ತಿ ಕೊಡುವ ವನು. ವೀರಭದ್ರ ದೇವರ ಹೆಸರೇ ರೋಮಾಂಚನಗೊಳಿಸುತ್ತದೆ. ಇಂದಿನ ಈ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರುಗಳು ಮತ್ತು ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಸಾನಿಧ್ಯ ವಹಿಸಿ ನಮಗೆಲ್ಲ ಆಶೀರ್ವಾದ ಮಾಡಿದ್ದಾರೆ. 

ತರಳಬಾಳು ಶ್ರೀಗಳು ವೀರರಾಗಿ ಬೆಕ್ಕಿನಕಲ್ಮಠ ಶ್ರೀಗಳು ಭದ್ರರಾಗಿ ನಮ್ಮ ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ಮಾಡಿ ಶಕ್ತಿ ತುಂಬುತ್ತಿದ್ದಾರೆ ಎಂದರು. ನಮ್ಮ ಸಮಾಜ ಕೂಡ ಶ್ರದ್ಧಾಭಕ್ತಿಯಿಂದ ವೀರಭದ್ರ ದೇವರಿಗೆ ನಡೆದುಕೊಳ್ಳುತ್ತದೆ. ಸಮಾಜದ ಸಂಘಟನೆ ಇನ್ನಷ್ಟು ಬೆಳೆಯ ಬೇಕು. ಸಮುದ್ರದ ರೀತಿಯಲ್ಲಿ ಎಲ್ಲರೂ ಒಂದಾಗಬೇಕು. ಅನೇಕ ಶಕ್ತಿಗಳು ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳನ್ನು ಒಡೆಯಲು ನೋಡುತ್ತಿದೆ. ಆದರೂ ಕೂಡ ಸಮಾಜ ಒಂದಾಗಿ ನಿಲ್ಲುತ್ತದೆ ಎಂಬ ಆಶಯ ನನಗಿದೆ ಎಂದರು. ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಗಳಾಗಿದ್ದಾಗ ರಾಜ್ಯ ವೀರಶೈವ ಲಿಂಗಾಯತ ಸಮಾಜ ಒಂದಾಗಿತ್ತು. 

Latest Videos

ಎಚ್‌.ಡಿ.ಕುಮಾರಸ್ವಾಮಿ ಕಡ್ಡಿ ಇಲ್ಲದೆಯೇ ಬೆಂಕಿ ಹಚ್ತಾರೆ: ಶಾಸಕ ಬಾಲಕೃಷ್ಣ ಕಿಡಿ

ರಾಜಕೀಯ ಉದ್ದೇಶದಿಂದ ಕೆಲವರು ಲಿಂಗಾಯತ ಸಮಾಜವನ್ನು ಬೇರ್ಪಡಿಸಲು ಹೊರಟರು. 95 ವರ್ಷದ ಶಾಮನೂರು ಶಿವಶಂಕರಪ್ಪನವರು ಮುಖ್ಯಮಂತ್ರಿ ಯಾಗಲು ಹೊರಟಿದ್ದಾರೆ. ಆದರೆ, ನಮ್ಮ ಸಮಾಜವನ್ನು ಒಗ್ಗೂಡಿಸಿದ ಜಾತ್ಯಾತೀತ ಗುರುಗಳಾದ ಸಿರಿಗೆರೆ ಶ್ರೀಗಳು ಮರಿಸ್ವಾಮಿಗಳನ್ನು ನೇಮಿಸಬೇಕೆಂದು ಪಟ್ಟು ಹಿಡಿಯುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ನಮ್ಮ ಸಮಾಜ ಪ್ರಬಲವಾಗಿದ್ದರೂ ಸಂಘಟನೆಯಲ್ಲಿ ಹಿಂದುಳಿದಿದ್ದೇವೆ ಎಂಬ ಕಾರಣಕ್ಕೆ ಯುವಕರೆಲ್ಲ ಸೇರಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹುಟ್ಟುಹಾಕಿದ್ದಾರೆ. ಇದನ್ನು ಬೆಳೆಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಮೆರವಣಿಗೆ ರುದ್ರಾಭಿಷೇಕ ಮತತು ಖ್ಯಾತ ಚಿತ್ರ ಕಲಾವಿದರಾದ ಕಲಾ ಸಿಂಧೂರ ಡಾ.ಆರ್.ಎಸ್.ರಾಜೇಶ್ ಬೆಂಗಳೂರು ಇವರಿಂದ ಹುಮಾಯೂನ್ ಹರ್ಲಾಪುರ್ ತಂಡದವರ ವಚನಗಳ ಭಾವಕ್ಕೆ ಚಿತ್ರ ಮತ್ತು ಶಿಲ್ಪವೈಭವ ಎಂಬ ಆಕರ್ಷಕ ಕಾರ್ಯಕ್ರಮ ನಡೆಯಿತು.

ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ, ಜೆಡಿಎಸ್‌ನವರಿಂದಲೇ ಕೋಮುಗಲಭೆ: ಸಚಿವ ಭೋಸರಾಜ್

ವೇದಿಕೆಯ ಅಧ್ಯಕ್ಷ ಶಿವರಾಜ್ ಬಿ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ವೀ.ಲಿಂ.ಸಂ.ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ, ಪ್ರಮುಖರಾದ ಆಯನೂರು ಮಂಜುನಾಥ್, ಎಚ್.ಸಿ. ಯೋಗೀಶ್, ಸಿ.ಪಿ. ಈರೇಶ್ ಗೌಡ್ರು, ರುದ್ರಮುನಿ ಸಜ್ಜನ್, ಬಳ್ಳೆಕೆರೆ ಸಂತೋಷ್, ಶಾರದಾ ಜಯ್ಯಣ್ಣ, ಅನಿತಾ ರವಿಶಂಕರ್, ರಾಜಶೇಖರ್, ಅಂಜಿ ರುದ್ರೇಶ್ ಮತ್ತಿತರರು ಇದ್ದರು.

click me!