
ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ನಡೆದಿರುವ ಬೆಳವಣಿಗೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಜಗದ್ಗುರು ವಚನಾನಂದ ಸ್ವಾಮೀಜಿಗಳನ್ನು ಪೀಠದ ಟ್ರಸ್ಟ್ ಮುಖಂಡರು ಪದಚ್ಯುತಿಗೊಳಿಸಿರುವುದು ಧಾರ್ಮಿಕ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪದಚ್ಯುತಿ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ವಚನಾನಂದ ಸ್ವಾಮೀಜಿಗಳು, “ನನ್ನ ಉಚ್ಚಾಟನೆ ಹಾಸ್ಯಾಸ್ಪದವಾಗಿದ್ದು, ಇದು ವ್ಯವಸ್ಥಿತ ಷಡ್ಯಂತ್ರದ ಫಲ” ಎಂದು ಆರೋಪಿಸಿದರು. ಟ್ರಸ್ಟ್ನ ಕಾರ್ಯವೈಖರಿ ಕುರಿತು ಲೆಕ್ಕಪತ್ರ ಕೇಳಿದ್ದೇ ತಮ್ಮ ವಿರುದ್ಧ ಕ್ರಮಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದರು. “ಇದು ಧರ್ಮಯುದ್ಧ, ಕೌರವರು ಮಾಡುತ್ತಿರುವ ಕೆಲಸದಂತಿದೆ” ಎಂದು ಕಿಡಿಕಾರಿದ ಅವರು, ಭಕ್ತರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪದಚ್ಯುತಿ ಸುದ್ದಿ ಹರಡುತ್ತಿದ್ದಂತೆಯೇ ಮಠದ ಗೇಟ್ ತೆರೆಯುತ್ತಿದ್ದಂತೆ ಭಕ್ತರು ತಂಡೋಪತಂಡವಾಗಿ ಮಠದ ಆವರಣಕ್ಕೆ ಆಗಮಿಸಿದರು. ಟ್ರಸ್ಟಿಗಳು ತೆರಳಿದ ನಂತರ, ಭಕ್ತರು ಮಠದ ಆವರಣವನ್ನು ನೀರು ಹಾಕಿ ಶುಚಿಗೊಳಿಸಿದರು. ಹರನ ಹಾಗೂ ಮಹಾಂತ ಗದ್ದುಗೆಗೆ ಭಕ್ತಿ ಸಲ್ಲಿಸಿ, ಶ್ರೀಗಳ ಪರ ಬೆಂಬಲ ಸೂಚಿಸಿದರು. ವಚನಾನಂದ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯೂ ಇದೆ.
ಈ ಬೆಳವಣಿಗೆಯ ನಡುವೆ ಹಲವು ರಾಜಕೀಯ ಮುಖಂಡರು ಮಠಕ್ಕೆ ಭೇಟಿ ನೀಡಿದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ ಅರುಣ್ ಪೂಜಾರ್ ಹಾಗೂ ಬಿಜೆಪಿ ಮುಖಂಡ ಬಿ.ಜಿ. ಅಜಯಕುಮಾರ್ ಸೇರಿದಂತೆ ಹಲವರು ಮಠಕ್ಕೆ ಆಗಮಿಸಿ ಪರಿಸ್ಥಿತಿ ಪರಿಶೀಲಿಸಿದರು.
ಮಠದ ಸುತ್ತಮುತ್ತ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆ ತೆರವಾದ ಬಳಿಕ, ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಭಕ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ್ ಹಾಗೂ ಪಂಚಮಸಾಲಿ ಸಮಾಜದ ಹಲವು ಮುಖಂಡರು ಭಾಗವಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, “ಹಿಂದಿನ ಬಾರಿ ಸಿದ್ದಲಿಂಗ ಶ್ರೀಗಳ ಉಚ್ಚಾಟನೆಗೆ ನೀವು ಯಶಸ್ವಿಯಾಗಿದ್ದೀರಿ. ಆದರೆ ಈ ಬಾರಿ ಅದು ಸಾಧ್ಯವಾಗುವುದಿಲ್ಲ. ಲೆಕ್ಕ ಕೊಡಲು ನೀವು ಏಕೆ ಹೆದರುತ್ತೀರಾ?” ಎಂದು ಪ್ರಶ್ನಿಸಿದರು. “ನಮ್ಮ ಗುರುಗಳ ಉಚ್ಚಾಟನೆ ಮಾಡಿದವರಿಗೆ ಧಿಕ್ಕಾರ” ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸಭೆಯಲ್ಲಿ ಮಾತನಾಡಿ, ಟ್ರಸ್ಟಿ ಚಂದ್ರಶೇಖರ ಪೂಜಾರ್ ವಿರುದ್ಧ ವಾಗ್ದಾಳಿ ನಡೆಸಿದರು. “ಹಿಂದಿನ ಸಭೆಗಳಲ್ಲಿ ಅವ್ಯವಹಾರ ನಡೆದಿರುವುದು ಸತ್ಯ ಎಂದು ಬಾವಿ ಬೆಟ್ಟಪ್ಪ ಹೇಳಿದ್ದರು. ನಾಲ್ಕು ಬ್ಯಾಂಕ್ ಖಾತೆಗಳಿದ್ದಲ್ಲಿ ಈಗ ಹದಿನಾಲ್ಕು ಖಾತೆಗಳು ಇರುವ ಮಾಹಿತಿ ಬಂದಿದೆ. ಹಗರಿಬೊಮ್ಮನಹಳ್ಳಿ, ಬಳ್ಳಾರಿ, ಕೊಪ್ಪಳ, ಶಿಗ್ಗಾಂವಿ ಭಾಗಗಳಲ್ಲಿ ಆಸ್ತಿಗಳಿವೆ ಎಂದು ತಿಳಿದುಬಂದಿದೆ” ಎಂದು ಆರೋಪಿಸಿದರು.
“ವಚನಾನಂದ ಶ್ರೀಗಳು ಪಂಚಮಸಾಲಿ ಪೀಠದ ಜಗದ್ಗುರು. ಜೀವಿತಾವಧಿ ತನಕ ಅವರು ಆಚಾರ-ವಿಚಾರಗಳನ್ನು ಮುಂದುವರಿಸುತ್ತಾರೆ. ರಾಜಕೀಯದಲ್ಲಿ ಪಕ್ಷವಿರೋಧಿ ಚಟುವಟಿಕೆ ಮಾಡಿದರೆ ಉಚ್ಚಾಟನೆ ಮಾಡಬಹುದು, ಆದರೆ ಮಠದ ವಿಚಾರದಲ್ಲಿ ಅದು ಅನ್ವಯಿಸುವುದಿಲ್ಲ. ಶ್ರೀಗಳ ಉಚ್ಚಾಟನೆ ಸಂಪೂರ್ಣ ತಪ್ಪಾಗಿದೆ, ಪಂಚಮಸಾಲಿ ಸಮಾಜ ಇದನ್ನು ಒಪ್ಪುವುದಿಲ್ಲ” ಎಂದು ಹೇಳಿದರು.
ಇನ್ನೂ ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, “ಇಂದು ಶ್ರೀಗಳ ಉಚ್ಚಾಟನೆ ಮಾಡಲು ಬಂದವರು ಕಳ್ಳರು. ಅವರ ಆದೇಶ ಟಿಸ್ಯೂ ಪೇಪರ್ನಂತಿದ್ದು, ಅದಕ್ಕೆ ಧಿಕ್ಕಾರ” ಎಂದು ಕಿಡಿಕಾರಿದರು.
ಈ ಘಟನೆಯ ನಂತರ ಮಠದ ಸುತ್ತಮುತ್ತ ಉದ್ವಿಗ್ನ ವಾತಾವರಣ ಮುಂದುವರಿದಿದ್ದು, ಭಕ್ತರು ಮತ್ತು ಟ್ರಸ್ಟ್ ನಡುವೆ ಭಿನ್ನಾಭಿಪ್ರಾಯ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಒಟ್ಟಿನಲ್ಲಿ, ಹರಿಹರ ಪಂಚಮಸಾಲಿ ಪೀಠದಲ್ಲಿ ನಡೆದಿರುವ ಈ ಬೆಳವಣಿಗೆ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭಕ್ತರ ಬೆಂಬಲ ಮತ್ತು ಟ್ರಸ್ಟ್ನ ಕ್ರಮಗಳ ನಡುವೆ ಉಂಟಾದ ಸಂಘರ್ಷ ಮುಂದಿನ ಬೆಳವಣಿಗೆಗಳಿಗೆ ದಿಕ್ಕು ನೀಡಲಿದೆ.