ಬೆಂಗಳೂರು: ಸಿಗರೇಟ್ ಸೇದುತ್ತಿದ್ದ ಯುವತಿ ಮತ್ತು ಗೆಳೆಯರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಪುಂಡರ ಗುಂಪು!

Published : Apr 13, 2026, 05:51 PM IST
cigarettes

ಸಾರಾಂಶ

ಬೆಂಗಳೂರಿನ ಕನಕನಗರದಲ್ಲಿ ಯುವತಿ ಸೇರಿದಂತೆ ಮೂವರ ಮೇಲೆ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಕ್ರೂರವಾಗಿ ಹಲ್ಲೆ ನಡೆಸಿದೆ. ನಶೆಯಲ್ಲಿದ್ದರೆನ್ನಲಾದ ಆರೋಪಿಗಳು ನಡೆಸಿದ ಈ ದೌರ್ಜನ್ಯದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು: ನಗರದ ಡಿಜೆ ಹಳ್ಳಿ ವ್ಯಾಪ್ತಿಯ ಕನಕನಗರ ಪ್ರದೇಶದಲ್ಲಿ ಯುವಕರ ಗುಂಪೊಂದು ಯುವತಿ ಸೇರಿದಂತೆ ಮೂವರ ಮೇಲೆ ನಡೆಸಿದ ಕ್ರೂರ ಹಲ್ಲೆ ಘಟನೆ ಬೆಳಕಿಗೆ ಬಂದಿದ್ದು, ನಗರದಲ್ಲಿ ಪುಂಡರ ಹಾವಳಿ ಮಿತಿಮೀರಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಎರಡು ದಿನಗಳ ಹಿಂದೆ ಕನಕನಗರದ ಆರ್‌ಟಿ ನಗರ ಸಮೀಪದ ಕೆಫೆ ಮುಂಭಾಗದಲ್ಲಿ ಈ ದುರ್ಘಟನೆ ನಡೆದಿದೆ. ಯುವತಿ ಹಾಗೂ ಇಬ್ಬರು ಯುವಕರು ಅಂಗಡಿ ಮುಂದೆ ನಿಂತು ಸಿಗರೇಟ್ ಸೇದುತ್ತಿದ್ದ ವೇಳೆ, ಅಲ್ಲೇ ಇದ್ದ ಸ್ಥಳೀಯ 7–8 ಜನ ಯುವಕರ ಗುಂಪು ಅವರೊಂದಿಗೆ ಮಾತಿನ ಚಕಮಕಿ ಆರಂಭಿಸಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ವಾಗ್ವಾದ ಕ್ಷಣಾರ್ಧದಲ್ಲಿ ಗಲಾಟೆಗೆ ತಿರುಗಿದೆ.

ಮಾತಿನ ಚಕಮಕಿ ತೀವ್ರಗೊಂಡು, ಯುವಕರ ಗುಂಪು ಏಕಾಏಕಿ ಮೂವರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ಯುವತಿಗೆ ಗಂಭೀರ ಗಾಯವಾಗಿದ್ದು, ಆಕೆಯ ಬಾಯಿಂದ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ಅಲ್ಲದೆ, ದಾಳಿ ನಡೆಸಿದವರು ಆಕೆಯ ಮೊಬೈಲ್ ಫೋನ್‌ನನ್ನೂ ಒಡೆದು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ನಶೆಯಲ್ಲಿದ್ದ ಆರೋಪಿಗಳು

ಪ್ರಾಥಮಿಕ ಮಾಹಿತಿಯ ಪ್ರಕಾರ, ಹಲ್ಲೆ ನಡೆಸಿದ ಯುವಕರು ನಶೆಯಲ್ಲಿದ್ದರು ಎಂದು ಶಂಕಿಸಲಾಗಿದೆ. ಯಾವುದೇ ಕಾರಣವಿಲ್ಲದೆ ಅಕ್ರಮವಾಗಿ ವರ್ತಿಸಿ, ಸಾರ್ವಜನಿಕ ಸ್ಥಳದಲ್ಲೇ ದೌರ್ಜನ್ಯ ಎಸಗಿರುವುದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.

ವಿಡಿಯೋ ಆಧಾರದಲ್ಲಿ ತನಿಖೆ

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರ ಆಧಾರದಲ್ಲಿ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಹಲ್ಲೆಗೊಳಗಾದವರು ಯಾರು ಹಾಗೂ ಹಲ್ಲೆ ನಡೆಸಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ದೂರು ದಾಖಲಾಗಿಲ್ಲ

ಘಟನೆ ಗಂಭೀರ ಸ್ವರೂಪದ್ದಾಗಿದ್ದರೂ, ಹಲ್ಲೆಗೆ ಒಳಗಾದವರು ಇದುವರೆಗೆ ಯಾವುದೇ ಲಿಖಿತ ದೂರು ನೀಡಿಲ್ಲ ಎಂಬುದು ತಿಳಿದುಬಂದಿದೆ. ಆದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸ್ವಯಂಪ್ರೇರಿತವಾಗಿ ತನಿಖೆ ಮುಂದುವರೆಸುತ್ತಿದ್ದಾರೆ.

ಹಾಡಹಗಲೇ ನಡೆದ ಈ ದೌರ್ಜನ್ಯ ಘಟನೆ ಬೆಂಗಳೂರಿನಲ್ಲಿ ಸಾರ್ವಜನಿಕ ಸುರಕ್ಷತೆ ಕುರಿತಾಗಿ ಪ್ರಶ್ನೆಗಳನ್ನು ಎಬ್ಬಿಸಿದೆ. ಇಂತಹ ಪುಂಡಾಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಭಾರತದ ನರ್ಸಿಂಗ್‌ಗೆ ಪ್ರಪಂಚದಾದ್ಯಂತ ಬೇಡಿಕೆ: ಸಚಿವ ದಿನೇಶ್‌ ಗುಂಡೂರಾವ್‌
ನಾನು ಅಬ್ದುಲ್‌ ಜಬ್ಬಾರ್‌ ಹೆಸರೆತ್ತಿ ಆರೋಪ, ಟೀಕೆ ಮಾಡಿಲ್ಲ: ಸಲೀಂ ಅಹಮದ್ ತಿರುಗೇಟು