
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಇತಿಹಾಸದ ಪುಟಗಳಿಗೆ ಹೊಸದೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ. ಹೊನ್ನಾವರ ತಾಲೂಕಿನ ಕಡತೋಕೆ ಗ್ರಾಮದ ಪ್ರಸಿದ್ಧ ಸ್ವಯಂಭೂದೇವ (ಸ್ವಯಂಭೇಶ್ವರ) ದೇಸ್ಥಾನದಲ್ಲಿರುವ ಪ್ರಾಚೀನ ಶಿಲಾಶಾಸನವನ್ನು ಮರು ಅಧ್ಯಯನಕ್ಕೊಳಪಡಿಸಿದಾಗ, ಜಿಲ್ಲೆಯ ಇತಿಹಾಸ ಸಂಶೋಧಕರಾದ ಶ್ಯಾಮಸುಂದರ ಗೌಡ ಅಂಕೋಲಾ ಅವರು ಚಾರಿತ್ರಿಕ ಪ್ರಾಮುಖ್ಯತೆಯುಳ್ಳ ಅತ್ಯಂತ ಮಹತ್ವದ ಸತ್ಯವೊಂದನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಇದುವರೆಗೆ ಶಾಸನದಲ್ಲಿ ಉಲ್ಲೇಖಿತವಾಗಿದ್ದ “ಕಡತೋಕೆಯ ದೇವರ್” ಎಂದರೆ ದೇವಾಲಯದ ಆರಾಧ್ಯ ದೈವ ಸ್ವಯಂಭೂದೇವರು ಎಂದೇ ನಂಬಲಾಗಿತ್ತು. ಆದರೆ, ಇತ್ತೀಚಿನ ಆಳವಾದ ಸಂಶೋಧನೆಯ ಪ್ರಕಾರ, ಆ ಪದವು ದೇವಸ್ಥಾನದ ಮೂರ್ತಿಯನ್ನು ಉಲ್ಲೇಖಿಸದೆ, ಆ ಕಾಲದಲ್ಲಿ ಕಡತೋಕೆಯಲ್ಲಿದ್ದ ಪ್ರತಿಷ್ಠಿತ ಸ್ವರ್ಣವಲ್ಲಿ ಮಠದ ಗುರು ಪರಂಪರೆಯ 26ನೇ ಯತಿಗಳಾಗಿದ್ದ ಶ್ರೀ ವಿಶ್ವವಂದ್ಯ ಸರಸ್ವತೀ ಸ್ವಾಮೀಜಿ ಅವರನ್ನು ಸೂಚಿಸುತ್ತದೆ ಎಂಬುದು ಸಾಧಾರಣವಾಗಿ ಸಾಬೀತಾಗಿದೆ.
ಈ ಕಡತೋಕೆ ಶಾಸನದಲ್ಲಿ ಯಾವುದೇ ನಿರ್ದಿಷ್ಟ ವರ್ಷ ಅಥವಾ ಸ್ಪಷ್ಟ ಕಾಲದ ಉಲ್ಲೇಖಗಳಿರಲಿಲ್ಲ. ಈ ಕಾರಣದಿಂದಾಗಿ ಇತಿಹಾಸಕಾರರು ಇದನ್ನು 11ನೇ ಅಥವಾ 12ನೇ ಶತಮಾನದ ಶಾಸನವೆಂದು ಸ್ಥೂಲವಾಗಿ ಪರಿಗಣಿಸಿದ್ದರು. ಆದರೆ ಸಂಶೋಧಕ ಶ್ಯಾಮಸುಂದರ ಗೌಡ ಅವರು ಈ ಶಾಸನವನ್ನು ಸಮೀಪದ ಕೆಕ್ಕಾರ ಗ್ರಾಮದ ಶಾಸನದೊಂದಿಗೆ ಅಕ್ಷರಶಃ ಹೋಲಿಕೆ ಮಾಡಿ ತನಿಖೆ ನಡೆಸಿದ್ದಾರೆ.
ಈ ಸೂಕ್ಷ್ಮ ಅಧ್ಯಯನದಲ್ಲಿ ಒಂದು ರೋಚಕ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಕಡತೋಕೆ ಮತ್ತು ಕೆಕ್ಕಾರ ಎರಡೂ ಶಾಸನಗಳನ್ನು ‘ಚಂದ್ರನ ಕೇಶವ’ ಎಂಬ ಒಬ್ಬನೇ ಲಿಪಿಕಾರ (ಬರಹಗಾರ) ಕೆತ್ತಿದ್ದಾನೆ. ಕೆಕ್ಕಾರ ಶಾಸನವು ಶಕ ವರ್ಷ 1000 ಅಂದರೆ ಕ್ರಿ.ಶ. 1078 ಕ್ಕೆ ಸೇರಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಲಿಪಿಕಾರ ಚಂದ್ರನ ಕೇಶವನ ಸಕ್ರಿಯ ಕಾರ್ಯಾವಧಿಯನ್ನು ಆಧರಿಸಿ, ಕಡತೋಕೆ ಶಾಸನವು ಕ್ರಿ.ಶ. 1075 ರಿಂದ 1090 ರ ನಡುವಿನ ಅವಧಿಯಲ್ಲಿ ರಚನೆಯಾಗಿರಬಹುದು ಎಂಬ ನಿಖರ ಕಾಲನಿರ್ಣಯವನ್ನು ಪ್ರಸ್ತುತಪಡಿಸಲಾಗಿದೆ.
ಶಾಸನದ ಆರಂಭಿಕ ಭಾಗದಲ್ಲಿ ದಾನ ಸ್ವೀಕರಿಸಿದವರನ್ನು ಶ್ಲಾಘಿಸುವ ಸಾಲುಗಳಿವೆ. ಅದರಲ್ಲಿ, “ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನಾನುಷ್ಠಾನ, ಜಪ, ಸಮಾಧಿ ಹಾಗೂ ಶೀಲ” ಮೊದಲಾದ ಉನ್ನತ ಸದ್ಗುಣಗಳಿಂದ ಸಂಪನ್ನರಾದ 'ಶ್ರೀಮತ್ ಕಡತೋಕೆಯ ದೇವರು' ಎಂದು ಸಂಬೋಧಿಸಲಾಗಿದೆ.
ಈ ರೀತಿಯ ತಪೋನಿಷ್ಠೆಯ ವರ್ಣನೆಗಳು ಕಲ್ಲಿನ ಮೂರ್ತಿಗಾಗಲಿ ಅಥವಾ ದೇವಸ್ಥಾನದ ದೇವರಿಗಾಗಲಿ ಅನ್ವಯಿಸುವುದಿಲ್ಲ. ಇವು ಕಠಿಣ ಆಧ್ಯಾತ್ಮಿಕ ಸಾಧನೆ ಮಾಡುವ ಆಚಾರ್ಯರು, ಮಹಾ ಯತಿಗಳು ಅಥವಾ ಮಠಾಧೀಶರ ಗುಣಲಕ್ಷಣಗಳಾಗಿವೆ. ಇದರಿಂದಾಗಿ, ಅಂದಿನ ಅಧಿಕಾರಿಗಳಾಗಿದ್ದ ಭೋಗವರ್ಗ್ಗಡೆ ಮತ್ತು ಇಡುಕವರ್ಗ್ಗಡೆ ಅವರು ನೀಡಿದ ದಾನವು ದೇವಸ್ಥಾನಕ್ಕಲ್ಲ, ಬದಲಿಗೆ ಅಲ್ಲಿ ನೆಲೆಸಿದ್ದ ಶ್ರೇಷ್ಠ ಯತಿವರ್ಯರಿಗೆ ಸಂದಿದ್ದಾಗಿದೆ ಎಂಬುದು ನಿಚ್ಚಳವಾಗುತ್ತದೆ ಎಂದು ಸಂಶೋಧಕರು ವಿಶ್ಲೇಷಣೆ ನೀಡಿದ್ದಾರೆ.
ಅಂದಿನ ಧಾರ್ಮಿಕ ಸಂಸ್ಥೆಯ ಸುಸೂತ್ರ ನಿರ್ವಹಣೆ, ಅಲ್ಲಿಗೆ ಬರುವ ಯಾತ್ರಿಕರ ಆತಿಥ್ಯ ಹಾಗೂ ದೈನಂದಿನ ವ್ಯವಸ್ಥೆಗಳಿಗೆ ಶಾಶ್ವತವಾದ ಆರ್ಥಿಕ ಭದ್ರತೆ ಕಲ್ಪಿಸುವುದು ಈ ದಾನದ ಮುಖ್ಯ ಉದ್ದೇಶವಾಗಿತ್ತು. ಜಳಿವಳಿ ಪ್ರಾಂತ್ಯದ ಉನ್ನತಾಧಿಕಾರಿಗಳಾದ ‘ಭೋಗವೆರ್ಗ್ಗಡೆ’ ಹಾಗೂ ‘ಇಡುಕವೆರ್ಗ್ಗಡೆ’ ಎಂಬುವವರು ಭೂಮಿ, ಗದ್ಯಾಣ (ಅಂದಿನ ಚಿನ್ನದ ನಾಣ್ಯ), ಭತ್ತ ಹಾಗೂ ಇತರ ಆಸ್ತಿಪಾಸ್ತಿಗಳನ್ನು ದಾನವಾಗಿ ನೀಡಿರುವುದನ್ನು ಈ ಶಾಸನವು ಅತಿ ವಿವರವಾಗಿ ದಾಖಲಿಸಿದೆ.
ಪ್ರಸಿದ್ಧ 'ಜ್ಞಾನದೀಪಿಕಾ' ಗ್ರಂಥದಲ್ಲಿ ಲಭ್ಯವಿರುವ ಮಠದ ಗುರು ಪರಂಪರೆಯ ಮಾಹಿತಿಯ ಪ್ರಕಾರ, ಈ ಶಾಸನ ರಚನೆಯಾಗುವ ಕಾಲಕ್ಕೆ ಕಡತೋಕೆಯಲ್ಲಿ ಮಠವು ಅತ್ಯಂತ ಸಕ್ರಿಯವಾಗಿ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ಪೀಠಾಧೀಶರಾಗಿದ್ದವರು ಗುರು ಪರಂಪರೆಯ 26ನೆಯವರಾದ ಶ್ರೀ ವಿಶ್ವವಂದ್ಯ ಸರಸ್ವತೀಗಳು. ಆದ್ದರಿಂದ ಅಧಿಕಾರಿಗಳು ದಾನ ನೀಡಿದ್ದು ಇವರಿಗೇ ಎಂಬುದು ದೃಢಪಟ್ಟಿದೆ.
ಈ ಮಹತ್ವದ ಸಂಶೋಧನೆಯಿಂದಾಗಿ ಮತ್ತೊಂದು ಇತಿಹಾಸದ ತಿದ್ದುಪಡಿಯಾಗಿದೆ. ಇದುವರೆಗೆ ಇತಿಹಾಸದ ದಾಖಲೆಗಳಲ್ಲಿ ಶ್ರೀ ವಿಶ್ವವಂದ್ಯ ಸರಸ್ವತೀಗಳ ಕಾಲವನ್ನು 13ನೇ ಶತಮಾನದ ಮಧ್ಯಭಾಗವೆಂದು ಉಲ್ಲೇಖಿಸಲಾಗುತ್ತಿತ್ತು. ಆದರೆ, ಈಗ ಕಡತೋಕೆ ಶಾಸನದ ಹೊಸ ಆಯಾಮ ಹಾಗೂ ಮಠದಲ್ಲಿ ಲಭ್ಯವಿರುವ ಉಜ್ಜಯಿನಿಯ ವಿಕ್ರಮಾಂಕ ಮಹಿಪತಿಯ ದಾನ ಶಾಸನದ ಅಂಶಗಳನ್ನು ಸಮೀಕರಿಸಿ ನೋಡಿದಾಗ, ಶ್ರೀ ವಿಶ್ವವಂದ್ಯ ಸರಸ್ವತೀಗಳ ಕಾಲವನ್ನು 11ನೇ ಶತಮಾನದ ಕೊನೆಯ ದಶಕಗಳು ಮತ್ತು 12ನೇ ಶತಮಾನದ ಆರಂಭಿಕ ದಶಕಗಳು ಎಂದು ಪರಿಷ್ಕರಿಸಿಕೊಳ್ಳಬೇಕಾಗಿದೆ ಎಂದು ಸಂಶೋಧಕ ಶ್ಯಾಮಸುಂದರ ಗೌಡ ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.