'ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡಿದ್ದು ಸಾಕು, ಕನಕಪುರದಲ್ಲಿ ಬೇಡ'..!

By Kannadaprabha NewsFirst Published Jan 14, 2020, 3:39 PM IST
Highlights

ಶಾಸಕ ಯು.ಟಿ. ಖಾದರ್‌ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಹೆಸರೆತ್ತದೆಯೇ ವ್ಯಂಗ್ಯ ಮಾಡಿದ್ದಾರೆ. ಕ್ಷಿಣ ಕನ್ನಡದಲ್ಲಿ ಮಾಡಿದ್ದು ಸಾಕು, ಕನಕಪುರ ಜನರ ಶಾಂತಿ ಕೆಡಿಸಬೇಡಿ. ಅವರಾದರೂ ನೆಮ್ಮದಿಯಿಂದ ಇರಲಿ ಎಂದು ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೆಸರೆತ್ತದೆ ಶಾಸಕ ಯು.ಟಿ. ಖಾದರ್‌ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು(ಜ.14): ದಕ್ಷಿಣ ಕನ್ನಡದಲ್ಲಿ ಮಾಡಿದ್ದು ಸಾಕು, ಕನಕಪುರ ಜನರ ಶಾಂತಿ ಕೆಡಿಸಬೇಡಿ. ಅವರಾದರೂ ನೆಮ್ಮದಿಯಿಂದ ಇರಲಿ ಎಂದು ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೆಸರೆತ್ತದೆ ಶಾಸಕ ಯು.ಟಿ. ಖಾದರ್‌ ವಾಗ್ದಾಳಿ ನಡೆಸಿದ್ದಾರೆ.

ಕನಕಪುರದಲ್ಲಿ ಏಸು ಪ್ರತಿಮೆ ಸ್ಥಾಪನೆಯ ವಿರುದ್ಧ ಪಾದಯಾತ್ರೆ ನಡೆಸಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕನಕಪುರ ಚಲೋ ಪಾದಯಾತ್ರೆ ಅವರ ಸಣ್ಣ ಮನಸ್ಸನ್ನು ತೋರಿಸುತ್ತದೆ. ದೇವರ ಪ್ರತಿಮೆಯನ್ನೂ ಮಾಡಲು ಅಡ್ಡಿಪಡಿಸುವ ಅವರ ಮನೋಭಾವವನ್ನು ಬಯಲುಗೊಳಿಸಿದೆ ಎಂದು ಟೀಕಿಸಿದ್ದಾರೆ.

ರೈಲು ನಿಲ್ದಾಣಕ್ಕೆ ಪೇಜಾವರಶ್ರೀ ಹೆಸರು: ಕೇಂದ್ರ ಸಚಿವರಿಗೆ ಕೋಟ ಶಿಫಾರಸು

ಏಸು ಪ್ರತಿಮೆಗೆ ಜಾಗವನ್ನು ಅಂದಿನ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಕಾನೂನು ಬದ್ಧವಾಗಿಯೇ ನೀಡಲಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನವರಿಗೆ ಪ್ರತಿಭಟಿಸುವುದಾದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ಒಂದು ಸಮುದಾಯದ ವಿರುದ್ಧ ಪ್ರತಿಭಟನೆಗೆ ಹೊರಟಿದ್ದಾರೆ. ಜಾಗ ನೀಡಿಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ ಎನ್ನುವುದು ಅವರ ಆರೋಪವಾಗಿದ್ದರೆ ಅದನ್ನು ಕಾನೂನಾತ್ಮಕವಾಗಿ ಪ್ರಶ್ನೆ ಮಾಡಲಿ. ಧರ್ಮವನ್ನು ವಿರೋಧಿಸಿ ಪಾದಯಾತ್ರೆ ಮಾಡುವ ಅವಶ್ಯಕತೆ ಇಲ್ಲ. ಕ್ರಿಶ್ಚಿಯನ್‌ ಸಮುದಾಯ ಈ ವಿಚಾರದಲ್ಲಿ ಏನು ತಪ್ಪು ಮಾಡಿದೆ ಎಂದು ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

ಅರಣ್ಯ ಅತಿಕ್ರಮಣದಲ್ಲಿ ಪ್ರತಿಭಟನೆ ಏಕಿಲ್ಲ:

ಕನಕಪುರದಲ್ಲಿ ಜಾಗ ಕೊಟ್ಟದ್ದು ತಪ್ಪಾಗಿದ್ದರೆ, ರಾಜ್ಯದಲ್ಲಿ ಅದೆಷ್ಟೋ ಮಂದಿ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಲ್ಲಿ ಏಕೆ ಇವರು ಪ್ರತಿಭಟನೆ ನಡೆಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ಮುಹಮ್ಮದ್‌ ಮೋನು, ಈಶ್ವರ್‌ ಉಳ್ಳಾಲ್‌, ಆಲ್ವಿನ್‌ ಡಿಸೋಜ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಎನ್‌ಆರ್‌ಸಿ, ಸಿಎಎ ಗೊಂದಲ

ಎನ್‌ಆರ್‌ಸಿ ಮತ್ತು ಸಿಎಎ ಕುರಿತು ದಕ್ಷಿಣ ಕನ್ನಡದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇಲಾಖಾ ಮಾಹಿತಿಗಾಗಿ ಮನೆಮನೆಗೆ ಭೇಟಿ ನೀಡಲು ಬರುವಾಗ ಜನರು ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದ ಅವರು, ಎನ್‌ಆರ್‌ಸಿ, ಸಿಎಎ ಕುರಿತು ಯಾವುದೇ ಅಧಿಕಾರಿಗಳನ್ನು ಸರ್ಕಾರ ಅಧಿಕೃತವಾಗಿ ನೇಮಿಸಿಲ್ಲ. ಮನೆಗಳಿಗೆ ವಿವಿಧ ಇಲಾಖೆಯವರು ಬಂದರೆ ಜನರು ಗೊಂದಲಕ್ಕೆ ಒಳಗಾಗಬಾರದು. ಅವರಿಂದ ಸ್ಪಷ್ಟಮಾಹಿತಿ ತೆಗೆದುಕೊಂಡು ನಂತರವೇ ಸೂಕ್ತ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು. ಜನರಲ್ಲಿರುವ ಈ ಗೊಂದಲ ನಿವಾರಣೆ ಮಾಡಲು ಜಿಲ್ಲಾಧಿಕಾರಿ ಕೂಡಲೆ ಸ್ಪಷ್ಟತೆ ನೀಡಬೇಕು ಎಂದೂ ಆಗ್ರಹಿಸಿದರು.

click me!