ಉಡುಪಿ ಬಸ್ ಸಂಸ್ಥೆ ಮಾಲೀಕ, ರೌಡಿ ಶೀಟರ್ ಸೈಫುದ್ದೀನ್‌ ತನ್ನ ಉದ್ಯೋಗಿಗಳಿಂದಲೇ ಹತ್ಯೆ!

Published : Sep 28, 2025, 06:42 PM IST
Saifuddin Murder

ಸಾರಾಂಶ

ಉಡುಪಿ ಜಿಲ್ಲೆಯ ಕೊಡವೂರಿನಲ್ಲಿ, ರೌಡಿಶೀಟರ್ ಹಾಗೂ ಖಾಸಗಿ ಬಸ್ ಸಂಸ್ಥೆಯ ಮಾಲಕನಾಗಿದ್ದ ಸೈಫುದ್ದೀನ್‌ನನ್ನು ದುಷ್ಕರ್ಮಿಗಳು ಆತನ ಮನೆಯಲ್ಲೇ ತಲವಾರು ಮತ್ತು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡವೂರಿನಲ್ಲಿ ಶನಿವಾರ ಬೆಳಗ್ಗೆ ನಡೆದ ಹತ್ಯೆ ಪ್ರಕರಣವು ಸಂಚಲನ ಸೃಷ್ಟಿಸಿದೆ. ರೌಡಿಶೀಟರ್ ಹಾಗೂ ಖಾಸಗಿ ಬಸ್ ಸಂಸ್ಥೆ ಮಾಲಕನಾಗಿದ್ದ ಸೈಫುದ್ದೀನ್ ಅಲಿಯಾಸ್ ಸೈಪು (ಆತ್ರಾಡಿ ನಿವಾಸಿ) ಯನ್ನು ದುಷ್ಕರ್ಮಿಗಳ ತಂಡವೊಂದು ತಲವಾರು ಮತ್ತು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದೆ

ಕೊಲೆ ನಡೆದ ರೀತಿ 

ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಕೊಡವೂರಿನ ಸಾಲ್ಮರ ಪ್ರದೇಶದಲ್ಲಿರುವ ಸೈಫುದ್ದೀನ್ ಅವರ ಮನೆಯಲ್ಲಿ ಈ ಹತ್ಯೆ ನಡೆದಿದೆ. ಮನೆಯಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಲವಂತವಾಗಿ ಒಳನುಗ್ಗಿ, ತಲವಾರು ಮತ್ತು ಚಾಕುವಿನಿಂದ ಹಲವೆಡೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ರಕ್ತದ ಮಡುವಿನಲ್ಲಿ ಸೈಫುದ್ದೀನ್ ಬಿದ್ದಿದ್ದ.

ಸೈಫುದ್ದೀನ್ ವಿರುದ್ಧದ ಅಪರಾಧ ಪ್ರಕರಣಗಳು

ಸೈಫುದ್ದೀನ್ ಉಡುಪಿ ಹಾಗೂ ಹಿರಿಯಡ್ಕ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಆಗಿ ದಾಖಲಾಗಿದ್ದ. ಆತನ ವಿರುದ್ಧ ಒಟ್ಟು 18 ಕ್ರಿಮಿನಲ್ ಕೇಸುಗಳು ದಾಖಲಾಗಿದ್ದು, ಅದರಲ್ಲಿ ಎರಡು ಕೊಲೆ ಪ್ರಕರಣಗಳೂ ಸೇರಿವೆ. ಅವನು ನಡೆಸುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆ ಮಣಿಪಾಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಮೂವರು ಆರೋಪಿಗಳ ಬಂಧನ

ಹತ್ಯೆಯಾದ ಕೆಲವೇ ಗಂಟೆಗಳೊಳಗೆ ಪೊಲೀಸರು ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಾಗಿರುವವರು, ಮಹಮ್ಮದ್ ಫೈಸಲ್ ಖಾನ್, ಮಹಮ್ಮದ್ ಶರೀಫ್ ಮತ್ತು ಅಬ್ದುಲ್ ಶುಕುರ್. ಈ ಮೂವರೂ ಸೈಫುದ್ದೀನ್ ಅವರ ಬಸ್ ಸಂಸ್ಥೆಯಲ್ಲಿಯೇ ಚಾಲಕರಾಗಿ ಕೆಲಸ ಮಾಡುತ್ತಿದ್ದವರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ಸಂಸ್ಥೆಯ ವ್ಯವಹಾರ ಸಂಬಂಧಿತ ಅಸಮಾಧಾನದಿಂದಲೇ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಹೇಳಿಕೆ

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ಪರಿಶೀಲಿಸಿದರು. ಮಾಧ್ಯಮಕ್ಕೆ ಹೇಳಿಕೆ ನೀಡಿ, ಕೊಲೆ ಬೆಳಗ್ಗೆ 10ರಿಂದ 11ರ ನಡುವೆ ನಡೆದಿದೆ. ಸೈಫುದ್ದೀನ್ ಮೇಲೆ 18 ಅಪರಾಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಒಂದೇ ವೇಳೆ ದಾಳಿ ನಡೆಸಿ ತಲವಾರು ಹಾಗೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಂಧಿತ ಮೂವರೂ ಬಸ್ ಸಂಸ್ಥೆಯ ಉದ್ಯೋಗಿಗಳೇ ಆಗಿದ್ದಾರೆ. ಅವರು ಇನ್ನೂ, “ಹತ್ಯೆಯ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗಲಿದೆ. ಹಿಂದಿನ ಕೊಲೆ ಪ್ರಕರಣಗಳಿಗೆ ಪ್ರತೀಕಾರವಾಗಿರಬಹುದೆಂಬ ಶಂಕೆಯೂ ಇದೆ. ಸೋಕೋ ತಂಡ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಪೊಲೀಸರು ಈಗಾಗಲೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೊಲೆಯ ನಿಜವಾದ ಹಿನ್ನೆಲೆ ಪತ್ತೆ ಹಚ್ಚುವ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಪ್ರಕರಣವು ಉಡುಪಿ ಜಿಲ್ಲೆಯ ಜನರಲ್ಲಿ ಆತಂಕ ಉಂಟುಮಾಡಿದ್ದು, ಕುಖ್ಯಾತ ರೌಡಿಶೀಟರ್ ಸೈಫುದ್ದೀನ್‌ನ ಕೊಲೆ ಮತ್ತೊಮ್ಮೆ ಪ್ರದೇಶದ ಅಂಡರ್‌ವಲ್ಡ್ ಚಟುವಟಿಕೆಗಳನ್ನು ಬೆಳಕಿಗೆ ತಂದಿದೆ.

PREV
Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು