ದಲಿತ ಕಾಲನಿಗೆ ಉಡುಪಿಯ ಮಾಜಿ‌ ಡಿಸಿ ಹೆಸರಿಟ್ಟ ನಿವಾಸಿಗಳು

By Suvarna NewsFirst Published Jun 29, 2022, 3:50 PM IST
Highlights

ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಗಳ ಪರವಾಗಿ ನಿಂತು ಅವರಿಗೆ ಹೊಸ ಜೀವನ ಕಲ್ಪಿಸುವ ನಿಟ್ಟಿನಲ್ಲಿ ಸಹಕರಿಸಿದ ಉಡುಪಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಹೆಸರಿನಲ್ಲಿ ಕಾಲನಿಯೊಂದು ನಿರ್ಮಾಣವಾಗಿದೆ.

ವರದಿ: ಶಶಿಧರ ಮಾಸ್ತಿ ಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
 
ಉಡುಪಿ(ಜೂ.29): ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಸಾರ್ವಜನಿಕರು ಯಾವತ್ತೂ ದೂರುವುದನ್ನು ನೋಡುತ್ತೇವೆ. ಸರಕಾರಿ ಕೆಲಸ ದೇವರ ಕೆಲಸ ಎಂದು ಹೇಳಿದರೂ, ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುವ ಅನೇಕ ಅಧಿಕಾರಿಗಳನ್ನು ಕಾಣುತ್ತೇವೆ. ಆದರೆ ಉಡುಪಿಯಲ್ಲೊಂದು ಅಪರೂಪದ ವಿದ್ಯಮಾನ ನಡೆದಿದೆ. ಜಿಲ್ಲೆಯಲ್ಲಿ ಉತ್ತಮ ಸೇವೆ ನೀಡಿದ ಜಿಲ್ಲಾಧಿಕಾರಿಯೊಬ್ಬರ ಹೆಸರನ್ನು ದಲಿತರ ಕಾಲನಿಗೆ ಇರಿಸಿ ಕೃತಜ್ಞತೆ ತೋರಿಸಿದ ಘಟನೆ ನಡೆದಿದೆ. 

ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಗಳ ಪರವಾಗಿ ನಿಂತು ಅವರಿಗೆ ಹೊಸ ಜೀವನ ಕಲ್ಪಿಸುವ ನಿಟ್ಟಿನಲ್ಲಿ ಸಹಕರಿಸಿದ ಉಡುಪಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಹೆಸರಿನಲ್ಲಿ ಉಡುಪಿಯ ಕುಂದಾಪುರದಲ್ಲಿ ಒಂದು ಕಾಲನಿ ನಿರ್ಮಾಣಗೊಂಡಿದೆ. 

ಕುಂದಾಪುರ ವಿಶೇಷ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೊಳಗಾದ ಕುಟುಂಬಗಳು ಇಂದು ಹೊಸ ಜೀವನ ನಡೆಸಲು ಅವಕಾಶ ಲಭ್ಯವಾಗಿದೆ. ಕುಂದಾಪುರ ತಾಲೂಕಿನ ಕಂದಾವರ ಗ್ರಾಮದಲ್ಲಿ ಭೂರಹಿತ ದಲಿತ ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡಿದ್ದ ಸಂದರ್ಭದಲ್ಲಿ ಅವು ಅನಧಿಕೃತ ಎಂಬ ಕಾರಣಕ್ಕೆ ತೆರವು ಕಾರ್ಯ ನಡೆದಿತ್ತು. 

ಯಾಂತ್ರಿಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ

ಇದರಿಂದ ಸುಮಾರು 80 ಕುಟುಂಬಗಳು ಬೀದಿ ಪಾಲಾಗಿತ್ತು. ಕೆಲವೊಂದು ಕುಟುಂಬಗಳು ನ್ಯಾಯವನ್ನು ಕೋರಿ ಹೋರಾಟವನ್ನು ಕೂಡ ನಡೆಸಿದ್ದವು. ಆಗಿನ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಮಾನವೀಯ ಸ್ಪಂದನೆ ನೀಡಿದ್ದರು. ಸಂತ್ರಸ್ತ ದಲಿತ ಕುಟುಂಬಗಳ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಮನೆ ನಿವೇಶನ ಮಂಜೂರು ಮಾಡಿದ್ದರು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಕುಂದಾಪುರ ವಿಶೇಷ ನ್ಯಾಯಾಲಯ ಸಂತ್ರಸ್ತ ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಆದೇಶ ಕೂಡ ನೀಡಿತ್ತು.

ಎಚ್ಚೆತ್ತ ಜಿಲ್ಲಾಡಳಿತ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಕುಟುಂಬಗಳಿಗೆ ಈಗ ಮೂಲ ಸೌಕರ್ಯ ಒದಗಿಸಲು ಮುಂದಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕಂದಾವರ ಗ್ರಾಮದ 2ನೇ ವಾರ್ಡ್‌ ನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖೆಗಳಿಂದ ಮೂಲ ಸೌಕರ್ಯಗಳಿಗೆ ಒಂದು ಕೋಟಿಗೂ ಮಿಕ್ಕಿ ಯೋಜನೆ ರೂಪುಗೊಂಡಿದೆ.

ಕಂದಾವರ ಗ್ರಾಮದಲ್ಲಿ ಭೂರಹಿತ ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡಿದ್ದ ವೇಳೆ ತೆರವು ಕಾರ್ಯಾಚರಣೆ ನಡೆದಿದ್ದು, ಅಮಾಮವೀಯವಾಗಿತ್ತು. ಇದೀಗ ದೌರ್ಜನ್ಯ ತಡೆ ಕಾಯ್ದೆ ನಿಜಾರ್ಥದಲ್ಲಿ ಸಾಕಾರಗೊಂಡಿದೆ. ಪರಿಶಿಷ್ಟ ಜಾತಿ/ಪಂಗಡಗಳ ಕಾಯಿದೆ ನಿಯಮ 2016 ರ ತಿದ್ದುಪಡಿಯ ಅಡಿಯಲ್ಲಿ 28 ಕುಟುಂಬಗಳಿಗೆ ಮನೆ ನಿವೇಶನ ಮಂಜೂರಾಗಿದೆ.

Udaipur murder; ಒಳ್ಳೆಯ ಮುಸ್ಲಿಂಮರು ಈಗ್ಯಾಕೆ ಮೌನ ವಹಿಸಿದ್ದೀರಿ: ಸಂಸದ ಸಿಂಹ ಕಿಡಿ

ಸ್ವಂತ ಸೂರಿಲ್ಲದ ನಮಗೆ ಸೂರು ಕಲ್ಪಿಸಲು ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರೇ ಕಾರಣವಾಗಿದ್ದು ಅವರ ನೆನಪು ಶಾಶ್ವತವಾಗಿರಿಸಲು ನಮ್ಮ ಕಾಲನಿಗೆ ಪ್ರಿಯಾಂಕ ನಗರ ಎಂದು ನಾಮಕರಣ ಮಾಡಿದ್ದೇವೆ ಎನ್ನುತ್ತಾರೆ ಕಾಲೊನಿಯ ನಿವಾಸಿಗಳು.

ನ್ಯಾಯಾಲಯದ ಆದೇಶದಂತೆ 28 ಕುಟುಂಬಗಳಿಗೆ ಮನೆ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಶೌಚಾಲಯ, ಸಂಪರ್ಕ ರಸ್ತೆ, ಸಮುದಾಯ ಭವನ, ಎಲ್‌ ಪಿ ಜಿ ಗ್ಯಾಸ್‌ ಸಹಿತ ಮೂಲಸೌಕರ್ಯ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದು  ಕಾಲೊನಿಯಲ್ಲಿ ವಿವಿಧ ಇಲಾಖೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರಕಿದೆ. ಅಧಿಕಾರಿಯೊಬ್ಬರ ಮಾನವೀಯ ಕಳಕಳಿಗೆ ಸಂತುಷ್ಟಗೊಂಡ ನಿವಾಸಿಗಳು ಅವರ ಹೆಸರಲ್ಲಿ ಕಾಲೊನಿಯನ್ನು ನಾಮಕರಣ ಮಾಡುವುದರೊಂದಿಗೆ ಪ್ರಿಯಾಂಕ ಮೇರಿ ಅವರ ಹೆಸರನ್ನು ಜಿಲ್ಲೆಯಲ್ಲಿ  ಶಾಶ್ವತವಾಗಿಸಿದ್ದಾರೆ.

click me!