
ಶಿವಮೊಗ್ಗ[ಆ.06]: ಮ್ಯಾನ್’ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಅಮಾನವೀಯ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಇನ್ನೂ ಸಂಪರ್ಕ ಕಲ್ಪಿಸದ 15 ಅಡಿ ಆಳವಿದ್ದ ಯುಜಿಡಿ ಮ್ಯಾನ್’ಹೋಲ್’ಗೆ ಇಳಿದಿದ್ದ ದಾವಣಗೆರೆ ಮೂಲದ ಅಂಜನಪ್ಪ ಮತ್ತು ವೆಂಕಟೇಶ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ನಗರದ ಎನ್.ಟಿ. ರಸ್ತೆಯ ನಾಗರಹಳ್ಳಿ ಗ್ಯಾಸ್ ಹಿಂಭಾಗದ ಮ್ಯಾನ್ ಹೋಲ್’ನಲ್ಲಿ ಈ ದುರಂತ ಸಂಭವಿಸಿದೆ. 15 ಅಡಿ ಆಳವಿದ್ದ ಮ್ಯಾನ್’ಹೋಲ್’ನಲ್ಲಿ ನೀರು ತುಂಬಿಕೊಂಡಿತ್ತು. ಮ್ಯಾನ್ ಹೋಲ್ ಕ್ಲೀನ್ ಮಾಡಲು ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬೆಂಚಿಕಟ್ಟೆ ಗ್ರಾಮದ ವೆಂಕಟೇಶ್(35), ಅಂಜನಿ (18) ಎಂದು ಗುರುತಿಸಲಾಗಿದೆ. ಮ್ಯಾನ್’ಹೋಲ್ ಕಾಮಗಾರಿಯನ್ನು ಪ್ರಸಾದ್ ಎನ್ನುವವರು ಗುತ್ತಿಗೆ ಪಡೆದಿದ್ದರು. ಶಿವಮೊಗ್ಗದ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾನ್ ಹೋಲ್ ದುರ್ಘಟನೆಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತಿದ್ದರೂ ಸಂಬಂಧಪಟ್ಟವರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಳ್ಳದೇ ಇರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕಠಿಣ ಕಾನೂನು ರೂಪಿಸಬೇಕಿದೆ. ಇಲ್ಲವಾದರೇ ಇನ್ನಷ್ಟು ಇಂತಹ ದುರಂತಗಳನ್ನು ಮಾನವೀಯತೆಯಿಲ್ಲದ, ಅನುಕಂಪದ ಅಸಹಾಯಕತೆಯ ಕಣ್ಣುಗಳಿಂದ ನೋಡುತ್ತಾ ಇರಬೇಕಷ್ಟೇ...!