ವಿಜಯಪುರ: ಜೆಸಿಬಿ ಯಂತ್ರದಡಿ ಸಿಲುಕಿ ಇಬ್ಬರು ಪೌರಕಾರ್ಮಿಕರು ಸಾವು

By Kannadaprabha NewsFirst Published Sep 9, 2021, 1:38 PM IST
Highlights

*  ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕದಲ್ಲಿ ನಡೆದ ಘಟನೆ
*  10 ಲಕ್ಷ ಪರಿಹಾರಕ್ಕೆ ಒತ್ತಾಯ
*  ಈ ಸಂಬಂಧ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

ವಿಜಯಪುರ(ಸೆ.09): ಕಸ ವಿಲೇವಾರಿ ಮಿನಿ ಜೆಸಿಬಿ ಯಂತ್ರದಡಿ ಸಿಲುಕಿ ಇಬ್ಬರು ಪೌರ ಕಾರ್ಮಿಕರು ಮೃತಪಟ್ಟ ಘಟನೆ ನಗರ ಹೊರ ವಲಯದ ಇಂಡಿ ರಸ್ತೆಯಲ್ಲಿನ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಜೆಸಿಬಿ ಚಾಲಕ ಅಯೂಬ್‌ಶಮಸುದ್ದೀನ ಶೇಖ (55) ಹಾಗೂ ಪೌರ ಕಾರ್ಮಿಕ ರಫೀಕ ಮಾಬುಸಾಬ ಇಳಕಲ್‌ (41) ಮೃತಪಟ್ಟವರು. ರಫೀಕ ಮಾಬುಸಾಬ ಇಳಕಲ್‌ ಪಾಲಿಕೆ ಕಾಯಂ ಪೌರ ಕಾರ್ಮಿಕನಾಗಿದ್ದ. ಅಯ್ಯೂಬ್‌ಶಮಸುದ್ದೀನ ಶೇಖ ಈತನು ಗುತ್ತಿಗೆ ಆಧಾರದ ಮೇಲೆ ಜೆಸಿಬಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಇಬ್ಬರು ಸಂಜೆ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕದಲ್ಲಿ ಜೆಸಿಬಿಯಿಂದ ಕಸ ತೆಗೆಯುವ ವೇಳೆ ಯಂತ್ರ ಕೆಟ್ಟು ನಿಂತಿದೆ. ಆಗ ಮಷಿನ್‌ ಕೆಳಭಾಗದಲ್ಲಿ ಇಳಿದು ಇಬ್ಬರು ಯಂತ್ರ ಸರಿಪಡಿಸಲು ಮುಂದಾಗಿದ್ದರು. ಆಗ ಆಕಸ್ಮಿಕವಾಗಿ ಮಷಿನ್‌ ಅವರ ಮೇಲೆ ಬಿದ್ದಿದೆ. ಆಗ ಅವರು ಅದರಡಿಯಲ್ಲಿ ಸಿಕ್ಕಿಹಾಕಿಕೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಂತರ ಸ್ಥಳಕ್ಕೆ ಎಪಿಎಂಸಿ ಎಎಸ್‌ಐ ಸೋಮೇಶ ಗೆಜ್ಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೋನಾಗೆ 2 ವರ್ಷದ ಮಗು ಸಾವು: 3ನೇ ಅಲೆಯ ಮುನ್ಸೂಚನೆಯೇ?

10 ಲಕ್ಷ ಪರಿಹಾರಕ್ಕೆ ಒತ್ತಾಯ:

ಮಿನಿ ಜೆಸಿಬಿ ಯಂತ್ರದ ಅಡಿ ಸಿಲುಕಿ ಸಾವನ್ನಪ್ಪಿದ ಪೌರ ಕಾರ್ಮಿಕರ ಕುಟುಂಬದ ಅವಲಂಬಿತರಿಗೆ ತಲಾ .10 ಲಕ್ಷ ಪರಿಹಾರ ನೀಡಬೇಕು. ಮೃತ ಕುಟುಂಬದ ಒಬ್ಬ ಸದಸ್ಯರಿಗೆ ಪಾಲಿಕೆಯಲ್ಲಿ ನೌಕರಿ ನೀಡಬೇಕು. ಪ್ರಕರಣದ ತನಿಖೆ ನಡೆಯಬೇಕು. ಮಷಿನ್‌ಗಳನ್ನು ತಜ್ಞ ಪರಿಣಿತರಿಂದಲೇ ದುರಸ್ತಿ ಮಾಡಿಸಬೇಕು ಎಂದು ಕರ್ನಾಟಕ ಮುನ್ಸಿಪಲ್‌ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಹಂದ್ರಾಳ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
 

click me!