ತುಮಕೂರು : ಸಂಸದ ಜಿ.ಎಸ್‌.ಬಸವರಾಜು ಖಡಕ್ ವಾರ್ನಿಂಗ್

By Web DeskFirst Published Sep 2, 2019, 12:13 PM IST
Highlights

ತುಮಕೂರು ಸಂಸದ ಜಿ.ಎಸ್. ಬಸವರಾಜು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸೂಕ್ತ ರೀತಿಯಲ್ಲಿ ಅನುದಾನ ಬಳಕೆ ಮಾಡಲು ಸೂಚಿಸಿದ್ದಾರೆ. 

ತುಮಕೂರು [ಸೆ.02] : ಸ್ಮಾರ್ಟ್‌ಸಿಟಿ ಅಡಿಯಲ್ಲಿ ಕೌಶಲ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನವನ್ನು ಸಾರ್ವಜನಿಕರಿಗೆ ಸದುಪಯೋಗವಾಗುವಂತೆ ಅಧಿಕಾರಿಗಳು ಬಳಸಬೇಕು ಎಂದು ಸಂಸದ ಜಿ.ಎಸ್‌. ಬಸವರಾಜ್‌ ತಿಳಿಸಿದರು.

ನಗರದ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ಕಿಲ್‌ ಪಾರ್ಕ್ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಅಧಿಕಾರಿಗಳು ವ್ಯರ್ಥಮಾಡದೆ ನಗರದ ಅಭಿವೃದ್ಧಿಗೆ ಸದುಪಯೋಗಪಡಿಸಿ ತುಮಕೂರು ನಗರದ ಚಿತ್ರಣವನ್ನು ಬದಲಾಯಿಸಿ ಉತ್ತಮ ನಗರವನ್ನಾಗಿ ನಿರ್ಮಿಸಬೇಕು ಎಂದು ಹೇಳಿದರು.

ಈ ಹಿಂದೆ ಐದು ವರ್ಷಗಳ ಕಾಲ ಸಂಸತ್‌ನ ಸದಸ್ಯನಾಗಿದ್ದಾಗ ತುಮಕೂರು ನಗರವನ್ನು ಇಂಡಸ್ಟ್ರಿಯಲ್‌ ಹಬ್‌ ಮಾಡಬೇಕೆಂಬ ಹಂಬಲವಿತ್ತು. ಆದರೆ, ಅದು ಆಗ ಕೈಗೂಡಲಿಲ್ಲ. ತುಮಕೂರು ನಗರ ಬೆಂಗಳೂರಿಗೆ ಮುಖ್ಯದ್ವಾರ. ಕೈಗಾರಿಕೀಕರಣದ ಕೇಂದ್ರೀಯ ಸ್ಥಾನವನ್ನಾಗಿ ಮಾರ್ಪಾಡು ಮಾಡಬೇಕು. ವಿದೇಶಿಯರಿಗೆ 100 ಎಕರೆ ಜಮೀನು ಕೊಟ್ಟು ಅವಕಾಶ ನೀಡುವುದಕ್ಕಿಂತ ಸ್ಥಳೀಯರನ್ನು ಗುರುತಿಸಿ 2 ಅಥವಾ 5 ಎಕರೆ ಜಮೀನು ಕೊಟ್ಟು ತರಬೇತಿ ನೀಡಿ ತಂತ್ರಜ್ಞಾನ ಬಳಸುವಂತೆ ಮಾಡಿದರೆ ಜಿಲ್ಲೆಯ ಮಧ್ಯಮ ವರ್ಗದವರು ಅಭಿವೃದ್ಧಿ ಹೊಂದಬಹುದು ಎಂದು ಅಭಿಪ್ರಾಯಪಟ್ಟರು.

ರೈತ ತಾನು ಬೆಳೆಯುವ ಬೆಳೆಗಳಿಗೆ ತಗುಲುವ ರೋಗಗಳ ಬಗ್ಗೆ ಅರಿವಿಲ್ಲದೆ ಸಾಕಷ್ಟುನಷ್ಟಅನುಭವಿಸುತ್ತಿದ್ದಾನೆ. ಆದರೆ, ಈ ರೀತಿಯಾಗದಂತೆ ಬೆಳೆಗಳಿಗೆ ಹರಡುವ ರೋಗಗಳ ಬಗ್ಗೆ, ಅವುಗಳನ್ನು ನಿವಾರಿಸುವ ಸೂಕ್ತ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ರೈತರೇ ರೋಗಗಳನ್ನು ಪತ್ತೆಹಚ್ಚಿ ಔಷಧ ಸಿಂಪಡಣೆ ಮಾಡುವಂತೆ ತರಬೇತಿ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಬಗೆಹರಿದಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿರುವ ಜಿಲ್ಲೆ ಇದ್ದರೆ ಅದು ತುಮಕೂರು ಮಾತ್ರ. ಹೇಮಾವತಿ ಜಲಾಶಯದಲ್ಲಿ ಸಾಕಷ್ಟುನೀರಿದೆ. ಜೊತೆಗೆ ಎತ್ತಿನಹೊಳೆ ಕೂಡ ಸೇರಿಕೊಳ್ಳಲಿದೆ. ಒಂದು ದಿನವೂ ನಿಲ್ಲಿಸದೆ ಡಿಸೆಂಬರ್‌ 31ರವರೆಗೆ ನೀರು ಬಿಡಬೇಕೆಂಬ ಕಟ್ಟುನಿಟ್ಟಿನ ಆಜ್ಞೆ ಇದೆ. ಅದೇ ಪ್ರಕಾರವಾಗಿ ನೀರು ಬಂದರೆ ನಮ್ಮ ಕೆರೆಗಳೆಲ್ಲವೂ ತುಂಬುತ್ತವೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಮ್ಮ ಜಿಲ್ಲೆ ಚಿಕ್ಕದು, ಜನಸಂಖ್ಯೆ ಕಡಿಮೆ ಇದೆ ಎಂದು ತುಂಬಾ ಶ್ರಮಪಟ್ಟು ನಾನು ಜಿಲ್ಲೆಯನ್ನು ಸ್ಮಾರ್ಟ್‌ಸಿಟಿಗೆ ಸೇರಿಸಿದೆ. ನಗರಪಾಲಿಕೆಯ ಆಯುಕ್ತರು ಕಟ್ಟುನಿಟ್ಟಿನಿಂದ ಕೆಲಸ ಮಾಡುತ್ತಿದ್ದು, ತುಮಕೂರು ನಗರವನ್ನು ಸ್ಮಾರ್ಟ್‌ಸಿಟಿ ಮಾಡಲು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ನಾನು ಸಹ ಕೇಂದ್ರದಿಂದ ಆಗಬೇಕಾಗಿರುವ ಸಹಾಯವನ್ನು ಮಾಡುತ್ತೇನೆ. ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ಸದಾ ನನ್ನ ಪ್ರೋತ್ಸಾಹವಿದೆ. ನಗರೀಕರಣ ಒಬ್ಬರಿಂದ ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕ ಇದರಲ್ಲಿ ತೊಡಗಿಕೊಳ್ಳಬೇಕು ಎಂದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಸ್ಕಿಲ್‌ ಎಂಬ ಪದ ಒಂದು ಫ್ಯಾಷನ್‌ ವರ್ಡ್‌ ಆಗಿದೆ. ಕೇವಲ ಹೆಸರಿಗೆ ಮಾತ್ರ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಯಕ್ರಮಗಳನ್ನು ಮಾಡಿ ಕೈ ಬಿಡುವ ಕೆಲಸವಾಗುತ್ತಿದೆ. ಅದನ್ನು ಫಾಲೋ ಅಪ್‌ ಮಾಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ವಿರುದ್ಧ ಅಸಮಾಧವ್ಯಕ್ತಪಡಿಸಿದರು.

ಸ್ಕಿಲ್‌ ಪಾರ್ಕ್ ಅಡಿಯಲ್ಲಿ ನಾವು ಆಗ್ರೊಬೇಸ್‌ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸ್ಟಾರ್ಟ್‌ ಅಪ್‌ ಕಂಪನಿಗೆ ಹೆಚ್ಚಿನ ಉತ್ತೇಜನ ಕೊಡಬೇಕು. ಸ್ಕಿಲ್‌ ಪಾರ್ಕ್ನಲ್ಲಿ ನಗರದ ಸಾಮಾನ್ಯ ಜನರಿಗೆ ಉಪಯೋಗವಾಗುವ ತಂತ್ರಜ್ಞಾನವನ್ನು ಬಳಸಿ, ಅವರಿಗೆ ತರಬೇತಿ ನೀಡಿ ತಂತ್ರಜ್ಞಾನವನ್ನು ಅವರೆ ಬಳಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಸ್ಕಿಲ್‌ ಯೋಜನೆಗಳ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್‌, ಸ್ಮಾರ್ಟ್‌ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್‌, ಅಭಿವೃದ್ಧಿ ರೆಸಲ್ಯೂಷನ್‌ನ ಕುಂದರಹಳ್ಳಿ ರಮೇಶ್‌, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

click me!