BPL, AAY ಕಾರ್ಡು ಬಳಕೆದಾರರೇ ಎಚ್ಚರ

Kannadaprabha News   | Asianet News
Published : Feb 13, 2021, 10:11 AM ISTUpdated : Feb 13, 2021, 10:29 AM IST
BPL, AAY ಕಾರ್ಡು ಬಳಕೆದಾರರೇ ಎಚ್ಚರ

ಸಾರಾಂಶ

BPL ಹಾಗೂ ಎಎವೈ ಕಾರ್ಡುದಾರರೇ ಎಚ್ಚರ..! ನಿಮ್ಮ ಕಾರ್ಡು ರದ್ದಾಗಬಹುದು. ಈ ಬಗ್ಗೆ ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ. 

 ತುಮಕೂರು (ಫೆ.13):  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ತುಮಕೂರು ಗ್ರಾಮಾಂತರ ತಾಲೂಕಿನಲ್ಲಿ ಎಎವೈ(ಅಂತ್ಯೋದಯ)ಹಾಗೂ ಪಿ.ಎಚ್‌.ಎಚ್‌(ಆದ್ಯತಾ/ಬಿಪಿಎಲ್‌) ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದುಕೊಂಡಿರುವ ಕುಟುಂಬಗಳ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲಾಗುವುದು ಎಂದು ತುಮಕೂರು ತಹಶೀಲ್ದಾರ್‌ ಮೋಹನ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಇಲಾಖೆ ಮಾನದಂಡಗಳನ್ನು ಮರೆಮಾಚಿ ಖಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸೌಮ್ಯದ ಸಂಸ್ಥೆ/ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು. ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್‌, ವೃತ್ತಿ ತೆರಿಗೆಯನ್ನು ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು ಅಥವಾ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಸ್ವಂತ ಮನೆಯನ್ನು ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ 1.20 ಲಕ್ಷ ರು.ಗಳಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ 4 ಚಕ್ರದ ವಾಹನವನ್ನು ಹೊಂದಿರುವ ಕುಟುಂಬಗಳು ಎಎವೈ/ಬಿಪಿಎಲ್‌ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದಾರೆ ಎಂದರು.

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ: ಉಲ್ಲಂಘಿಸಿದ್ರೆ ಖಡಕ್ ಎಚ್ಚರಿಕೆ ...

ಒಂದೇ ಮನೆಯಲ್ಲಿ ವಾಸವಿದ್ದು, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವುದು. ಕುಟುಂಬವು ಸದರಿ ವಿಳಾಸದಲ್ಲಿ ವಾಸವಿಲ್ಲದಿರುವುದು. ಮರಣ ಹೊಂದಿರುವ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು/ಪಡಿತರ ಚೀಟಿಯನ್ನು ರದ್ದುಗೊಳಿಸದೇ ಇರುವುದು ಇಂತಹ ಮಾನದಂಡಗಳನ್ನು ಮೀರಿ ಎಎವೈ(ಅಂತ್ಯೋದಯ) ಹಾಗೂ ಪಿ.ಎಚ್‌.ಎಚ್‌(ಆದ್ಯತಾ/ಬಿಪಿಎಲ್‌) ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಇಂತಹ ಪಡಿತರ ಚೀಟಿದಾರರು ಸ್ವಯಂ ಪ್ರೇರಿತವಾಗಿ ತಾಲೂಕು ಕಚೇರಿಯ ಆಹಾರ ಶಾಖೆಗೆ ಎಎವೈ(ಅಂತ್ಯೋದಯ) ಹಾಗೂ ಪಿ.ಎಚ್‌.ಎಚ್‌(ಆದ್ಯತಾ/ಬಿಪಿಎಲ್‌) ಪಡಿತರ ಚೀಟಿಗಳನ್ನು ಕೂಡಲೇ ಹಿಂದಿರುಗಿಸಿ ರದ್ದು ಅಥವಾ ಆದ್ಯತೇತರ (ಎಪಿಎಲ್‌)ಪಡಿತರ ಚೀಟಿಯನ್ನು ಕಚೇರಿಯಿಂದ ತಕ್ಷಣವೇ ಪಡೆಯಬಹುದಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ದ ಕಾನೂನು ರೀತ್ಯಾ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ತಪ್ಪು ಮಾಹಿತಿ ನೀಡಿ ಎಎವೈ(ಅಂತ್ಯೋದಯ) ಹಾಗೂ ಪಿ.ಎಚ್‌.ಎಚ್‌(ಆದ್ಯತಾ/ಬಿಪಿಎಲ್‌) ಪಡಿತರ ಚೀಟಿ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಸೂಕ್ತ ದಾಖಲೆ ಸಹಿತ ಆಹಾರ ಶಾಖೆಯಲ್ಲಿ ನೀಡಬಹುದಾಗಿದ್ದು, ಇಂತಹ ದೂರುದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ