Tumakuru: ಸತತ 110 ದಿನದಿಂದ ಹರಿಯುತ್ತಿರುವ ಜಯಮಂಗಲಿ ನದಿ: ರೈತರಲ್ಲಿ ಸಂತಸ

By Govindaraj SFirst Published Nov 23, 2022, 7:28 AM IST
Highlights

ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಮಧುಗಿರಿ, ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುವ ಅತಿ ಮುಖ್ಯವಾದ ಜಯಮಂಗಲಿ ನದಿ ಈ ಬಾರಿ ಸಮೃದ್ಧವಾಗಿದ್ದು, ದಶಕಗಳ ನಂತರ ಸತತವಾಗಿ 100 ದಿನಕ್ಕೂ ಹೆಚ್ಚು ಕಾಲ ನಿರಂತರವಾಗಿ ಹರಿಯುತ್ತಿದೆ.

ಉಗಮ ಶ್ರೀನಿವಾಸ್‌

ತುಮಕೂರು (ನ.23): ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಮಧುಗಿರಿ, ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುವ ಅತಿ ಮುಖ್ಯವಾದ ಜಯಮಂಗಲಿ ನದಿ ಈ ಬಾರಿ ಸಮೃದ್ಧವಾಗಿದ್ದು, ದಶಕಗಳ ನಂತರ ಸತತವಾಗಿ 100 ದಿನಕ್ಕೂ ಹೆಚ್ಚು ಕಾಲ ನಿರಂತರವಾಗಿ ಹರಿಯುತ್ತಿದೆ. 110 ದಿನಗಳಿಂದ ನಿರಂತರವಾಗಿ ಜಯಮಂಗಲಿ ನದಿಯಲ್ಲಿ ನೀರು ಹರಿಯುತ್ತಿದ್ದು ಜನರಲ್ಲಿ ಆಶ್ಚರ್ಯ ಹಾಗೂ ರೈತರಲ್ಲಿ ಸಂತಸ ತಂದಿದೆ. ತುಮಕೂರು ಜಿಲ್ಲೆಯ ದೇವರಾಯನ ದುರ್ಗ ಬೆಟ್ಟದಲ್ಲಿ ಹುಟ್ಟುವ ಜಯಮಂಗಲಿ ನದಿ ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಆಂಧ್ರದ ಮಡಕಶಿರಾ ತಾಲೂಕಿನ ಮಾರ್ಗವಾಗಿ ಹರಿಯುತ್ತದೆ. 

ಕಳೆದ ವರ್ಷ ನವೆಂಬರ್‌ನಲ್ಲಿ 20 ದಿನ ಹರಿದ ನಂತರ ಈ ವರ್ಷ ಆಗಸ್ಟ್‌ 1ರಿಂದ ಆರಂಭವಾಗಿ 110 ದಿನ ನದಿ ಹರಿದಿರುವುದು ಗಮನಾರ್ಹ ಅಂಶವಾಗಿದೆ. ಜಯಮಂಗಲಿ ನದಿ 60 ವರ್ಷಗಳ ಹಿಂದೆ ವರ್ಷಕ್ಕೆ ಕನಿಷ್ಠ ಒಂದರಿಂದ ಎರಡು ತಿಂಗಳಾದರೂ ಹರಿಯುತ್ತಿತ್ತು. ಈ ಭಾಗದ ಕೆರೆಗಳು ತುಂಬಿ ಹೆಚ್ಚುವರಿ ನೀರು ಆಂಧ್ರದತ್ತ ಹರಿದು ಹೋಗುತ್ತಿತ್ತು. ಅಂದಿನ ಸರ್ಕಾರ ಈ ಭಾಗದ ಜನರ ಉಪಯೋಗಕ್ಕೆಂದು ಸುಮಾರು 40 ವರ್ಷಗಳ ಹಿಂದೆ ಜಯಮಂಗಲಿ ನದಿಗೆ ಅಡ್ಡಲಾಗಿ ಗೊರವನಹಳ್ಳಿ ಬಳಿ ತೀತ ಡ್ಯಾಮ್‌ ನಿರ್ಮಿಸಲಾಗಿತ್ತು.

ಮಂಗಳೂರು ಸ್ಫೋಟ ಪ್ರಕರಣ; ಸ್ಥಳದಲ್ಲಿ ರೈಲ್ವೇ ಇಲಾಖೆ ನೌಕರನ ಆಧಾರ್ ಕಾರ್ಡ್ ಪತ್ತೆ!

ಮಳೆ ಪ್ರಮಾಣ ಕ್ಷೀಣಿಸಿದಂತೆ ನದಿ ಹರಿದು ದಶಕಗಳೇ ಕಳೆದು ಹೋಗಿತ್ತು. ಅಲ್ಲದೆ ಕೆರೆಗಳು ಖಾಲಿಯಾಗಿ ಮರಳು ಲೂಟಿ ಕೂಡ ಆರಂಭವಾಗಿತ್ತು. ನಂತರ ಸರ್ಕಾರ ಮರಳ ಲೂಟಿಗೆ ಕಠಿಣ ಕ್ರಮ ಕೈಗೊಂಡಿತ್ತು. ಇದೀಗ ಈ ವರ್ಷ ಸುಮಾರು ನೂರು ದಿನಗಳು ಹೆಚ್ಚು ಕಾಲ ನಿರಂತರವಾಗಿ ನದಿಯಲ್ಲಿ ನೀರು ಹರಿಯುತ್ತಿರುವುದು ಸುತ್ತಮುತ್ತಲ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಪ್ರಮಾಣ ಯಥೇಚ್ಛವಾಗಿದೆ. ಮುಂದಿನ ಐದು ವರ್ಷಗಳ ಕಾಲ ಯಾವುದೇ ರೀತಿಯ ನೀರಿನ ಅಭಾವ ಎದುರಾಗುವುದಿಲ್ಲ ಎಂಬ ಸಂತಸವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ಮೊದಲೆಲ್ಲಾ ಜಯಮಂಗಲಿ ನದಿ ಪಾತ್ರವೆಂದರೆ ಮರಳು ಗಣಿಗಾರಿಕೆಗೆ ಹೆಸರಾಗಿತ್ತು. ಮರಳು ಗಣಿಗಾರಿಕೆಯಿಂದ ಈ ನದಿಯ ಒಡಲನ್ನೇ ಬಗಿಯಲಾಗಿತ್ತು. ಕೊರಟಗೆರೆ, ಮಧುಗಿರಿ ಭಾಗದಲ್ಲಿ ಹರಿಯುತ್ತಿದ್ದ ಜಯಮಂಗಲಿ ನದಿ ತೀವ್ರ ಬರಗಾಲದಲ್ಲೂ ಸಹ ನೀರು ಜಿನುಗಿ ನದಿ ಪಾತ್ರದ ಜನರಿಗೆ ಆಸರೆಯಾಗಿತ್ತು. ಆದರೆ ನಿರಂತರವಾಗಿ ನಡೆಯುತ್ತಿದ್ದ ಮರಳು ಗಣಿಗಾರಿಕೆಯಿಂದಾಗಿ ನೀರು ಬತ್ತಿ ಹೋಗಿ ನದಿ ಪಾತ್ರವೇ ಬರಡು ನೆಲದಂತಾಗಿತ್ತು. ಕೆಲವೇ ವರ್ಷಗಳ ಹಿಂದೆ ಜಯಮಂಗಲಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಿ ಮಣ್ಣನ್ನು ಬಗೆದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗಿತ್ತು. 

ಅಲ್ಪಾವಧಿಯಲ್ಲಿ ಅಧಿಕ ಇಳುವರಿ ನೀಡುವ ಕೆಎಮ್‌ಆರ್‌ - 630 ತಳಿ

ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದರೂ ಕೂಡ ಏನೂ ಮಾಡದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೇನು ನದಿಯೇ ಕಣ್ಮರೆಯಾಗುತ್ತದೆ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿತ್ತು.ಆದರೆ ಈಗ ಜಿಲ್ಲೆಯಲ್ಲಿ ಸುರಿದ ವರ್ಷಧಾರೆಯಿಂದ ಎಲ್ಲಾ ಕೆರೆಕಟ್ಟೆಗಳು ತುಂಬಿದ್ದು ಇದರ ಮುಂದುವರೆದ ಭಾಗವಾಗಿ ಜಯಮಂಗಲಿ ನದಿ ತುಂಬಿ ಹರಿಯುತ್ತಿರುವುದು ಮಾತ್ರವಲ್ಲ ಸತತ 110 ದಿವಸಗಳ ಕಾಲ ಹರಿಯುತ್ತಿರುವುದು ವಿಶೇಷ. ನಿರಂತರವಾಗಿ ನದಿ ನೀರು ಹರಿಯುತ್ತಿರುವುದರಿಂದ ಬಯಲು ಸೀಮೆ ಪ್ರದೇಶಗಳಾದ ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚುವ ನಿರೀಕ್ಷೆಯನ್ನು ರೈತಾಪಿ ವರ್ಗ ಹೊಂದಿದ್ದು ಜಿಲ್ಲೆಯ ಮಟ್ಟಿಗೆ ಜಯಮಂಗಲಿ ನದಿ ಜೀವನದಿಯಾಗಿ ಮಾರ್ಪಾಟ್ಟಾಗಿದೆ.

click me!