
ತುಮಕೂರು (ಆ.7): ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಜಿಲ್ಲೆಯಲ್ಲೇ ಭೀಕರ ಕೊಲೆ ಬೆಳಕಿಗೆ ಬಂದಿದೆ. ಕೊಲೆ ಭೀಕರವಾಗಿ ನಡೆದಿದ್ದು, ಅದಕ್ಕಿಂತಲೂ ಹೆಚ್ಚಾಗಿ ಶವವನ್ನು ಪೊಲೀಸರು ಪತ್ತೆ ಮಾಡಿರುವ ರೀತಿಯೇ ಹಂತಕನ ಅಮಾನುಷ ವರ್ತನೆಗೆ ಸಾಕ್ಷಿಯಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಿರುವ ಹಂತಕ ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಲ್ಲದೆ, ಅದನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ರಸ್ತೆಯ ಅಲ್ಲಲ್ಲಿ ಕಸದಂತೆ ಎಸೆದು ಹೋಗಿರುವ ಘಟನೆ ನಡೆದಿದೆ.
ಅಪರಿಚಿತ ಶವದ ತುಂಡುಗಳು ತುಮಕೂರಿನಲ್ಲಿ ಆತಂಕ ಸೃಷ್ಟಿಸಿದೆ. ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ಕವರ್ ಗಳಲ್ಲಿ ಶವದ ಭಾಗಗಳು ಪತ್ತೆಯಾಗಿವೆ. 3 ಕಿಲೋಮೀಟರ್ ಅಂತರದಲ್ಲಿ ಐದು ಕಡೆ ಶವದ ಕವರ್ಗಳು ಪತ್ತೆಯಾಗಿದೆ.
ಮೃತದೇಹ ಪುರುಷರದ್ದೋ..? ಮಹಿಳೆಯದ್ದೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ವಕ್ಷೇತ್ರದಲ್ಲಿ ತುಂಡು ತುಂಡಾದ ದೇಹ ಪತ್ತೆಯಾಗಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಮುತ್ಯಾಲಮ್ಮ ದೇವಾಲಯದ ಬಳಿಯ ರಸ್ತೆಯಲ್ಲಿ ಮೃತದೇಹದ ಭಾಗಗಳು ಪತ್ತೆಯಾಗಿವೆ.
ಗರುಡಚಲ ನದಿಯಿಂದ ಲಿಂಗಾಪುರದ ವರೆಗೂ ಐದು ಕಡೆ ಶವದ ತುಂಡುಗಳಿರುವ ಕವರ್ ಪತ್ತೆಯಾಗಿದೆ.
ಶವದ ಭಾಗಗಳು ಪತ್ತೆಯಾದ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಆಗಮಿಸಿದ್ದಾರೆ. ಕೋಳಾಲ, ಕೊರಟಗೆರೆ, ಗೌರಿಬಿದನೂರು ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಹದ ತುಂಡುಗಳನ್ನು ಹಂತಕ ಎಸೆದು ಹೋಗಿದ್ದಾನೆ. ಕೈ, ಕಾಲು, ಕರಳು ಒಂದೊಂದು ಅಂಗಗಳನ್ನು ಪ್ರತ್ಯೇಕವಾಗಿ ಪತ್ತೆ ಮಾಡಲಾಗಿದೆ.
(ಸುದ್ದಿ ಅಪ್ಡೇಟ್ ಆಗುತ್ತಿದೆ)