ರೈತರಿಂದಲೇ ಕಮಿಷನ್‌ ಪಡೆಯುತ್ತಿರುವ ವರ್ತಕರು; ಎಲ್ಲಿದೆ ರೈತ ಪರ ಸರ್ಕಾರ?

By Kannadaprabha NewsFirst Published Dec 9, 2022, 10:14 AM IST
Highlights
  • ರೈತರಿಂದಲೇ ಕಮಿಷನ್‌ ಪಡೆಯುತ್ತಿರುವ ವರ್ತಕರು!
  • ಎಪಿಎಂಸಿ ಕಾಯ್ದೆ 1956ರ ಸ್ಪಷ್ಟಉಲ್ಲಂಘನೆ
  • ನಿತ್ಯವೂ ನಡೆಯುತ್ತಿರುವ ರೈತರ ಶೋಷಣೆಗೆ ಧ್ವನಿಯೇ ಇಲ್ಲದಂತಾಗಿದೆ

ಶಿವಕುಮಾರ ಕುಷ್ಟಗಿ

 ಗದಗ (ಡಿ.9) : ರೈತರ ಕೃಷಿ ಉತ್ಪನ್ನಗಳ ಸೂಕ್ತ ಮಾರಾಟಕ್ಕಾಗಿಯೇ ರೂಪಿತವಾಗಿರುವ ಎಪಿಎಂಸಿಗಳಲ್ಲಿಯೇ ರೈತರ ಶೋಷಣೆ ನಡೆಯುತ್ತಿದ್ದು, ಅದರಲ್ಲೂ ಗದಗ ಮಾರುಕಟ್ಟೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಶೋಷಣೆಯಾಗುತ್ತಿದೆ ಎಂದು ಹೇಳಬಹುದು. ಅಧಿಕಾರಿಗಳು ರೈತರ ನೆರವಿಗೆ ಬರುವ ಬದಲು ಪರೋಕ್ಷವಾಗಿ ದಲಾಲಿಗಳು, ವರ್ತಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ರೈತರ ಆಕ್ಷೇಪ.

ಕೃಷಿ ಉತ್ಪನ್ನಗಳನ್ನು ರೈತ ಮಾರಾಟಕ್ಕೆ ತಂದ ಸಂದರ್ಭದಲ್ಲಿ ಎಪಿಎಂಸಿ ಆವರಣದಲ್ಲಿರುವ ವರ್ತಕರು ರೈತರಿಂದ ಯಾವುದೇ ರೀತಿಯ ಕಮಿಷನ್‌ (ದಲಾಲಿ) ಪಡೆಯುವಂತಿಲ್ಲ, ಇದು ಎಪಿಎಂಸಿ ಕಾಯ್ದೆ 1956 ಪ್ರಕಾರ ನಿಷೇಧ. ಆದರೆ, ಗದಗ ಮಾರುಕಟ್ಟೆಯಲ್ಲಿ ರೈತರಿಂದ ಕಾಳು, ಕಡಿಗಳಿಗೆ ಶೇ. 2, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿಗೆ ಶೇ. 3ರಷ್ಟುಇನ್ನು ನಿತ್ಯವೂ ಬೇಕಾಗುವ ತರಕಾರಿಗೆ ಶೇ. 5ರಷ್ಟುಕಮಿಷನ್‌ ಪಡೆಯುತ್ತಿದ್ದಾರೆ.

625 ಗ್ರಾಮಗಳಲ್ಲಿ ಉಲ್ಬಣಿಸಿದ ರೋಗ: ಮುಂದವರೆದ ಜಾನುವಾರು ಸಂತೆ ನಿಷೇಧ

ಖರೀದಿದಾರರಿಂದಲೇ ಪಡೆಯಬೇಕು:

ಎಪಿಎಂಸಿ ಕಾಯ್ದೆ ಪ್ರಕಾರ ಈ ಕಮಿಷನ್‌ನ್ನು ಕೇವಲ ಖರೀದಿದಾರಿಂದ ಮಾತ್ರ ಪಡೆಯಬೇಕು, ಯಾವುದೇ ಕಾರಣಕ್ಕೂ ರೈತರಿಂದ ಪಡೆಯಲು ಅವಕಾಶವೇ ಇಲ್ಲ. ಈ ರೀತಿಯ ಕಾನೂನು ಫಲಕಗಳನ್ನು ಎಪಿಎಂಸಿ ಆವರಣದಲ್ಲಿ ಅಳವಡಿಸಿ ಕೈತೊಳೆದುಕೊಂಡಿರುವ ಅಧಿಕಾರಿಗಳು, ಅದರ ಪಾಲನೆಗೆæ ಮಾತ್ರ ಕಿಂಚಿತ್ತು ಗಮನ ನೀಡುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇದರಿಂದ ನಿತ್ಯವೂ ಬಡ ಮತ್ತು ಮಧ್ಯಮ ವರ್ಗದ ರೈತರು ಕಮಿಷನ್‌ ರೂಪದಲ್ಲಿ ವರ್ಷವಿಡೀ ಶ್ರಮಪಟ್ಟು ದುಡಿದ ಹಣದಲ್ಲಿ ಅನಾವಶ್ಯಕವಾಗಿ ಪಾಲು ನೀಡುವಂತಾಗಿದೆ.

ಎರಡು ಕಡೆ ಕಮಿಷನ್‌:

ಈರುಳ್ಳಿ ಮತ್ತು ಮೆಣಸಿನಕಾಯಿ ಮಾರಾಟಕ್ಕೆ ಹೆಸರುವಾಸಿಯಾಗಿರುವ ಗದಗ ಮಾರುಕಟ್ಟೆಗೆ ಬರುವ ರೈತರಿಂದಲೂ ಕನಿಷ್ಠ ಶೇ. 2, ಗರಿಷ್ಠ ಶೇ. 5ರಷ್ಟುಕಮಿಷನ್‌ ಪಡೆಯುತ್ತಾರೆ. ಇದೇ ರೀತಿಯಾಗಿ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸುವವರಿಂದಲೂ ಇದೇ ಪ್ರಮಾಣದ ಕಮಿಷನ್‌ ಪಡೆಯುವ ರೂಢಿ ಗದಗ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಚಾಲನೆಯಲ್ಲಿದ್ದು, ಇದು ಕಾನೂನು ರೀತಿಯ ಅಪರಾಧವಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಎಗ್ಗಿಲ್ಲದೇ ಸಾಗಿದೆ.

ಬೇರೆ ಮಾರುಕಟ್ಟೆಯಲ್ಲಿ ಇಲ್ಲ:

ನವಂಬರ್‌ದಿಂದ ಫೆಬ್ರವರಿ ಅಂತ್ಯದ ವರೆಗೂ ಈರುಳ್ಳಿ ಮತ್ತು ಮೆಣಸಿನಕಾಯಿ ವಹಿವಾಟು ಜೋರಾಗಿರುವ ಸಂದರ್ಭದಲ್ಲಂತೂ ವ್ಯಾಪಕವಾದ ರೈತ ಶೋಷಣೆ ನಡೆಯುತ್ತದೆ. ಬೆಂಗಳೂರು ಸೇರಿದಂತೆ ಈರುಳ್ಳಿಯ ಪ್ರಮುಖ ಮಾರುಕಟ್ಟೆಗಳಲ್ಲಿ ರೈತರಿಂದ ಒಂದು ರುಪಾಯಿ ಕಮಿಷನ್‌ ಪಡೆಯುವುದಿಲ್ಲ ಮತ್ತು ಈರುಳ್ಳಿ ಮಾರಾಟವಾದ ದಿನದಂದೇ ರೈತರಿಗೆ ಆ ಹಣವನ್ನು ಜಮೆ ಮಾಡಲಾಗುತ್ತದೆ. ಆದರೆ, ಗದಗ ಮಾರುಕಟ್ಟೆಯಲ್ಲಿ ರೈತರಿಂದಲೂ ಕಮಿಷನ್‌ ಪಡೆಯುತ್ತಾರೆ, ಮಾರಾಟದ ಹಣವನ್ನು ಒಂದು ವಾರ ಬಿಟ್ಟು ರೈತರಿಗೆ ನೀಡುವ ವಿಚಿತ್ರ ಪದ್ಧತಿ ಹಾಗೂ ರೈತರ ಉತ್ಪನ್ನಗಳನ್ನು ಖರೀದಿಸಿ, ಅದನ್ನೇ ಬೇರೆಡೆ ಮಾರಾಟ ಮಾಡಿ ಬಂದ ಹಣದಲ್ಲಿ ರೈತರಿಗೆ ನೀಡುವ, ಇದಕ್ಕೂ ಕಮಿಷನ್‌ ಪಡೆಯುವ ಕೆಟ್ಟಪದ್ಧತಿ ಜಾರಿಯಲ್ಲಿದೆ.

ಮೈಸೂರು: ಕಬ್ಬು ಬೆಳೆಗಾರರಿಂದ ಬಾರುಕೋಲು ಚಳವಳಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅನ್ನದಾತರು..!

ಗದಗನಲ್ಲಿ ಜಾರಿಯಲ್ಲಿರುವ ಈ ಕಮಿಷನ್‌ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಎಪಿಎಂಸಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಲಿಖಿತವಾಗಿ ಮನವಿ ಮಾಡಲಾಗಿದೆ. ಇದಕ್ಕೆ ಕೆಲವಾರು ವ್ಯಾಪಾರಸ್ಥರು ನಮ್ಮ ರೈತರನ್ನೇ ಮುಂದು ಬಿಟ್ಟು ಎಲ್ಲವೂ ಸರಿ ಇದೆ ಎನ್ನುವ ರೀತಿಯಲ್ಲಿ ಹೇಳಿಕೆ ಕೊಡಿಸುತ್ತಾರೆ. ರೈತರು ಒಗ್ಗಟ್ಟಾಗಿ ಇದನ್ನು ವಿರೋಧಿಸಬೇಕಿದೆ. ನಮ್ಮ ಶ್ರಮದ ಫಲ, ಅನ್ಯರ ಪಾಲಾಗುತ್ತಿದೆ. ಇದನ್ನು ಪ್ರಶ್ನಿಸುವ ಕಮಿಶನ್‌ ಪಡೆಯುವವರ ವಿರುದ್ಧ ಎಪಿಎಂಸಿ ಅಧಿಕಾರಿಗಳಿಗೆ ಧೈರ್ಯವಾಗಿ ದೂರು ನೀಡಬೇಕಿದೆ, ಇದಕ್ಕಾಗಿ ಶೀಘ್ರದಲ್ಲಿಯೇ ಹೋರಾಟ ರೂಪಿಸಲಾಗುವುದು.

ಬಸವರಾಜ ಸಜ್ಜನರ ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ

ಕಮಿಷನ್‌ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಈಗಾಗಲೇ ಸರಣಿ ಸಭೆಗಳನ್ನು ಮಾಡಿ, ರೈತರಿಂದ ಕಮಿಷನ್‌ ವಿಷಯವಾಗಿ ದೂರುಗಳು ಕೇಳಿ ಬಂದಲ್ಲಿ ಅಂಥವರ ಲೈಸೆನ್ಸ್‌ ರದ್ದುಗೊಳಿಸಲಾಗುವುದು ಎಂದು ಸ್ಪಷ್ಟವಾದ ಸೂಚನೆ ನೀಡಲಾಗಿದೆ. ರೈತರು ಕೂಡಾ ತಕ್ಷಣವೇ ದೂರು ನೀಡಿದಲ್ಲಿ ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳಲಾಗುವುದು.

ರಾಜಣ್ಣ ಕೆ., ಗದಗ ಎಪಿಎಂಸಿ ಕಾರ್ಯದರ್ಶಿ

 

click me!