ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್‌ ಠಾಣೆ: ಸಿಎಂ ಬೊಮ್ಮಾಯಿ

By Govindaraj SFirst Published Dec 9, 2022, 9:28 AM IST
Highlights

ನಗರದಲ್ಲಿ ಸಂಚಾರ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ನಗರದ ಐದು ಕಡೆ ಹೊಸ ಸಂಚಾರ ಪೊಲೀಸ್‌ ಠಾಣೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರು (ಡಿ.09): ನಗರದಲ್ಲಿ ಸಂಚಾರ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ನಗರದ ಐದು ಕಡೆ ಹೊಸ ಸಂಚಾರ ಪೊಲೀಸ್‌ ಠಾಣೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ಬ್ರಾಡ್‌ವೇ ರಸ್ತೆಯಲ್ಲಿ ನಿರ್ಮಿಸಿರುವ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತರ (ಡಿಸಿಪಿ) ನೂತನ ಕಚೇರಿ ಕಟ್ಟಡ ಉದ್ಘಾಟನೆ ಹಾಗೂ ಇಂಟೆಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್ಮೆಂಟ್‌ ಸಿಸ್ಟಮ್‌(ಐಟಿಎಂಎಸ್‌)ಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಸಂಚಾರ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ಐದು ಹೊಸ ಸಂಚಾರ ಪೊಲೀಸ್‌ ಠಾಣೆ ಆರಂಭಕ್ಕೆ ನಿರ್ಧರಿಸಲಾಗಿದೆ. 

ಇನ್ನು ಮೂರು ದಿನಗಳಲ್ಲಿ ಹೊಸ ಠಾಣೆಗಳಿಗೆ ಮಂಜೂರಾತಿ ನೀಡಲಿದ್ದೇವೆ ಎಂದರು. ನಗರದಲ್ಲಿ ಸಂಚಾರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸಂಚಾರ ವಿಭಾಗಕ್ಕೆ ವಿಶೇಷ ಆಯುಕ್ತ ಹುದ್ದೆ ಸೃಷ್ಟಿಸಲಾಗಿದೆ. ನಗರದ ಟ್ರಾಫಿಕ್‌ ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತಿರುವ ಹಿರಿಯ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ವಿಶೇಷ ಆಯುಕ್ತರಾಗಿ ನೇಮಿಸಲಾಗಿದೆ. ಕೆಲವೇ ದಿನಗಳಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟುಬದಲಾವಣೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

Shootout At Bengaluru: ಆಂಧ್ರದ ರೌಡಿ ಮೇಲೆ ನಗರದಲ್ಲಿ ಶೂಟೌಟ್‌

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಾಹನ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ನಿಟ್ಟಿನಲ್ಲಿ ಐಟಿಎಂಎಸ್‌ ವ್ಯವಸ್ಥೆ ಆರಂಭಿಸಲಾಗಿದೆ. ಈ ವ್ಯವಸ್ಥೆಯಿಂದ ಚಾಲಕರಿಗೆ ದಂಡ ವಿಧಿಸುವಾಗ ಭ್ರಷ್ಟಾಚಾರ ಹಾಗೂ ಪೊಲೀಸರ ದೌರ್ಜನ್ಯದ ಆರೋಪಗಳಿಗೆ ಅವಕಾಶವಿಲ್ಲ. ಇದರ ಜತೆಗೆ ಸಂಚಾರ ಸಮಸ್ಯೆ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. 

ಇನ್ನು ಸಂಚಾರ ದಟ್ಟಣೆ ಹೆಚ್ಚಿರುವ ಗೊರಗುಂಟೆಪಾಳ್ಯ, ಕೆ.ಆರ್‌.ಪುರಂ. ಸಿಲ್ಕ್ ಬೋರ್ಡ್‌ ಜಂಕ್ಷನ್‌ ಸೇರಿದಂತೆ ನಗರದ 12 ಹೈಡೆನ್ಸಿಟಿ ಕಾರಿಡಾರ್‌ಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ರಸ್ತೆಗಳ ಅಭಿವೃದ್ಧಿ ಜತೆಗೆ ಸಂಚಾರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸಚಿವರಾದ ಡಾ.ಕೆ.ಸುಧಾಕರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ, ಜಂಟಿ ಪೊಲೀಸ್‌ ಆಯುಕ್ತ ಅನುಚೇತ್‌, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಇದ್ದರು.

ಟ್ರಾಫಿಕ್‌ ನಿಯಮ ಮೀರಿದರೆ ಮೊಬೈಲ್‌ಗೆ ಸಂದೇಶ: ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ. ಎಂ.ಎ.ಸಲೀಂ ಮಾತನಾಡಿ, ಇಂಟೆಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸ್ವಯಂ ಚಾಲಿತ ಇ-ಚಲನ್‌ ವ್ಯವಸ್ಥೆ ಇತ್ತು. ಅಂದರೆ, ಕ್ಯಾಮರಾಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಿ ವಾಹನ ಮಾಲಿಕನಿಗೆ ದಂಡ ಇ-ಚಲನ್‌ ಹಾಗೂ ನೋಟಿಸ್‌ ನೀಡಲಾಗುತ್ತಿತ್ತು. ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ಕ್ಯಾಮರಾಗಳು ಸಂಚಾರ ನಿಯಮ ಉಲ್ಲಂಘಿಸುವ ವಾಹನದ ಚಿತ್ರ ಸೆರೆ ಹಿಡಿದು, ಸರ್ವರ್‌ಗೆ ರವಾನಿಸಿ ತಕ್ಷಣ ವಾಹನದ ಮಾಲೀಕನ ಮೊಬೈಲ್‌ಗೆ ಉಲ್ಲಂಘನೆಯ ಫೋಟೋ ಸಹಿತ ಸಂದೇಶ ರವಾನಿಸಲಿದೆ ಎಂದು ತಿಳಿಸಿದರು. 

ಪ್ರಸ್ತುತ ನಗರದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ನಿತ್ಯ ಸುಮಾರು 20-22 ಸಾವಿರ ಪ್ರಕರಣ ದಾಖಲಿಸಲಾಗುತ್ತಿದೆ. ಇದೀಗ ಐಟಿಎಂಎಸ್‌ ವ್ಯವಸ್ಥೆಯಿಂದ ನಿತ್ಯ 50-60 ಸಾವಿರ ಪ್ರಕರಣ ದಾಖಲಾಗಬಹುದು. ವಾಹನ ಸವಾರರಿಗೆ ಜಾಗೃತಿ ಮೂಡಿದ ಬಳಿಕ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುವ ವಿಶ್ವಾಸವಿದೆ ಎಂದರು.

ಹೊಸ 5 ಠಾಣೆಗಳಿವು: ನಗರದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುವ ಐದು ಭಾಗಗಳಲ್ಲಿ 5 ಹೊಸ ಸಂಚಾರ ಪೊಲೀಸ್‌ ಠಾಣೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಬೆಳ್ಳಂದೂರು, ಹೆಣ್ಣೂರು, ಮಹದೇವಪುರ, ತಲಘಟ್ಟಪರ ಹಾಗೂ ಬ್ಯಾಡರಹಳ್ಳಿಯಲ್ಲಿ ನೂತನ ಸಂಚಾರ ಠಾಣೆಗಳು ಆರಂಭವಾಗಲಿವೆ ಎಂದು ಸಲೀಂ ಹೇಳಿದರು.

Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು

ಕಟ್ಟಡ ನಿರ್ಮಾಣಕ್ಕೆ ಸಿಎಂ ಗುದ್ದಲಿ ಪೂಜೆ: ಮತ್ತೊಂದು ಕಾರ್ಯಕ್ರಮದಲ್ಲಿ ಶೇಷಾದ್ರಿಪುರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿ(ಎಸಿಪಿ), ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆ ಹಾಗೂ ಸಂಚಾರ ಪೊಲೀಸ್‌ ಠಾಣೆ, ಹೈಗ್ರೌಂಡ್‌್ಸ ಠಾಣೆ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು.

click me!