Mysuru : ಅತಿ ಕಡಿಮೆ ಬೆಲೆಗೆ ಮಾರಾಟವಾದ ತಂಬಾಕು

By Kannadaprabha NewsFirst Published Dec 9, 2022, 5:32 AM IST
Highlights

ತಾಲೂಕಿನ ಶಾಂತಿಪುರ ಗ್ರಾಮದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಅತಿ ಕಡಿಮೆ ಬೆಲೆಗೆ ಮಾರಾಟವಾದ ಹಿನ್ನೆಲೆ ರೈತರು ತಂಬಾಕು ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹರಾಜು ಪ್ರಕ್ರಿಯೆ ನಿಲ್ಲಿಸಿದ ಘಟನೆ ನಡೆಯಿತು.

 ಎಚ್‌.ಡಿ. ಕೋಟೆ(ಡಿ. 09):  ತಾಲೂಕಿನ ಶಾಂತಿಪುರ ಗ್ರಾಮದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಅತಿ ಕಡಿಮೆ ಬೆಲೆಗೆ ಮಾರಾಟವಾದ ಹಿನ್ನೆಲೆ ರೈತರು ತಂಬಾಕು ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹರಾಜು ಪ್ರಕ್ರಿಯೆ ನಿಲ್ಲಿಸಿದ ಘಟನೆ ನಡೆಯಿತು.

ಹರಾಜು ಪ್ರಕ್ರಿಯೆ ಎಂದಿನಂತೆ ಪ್ರಾರಂಭವಾಗಿ ಉತ್ತಮ ದರ್ಜೆಯ ಹೊಗೆ ಸೊಪ್ಪಿಗೆ 270 ರು. ನೀಡುವ ಬದಲು 230 ರು. ಗೆ ಬಿಡ್‌ ಮಾಡಿದ್ದಕ್ಕೆ ಆಕ್ರೋಶಗೊಂಡ (Farmers) , ತಂಬಾಕು ಮಂಡಳಿ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದು ಕಳೆದ ಒಂದು ವಾರದಿಂದ ದಿನೇ ದಿನೇ ತಂಬಾಕು ಬೆಲೆಯಲ್ಲಿ ಕನಿಷ್ಠ 30 ರು. ನಿಂದ 45 ರು. ಗಳ ಕಡಿಮೆ ಬೆಲೆಗೆ ಕಂಪನಿಯವರು ತಂಬಾಕು ಖರೀದಿಸುತ್ತಿದ್ದು, ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದರು ಕೂಡ ಅಧಿಕಾರಿಗಳು ಕಣ…ಮುಚ್ಚಿ ಕುಳಿತ್ತಿದ್ದೀರಾ, ನೀವು ರೈತರ ಪರವಾಗಿ ಇಲ್ಲದೆ (Tobacco)  ಕಂಪನಿಯವರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಕೇಂದ್ರ ಸರ್ಕಾರ ಹಾಗೂ ತಂಬಾಕು ಮಂಡಳಿ ಮಧ್ಯ ಪ್ರವೇಶ ಮಾಡಿ ಬಿಡ್‌ದಾರರಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಈ ಹಿಂದಿನ ದಿನಗಳಲ್ಲಿ ಇದ್ದಂತ ಮಾರುಕಟ್ಟೆಧಾರಣೆಯನ್ನು ಕೊಡಿಸಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದರು.

ಮೊದಲೆಲ್ಲ ತಂಬಾಕು ಖರೀದಿ ಮಾಡಲು ಹಲವು ಕಂಪನಿಯವರು ಭಾಗವಹಿಸುತ್ತಿದ್ದರು, ಆದರೆ ಇತೀಚೆಗೆ ಕೇವಲ ನಾಲ್ಕæ ೖದು ಕಂಪನಿಯವರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು, ಕೆಲವು ಕಂಪನಿಯವರು ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಉತ್ತಮ ಬೆಲೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಈ ಬಿಡ್‌ದಾರರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಕಂಪಾಲಪುರ ಮಾರುಕಟ್ಟೆಸೇರಿದಂತೆ ಇನ್ನಿತರೆ ಕಡೆ ಬುಧವಾರ ನಡೆದ ಹರಾಜಿನಲ್ಲಿ ಪ್ರತಿ ಕೆ.ಜಿ ಹೊಗೆಸೊಪ್ಪಿಗೆ 280 ರು. ಗೆ ತಂಬಾಕು ಮಾರಾಟ ಆಗಿದೆ, ಆದರೆ, ಎಚ್‌.ಡಿ. ಕೋಟೆ ಮಾರುಕಟ್ಟೆಯಲ್ಲಿ ಮಾತ್ರ ಕಡಿಮೆ ದರಕ್ಕೆ ಬಿಡ್‌ ಮಾಡಲಾಗಿದೆ ಎಂದು ದೂರಿದರು.

ರೈತ ಪೃಥ್ವಿ ಮಾತನಾಡಿ, ಐಟಿಸಿ ಕಂಪನಿಯವರು ಗ್ರಾಮಗಳಿಗೆ ತೆರಳಿ ರೈತರ ಬಳಿ ಹೊಗೆಸೊಪ್ಪು ಇರುವುದನ್ನು ಖಾತರಿ ಮಾಡಿಕೊಂಡು ಉತ್ತಮ ಬೆಲೆ ನೀಡುವುದಾಗಿ ಭರವಸೆ ನೀಡಿ, ನಂತರ ಮಾರುಕಟ್ಟೆಗೆ ಬಂದಾಗ ಅಡ್ಡಾದಿಡ್ಡಿಯಾಗಿ ಬೆಲೆ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ತಂಬಾಕು ಮಂಡಳಿಯಿಂದ ನಮಗೆ 100 ಮಿಲಿಯನ್‌ ಹೊಗೆಸೊಪ್ಪು ಬೆಳೆಯಲು ಅನುಮತಿ ನೀಡಿದೆ. ಆದರೆ ನಮ್ಮಲ್ಲಿ ಕೇವಲ 52 ಮಿಲಿಯನ್‌ ಹೊಗೆಸೊಪ್ಪು ಮಾತ್ರ ಬೆಳೆಯಲಾಗಿದೆ, ಈಗಾಗಲೇ 22 ಮಿಲಿಯನ್‌ ಹೊಗೆಸೊಪ್ಪು ಮಾರಾಟ ಮಾಡಲಾಗಿದೆ. ಇನ್ನು 30 ಮಿಲಿಯನ್‌ ಹೊಗೆಸೊಪ್ಪು ರೈತರ ಬಳಿ ಇದೆ, ಕಷ್ಟಪಟ್ಟು ತಂಬಾಕು ಬೆಳೆ ಬೆಳೆದರು ಕೂಡ ಉತ್ತಮ ಬೆಲೆ ಸಿಗದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸಂಸದರು ಅನಾರೋಗ್ಯ ನೆಪ ಹೇಳಿ ತಾಲೂಕಿನಲ್ಲಿ ತಂಬಾಕು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮುಂದಾಗುತ್ತಿಲ್ಲ, ಹಾಗಾಗಿ ಡಿ.17 ರಂದು ತಾಲೂಕಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳ ವಾಹನವನ್ನು ತಡೆದು ಪ್ರತಿಭಟಿಸಲಾಗುವುದು ಜೊತೆಗೆ ತಂಬಾಕು ಮಾರುಕಟ್ಟೆಗೆ ಆಗಮಿಸಿ, ಇಲ್ಲಿನ ತಂಬಾಕು ರೈತರಿಗೆ ಆಗುತ್ತಿರುವ ಆಗುಹೋಗುಗಳ ಬಗ್ಗೆ ಪರಿಶೀಲಿಸಲು ಒತ್ತಾಯಿಸಲಾಗುವುದು ಎಂದು ರೈತರು ತಿಳಿಸಿದರು.

ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತ ಆಗಿರುವ ವಿಚಾರ ತಿಳಿದು ತಂಬಾಕು ಮಂಡಳಿ ಉಪಾಧ್ಯಕ್ಷ ಮಾಜಿ ಶಾಸಕ ಎಸ್‌.ಸಿ. ಬಸವರಾಜು ಭೇಟಿ ನೀಡಿ ಡಿ. 10 ರಂದು ತಂಬಾಕು ಮಂಡಳಿ ಸಭೆ ಇದ್ದು, ಅಲ್ಲಿ ಚರ್ಚೆ ಮಾಡಿ ಸೂಕ್ತ ಪರಿಹಾರ ಕಂಡುಹಿಡಿಯುವ ಭರವಸೆ ನೀಡಿದರು.

ರೈತರಾದ ಮಹಾದೇವಸ್ವಾಮಿ, ಕುಮಾರ್‌, ಸಂಜು, ಮಹೇಶ್‌, ಗುರುಸ್ವಾಮಿ, ಕುಮಾರ್‌ ಇದ್ದರು.

click me!