ಅಪಘಾತ ತಪ್ಪಿಸಲು ಬೀದಿ ನಾಯಿಗಳಿಗೆ ರಿಫ್ಲೆಕ್ಟಿಂಗ್ ಬ್ಯಾಂಡ್

By Kannadaprabha NewsFirst Published Jul 23, 2019, 3:08 PM IST
Highlights

ರಸ್ತೆಗಳಲ್ಲಿ ನಾಯಿಗಳು ಅಪಘಾತಕ್ಕೊಳಗಾಗುವುದನ್ನು ತಪ್ಪಿಸುವುದಕ್ಕೆ ಮಧ್ವರಾದ್ ಅನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್) ಹೊಸ ಕೆಲಸವೊಂದನ್ನು ಕೈಗೆತ್ತಿಕೊಂಡಿದೆ. ರಸ್ತೆ ಅಪಘಾತದಲ್ಲಿ ನಾಯಿಗಳು ಸಾಯುವುದನ್ನು ತಪ್ಪಿಸಲು ಬೀದಿ ನಾಯಿಗಳ ಕುತ್ತಿಗೆಗೆ ಹೊಳೆಯುವ (ರಿಫ್ಸೆಕ್ಟಿಂಗ್) ಬ್ಯಾಂಡ್ ಅಳವಡಿಸುವ ಅಭಿಯಾನ ಆರಂಭಿಸಿದೆ.

ಮಂಗಳೂರು(ಜು.23): ಸಮಾಜದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗುವ ಪ್ರಾಣಿ, ಬೀದಿ ನಾಯಿಗಳ ಬದುಕುವ ಹಕ್ಕಿಗಾಗಿ ಹೋರಾಟವನ್ನೇ ಕೈಗೆತ್ತಿಕೊಂಡಿರುವ ಮಧ್ವರಾದ್ ಅನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್), ಇದೀಗ ರಸ್ತೆಗಳಲ್ಲಿ ನಾಯಿಗಳು ಅಪಘಾತಕ್ಕೊಳಗಾಗುವುದನ್ನು ತಪ್ಪಿಸುವುದಕ್ಕೆ ಇನ್ನೊಂದು ಹೆಜ್ಜೆ ಇಟ್ಟಿದೆ. ಬೀದಿ ನಾಯಿಗಳ ಕುತ್ತಿಗೆಗೆ ಹೊಳೆಯುವ (ರಿಫ್ಸೆಕ್ಟಿಂಗ್) ಬ್ಯಾಂಡ್ ಅಳವಡಿಸುವ ಅಭಿಯಾನ ಆರಂಭಿಸಿದೆ.

ಉಡುಪಿ ಮತ್ತು ಸುತ್ತಮುತ್ತ ಪ್ರತಿದಿನ ಎಂಬಂತೆ ಬೀದಿ ನಾಯಿಗಳು ರಸ್ತೆ ಅಪಘಾತಕ್ಕೊಳಗಾಗಿ ಸಾಯುತ್ತಿವೆ ಅಥವಾ ಅಂಗವಿಕಲವಾಗುತ್ತಿವೆ. ಮಾತ್ರವಲ್ಲ ವಾಹನ ಸವಾರರಿಗೂ ಅಪಾಯವನ್ನುಂಟು ಮಾಡುತ್ತಿವೆ. ಇದರಲ್ಲಿ ವಾಹನಕ್ಕ ಅಡ್ಡ ಬರುವ ನಾಯಿಗಳ ತಪ್ಪೂ ಇದೆ, ರಸ್ತೆಯಲ್ಲಿ ನಾಯಿ ಇದ್ದರೂ, ಅದು ಕೇವಲ ನಾಯಿ ಎಂಬ ಕಾರಣಕ್ಕೆ ಅದನ್ನು ವಾಹನದಡಿ ಹಾಕಿಕೊಂಡು ಹೋಗುವ ಚಾಲಕರ ತಪ್ಪೂ ಇದೆ.

100ಕ್ಕೂ ಹೆಚ್ಚು ನಾಯಿಗಳಿಗೆ ಬ್ಯಾಂಡ್ ಅಳವಡಿಕೆ:

ಮುಖ್ಯವಾಗಿ ರಾತ್ರಿ ಹೊತ್ತು ರಸ್ತೆಯಲ್ಲಿ ನಾಯಿ ಇರುವುದು ದೂರದಿಂದಲೇ ಕಾಣುವುದಕ್ಕೆ ಸಾಧ್ಯವಾಗುವಂತೆ ಕತ್ತಲಲ್ಲಿ ಪ್ರತಿಫಲಿಸುವ ಬಿಳಿ ಬಣ್ಣದ ಬ್ಯಾಂಡ್ ಗಳನ್ನು ಅಳವಡಿಸುವ ಅಭಿಯಾನವನ್ನು ಮ್ಯಾಕ್ಟ್ ಈಗಾಗಲೇ ಆರಂಭಿಸಿದೆ. ಮೊದಲ ಹಂತವಾಗಿ ಮಲ್ಪೆಯ ರಸ್ತೆಗಳಲ್ಲಿ, ಸಮುದ್ರ ತೀರದಲ್ಲಿ ಅಲೆದಾಡುವ 100ಕ್ಕೂ ಅಧಿಕ ನಾಯಿಗಳಿಗೆ ಬ್ಯಾಂಡ್ ಅಳವಡಿಸಲಾಗಿದೆ.

ಬೀದಿ ನಾಯಿ ರಕ್ಷಕರಿಗೆ ಬ್ಯಾಂಡ್ ವಿತರಣೆ:

ಅಲ್ಲದೇ ಬೀದಿ ನಾಯಿಗಳ ರಕ್ಷಣೆ ಮಾಡುತ್ತಿರುವ ಹತ್ತಾರು ಮಂದಿ ಆಸಕ್ತರಿಗೆ ಸುಮಾರು 150ಕ್ಕೂ ಅಧಿಕ ಬ್ಯಾಂಡ್‌ಗಳನ್ನು ವಿತರಿಸಲಾಗಿದೆ, ಉಡುಪಿ ಸಮೀಪದ ಹಾವಂಜೆ ಎಂಬಲ್ಲಿನ ಯುವತಿಯೊಬ್ಬರು 25ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ಹಾಕಿ ರಕ್ಷಿಸುತ್ತಿದ್ದಾರೆ. ಅವರು ಎಲ್ಲ ನಾಯಿಗಳಿಗೆ ಈ ರಿಫ್ಲೆಕ್ಟಿಂಗ್ ಬ್ಯಾಂಡ್ ಗಳನ್ನು ಅಳವಡಿಸಿದ್ದಾರೆ. ಈ ನಾಯಿಗಳೀಗ ರಸ್ತೆಯಲ್ಲಿ ರಾತ್ರಿ ಹೊತ್ತು ಸುರಕ್ಷಿತವಾಗಿವೆ ಎನ್ನುತ್ತಾರೆ ಮ್ಯಾಕ್ಟ್‌ನ ಸಂಸ್ಥಾಪಕಿ ಬಬಿತಾ ಮಧ್ವರಾಜ್.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ ಮನೆಯ ಸುತ್ತಮುತ್ತ ಇರುವ ಅಥವಾ ರಸ್ತೆಗಳಲ್ಲಿರುವ ನಾಯಿಗಳಿಗೆ ಇಂತಹ ಬ್ಯಾಂಡ್ ಅಳವಡಿಸಲು ಆಸಕ್ತಿ ಇರುವ ಯಾರಾದರೂ ಬಬಿತಾ (98457 20254) ಅವರನ್ನು ಸಂಪರ್ಕಸಿದರೆ ಎಷ್ಟು ಬೇಕಾದರೂ ಬ್ಯಾಂಡ್ ಗಳನ್ನು ಉಚಿತವಾಗಿ ನೀಡುವುದಕ್ಕೆ ಅವರು ಸಿದ್ಧರಿದ್ದಾರೆ.

ಬೆಂಗಳೂರು: ಬೀದಿ ನಾಯಿ ಸಾವು, ಡಾಕ್ಟರ್​ ವಿರುದ್ಧ ದಾಖಲಾಯ್ತು FIR​..!

ಈಗಾಗಲೇ ಮ್ಯಾಕ್ಟ್ ಸಂಘಟನೆಯು ಉಡುಪಿಯ ವಿವಿಧೆಡೆ ಬೀದಿ ನಾಯಿ ಮರಿಗಳ ದತ್ತು ಶಿಬಿರಗಳನ್ನು ನಡೆಸಿ, 300ಕ್ಕೂ ಅಧಿಕ ಮರಿಗಳನ್ನು ಆಸಕ್ತರಿಗೆ ದತ್ತು ನೀಡಿ, ಅವುಗಳು ಸುರಕ್ಷಿಕವಾಗಿ ಹೊಟ್ಟೆ ತುಂಬಾ ಆಹಾರದೊಂದಿಗೆ ಬದುಕುವುದಕ್ಕೆ ವ್ಯವಸ್ಥೆ ಮಾಡಿದೆ. ಇತ್ತೀಚೆಗೆ ಮಣಿಪಾಲದ ಮಾಂಡೋವಿ ಎಮರಾಲ್ಡ್ ವಸತಿಗೃಹದ ಮುಂದೆ ಯಾರೋ ದುಷ್ಕರ್ಮಿಗಳು ವಿಷವಿಕ್ಕಿ 8 ನಾಯಿಗಳನ್ನು ಸಾಯಿಸಿದ್ದು, ಈ ಆರೋಪಿಗಳ ಬಂಧನಕ್ಕಾಗಿ ಮ್ಯಾಕ್ಟ್ ಹೋರಾಟ ನಡೆಸುತ್ತಿದೆ.

click me!