Bagalkote: ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

By Suvarna NewsFirst Published Mar 25, 2022, 7:41 PM IST
Highlights

ಸಾಮಾನ್ಯವಾಗಿ ದೇವರಿಗೆ ಹೂ, ಹಣ್ಣು ಕಾಯಿ, ಪಾಯಸ ಸೇರಿದಂತೆ  ವಿಭಿನ್ನ ಬಗೆಯ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸೋದು ಕಾಮನ್​ ಆದರೆ ಈ ದೇವಸ್ಥಾನದಲ್ಲಿ ಮಾತ್ರ ಮದ್ಯವೇ  ದೇವರಿಗೆ ನೈವೇದ್ಯ, ಸಾರಾಯಿ ತೀರ್ಥವೇ ಭಕ್ತರಿಗೆ ಪ್ರಸಾದ.

ವರದಿ: ಮಲ್ಲಿಕಾರ್ಜುನ ಹೊಸಮನಿ  ಏಷ್ಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಮಾ.25): ಸಾಮಾನ್ಯವಾಗಿ ದೇವರಿಗೆ ಹೂ, ಹಣ್ಣು ಕಾಯಿ, ಪಾಯಸ ಸೇರಿದಂತೆ  ವಿಭಿನ್ನ ಬಗೆಯ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸೋದು ಕಾಮನ್​ ಆದರೆ ಈ ದೇವಸ್ಥಾನದಲ್ಲಿ ಮಾತ್ರ ಮದ್ಯವೇ  ದೇವರಿಗೆ ನೈವೇದ್ಯ, ಸಾರಾಯಿ ತೀರ್ಥವೇ ಭಕ್ತರಿಗೆ ಪ್ರಸಾದ. ಇಲ್ಲಿಗೆ ಬಂದರೆ ಸಾಕು ದೇವರ ಮುಂದೆ ವೆರೈಟಿ ವೆರೈಟಿ ಸಾರಾಯಿ ಬಾಟಲ್ ಗಳು ದಶ೯ನವಾಗುತ್ತೆ. ಹೀಗಾಗಿ ಈ ವರ್ಷವೂ ರಂಗನಾಥ ಸ್ವಾಮಿಗೆ ಭಕ್ತರಿಂದ  ಸಾರಾಯಿ  ನೈವೇದ್ಯ ನಡೆದು, ಅದ್ದೂರಿ ರಥೋತ್ಸವ ನೆರವೇರಿಸಲಾಯಿತು. 

ಹೌದು,  ಈ ಜಾತ್ರೆಗೆ ಹೋದರೆ ಸಾಕು ಮೊದಲು ನಮಗೆ ದೇವಾಲಯದಲ್ಲಿ ಥಟ್ಟನೆ ಕಾಣ ಸಿಗುವುದು ವೆರೈಟಿ, ವೈರೈಟಿ ಮದ್ಯದ ಬಾಟಲ್​ಗಳು, ಜಾತ್ರೆ ನಿಮಿತ್ಯ ಹೂಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿರುವ ಲಕ್ಷ್ಮಿರಂಗನಾಥ ದೇವರು, ಇವುಗಳ ಮಧ್ಯೆ ದೇವರಿಗೆ ಮದ್ಯದ ನೈವೇದ್ಯ ಅರ್ಪಿಸಿ ಪೂಜೆ ಮಾಡುವಂತಹ ಪೂಜಾರಿಗಳು.  ಅಂದ ಹಾಗೆ ಇಂತಹವೊಂದು ಅಪರೂಪದ ಸಾರಾಯಿ ಜಾತ್ರೆ ಕಂಡು ಬರುವುದು ಬಾಗಲಕೋಟೆ  ಜಿಲ್ಲೆ ಗುಳೇದಗುಡ್ಡ  ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ. ಇಲ್ಲಿನ ರಂಗನಾಥ ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಜಾತ್ರೆ ನಡೆಯುತ್ತದೆ. 

ಸಿದ್ದರಾಮಯ್ಯ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಕಿಷ್ಕಿಂದ ಸರಸ್ವತಿ ಸ್ವಾಮೀಜಿ

ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಸಲ್ಲಿಸಿ,  ತೀರ್ಥ ಸೇವನೆ ಮಾಡುವುದು ವಿಶೇಷ. ಅಂದಾಜು 600 ವರ್ಷಗಳ ಇತಿಹಾಸ ಇರುವ ಈ ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಧ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಕ್ತರು ಲಕ್ಷ್ಮಿರಂಗನಾಥ ದೇವರಿಗೆ ಮದ್ಯದ ನೈವೇದ್ಯ ಅರ್ಪಿಸಿ ಪುನೀತರಾದರು. 

ಇನ್ನು ವಿಶೇಷವಾಗಿ ಹರಕೆ ಹೊರುವ ಭಕ್ತರು ಮುಖ್ಯವಾಗಿ ಮಕ್ಕಳಿಲ್ಲದವರು ಮಕ್ಕಳಿಗಾಗಿ, ನೌಕರಿ ಇಲ್ಲದವರು ನೌಕರಿಗಾಗಿ ಬೇಡಿಕೆ ಇಟ್ಟವರು, ಮನೆ ಸಮಸ್ಯೆ ಬಗೆಹರಿಯುವುದು ಸೇರಿದಂತೆ ನಾನಾ ನಮೂನೆಯ ಹರಕೆಗಳನ್ನ ದೇವರ ಮುಂದಿಟ್ಟು, ಒಂದೊಮ್ಮೆ ತಮ್ಮ ಹರಕೆ ಈಡೇರಿದರೆ ರಂಗನಾಥ ಸ್ವಾಮಿ ದೇವರಿಗೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸೋಕೆ ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ. 

Muslim Traders Boycott ಕೊಲ್ಲೂರು ಮೂಕಾಂಬಿಕಾ ಉತ್ಸವದಲ್ಲೂ ಮುಸ್ಲಿಂಮರಿಗೆ ನಿರ್ಬಂಧ

ಹೀಗಾಗಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳೇ ರಾರಾಜಿಸುತ್ತವೆ. ಶತಶತಮಾನಗಳಿಂದ ನಡೆದು ಬಂದಿರುವ ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದೆ‌. ಇನ್ನು  ಎಲ್ಲ ಭಕ್ತರ ಸಮ್ಮುಖದಲ್ಲಿ ಸಾಂಕೇತಿಕವಾಗಿ ರಥೋತ್ಸವ ನಡೆಸಲಾಯಿತು. ಒಟ್ಟಿನಲ್ಲಿ ಈ ರಂಗನಾಥ ಸ್ವಾಮಿಗೆ ಸರಾಯಿ ಅರ್ಪಿಸಿದರೆ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಇದರಿಂದ ಇಂದಿಗೂ ಸರಾಯಿ ನೈವೇದ್ಯ ಪದ್ದತಿ ಮುಂದುವರೆಯುತ್ತಲೇ ಸಾಗುತ್ತಿದೆ. ಅದೇನೆ ಇದ್ದರೂ ಎಲ್ಲವೂ ಭಕ್ತರ ನಂಬಿಕೆ‌ ಮೇಲೆ ನಿಂತಿದ್ದು, ಇಂತಹ ವಿಶೇಷ ಆಚರಣೆಗಳ ಮಧ್ಯೆ ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಎಂಬುದಕ್ಕೆ ಸಾಕ್ಷಿಯಾಗಿದೆ.

click me!