ದಲಿತ ಮಹಿಳೆಯ ಶವ ಹೂಳಲು ಸ್ಥಳವಿಲ್ಲ; ರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

By Kannadaprabha NewsFirst Published Sep 19, 2022, 8:47 AM IST
Highlights
  • ದಲಿತ ಮಹಿಳೆಯ ಶವ ಹೂಳಲು ಸ್ಥಳವಿಲ್ಲ
  • ರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ
  • ಸ್ಥಳಕ್ಕೆ ತಹಸೀಲ್ದಾರ್‌ ಭೇಟಿ

ಮಧುಗಿರಿ (ಸೆ.19) : ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿರುವ ದಲಿತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಘಟನೆ ಮಧುಗಿರಿ ಕಸಬಾ ಬಿಜವರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಅದೇ ಗ್ರಾಮದ ಹನುಮಕ್ಕ (75) ಭಾನುವಾರ ಮಧ್ಯಾಹ್ನ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಗ್ರಾಮದಲ್ಲಿ ಜಾಗವಿಲ್ಲದ ಕಾರಣ ಮತ್ತು ಸರ್ಕಾರಿ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಹನುಮಕ್ಕನ ಮೃತ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಲಾಗದೆ ಶವವನ್ನು ಬಿಜವರ ರಸ್ತೆಯಲ್ಲಿಟ್ಟು ಪ್ರತಿಭಟಿಸಿದರು.

ಸ್ಮಶಾನ ಜಾಗ ಇಲ್ಲದ್ದಕ್ಕೆ ಗ್ರಾಮ ಪಂಚಾಯತಿ ಎದುರೇ ಶವ ಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!

ಮಧುಗಿರಿ ಪಟ್ಟಣಕ್ಕೆ ಸಮೀಪವಿರುವ ಬಿಜವರ ಗ್ರಾಮದ ದಲಿತರಿಗೆ ರುದ್ರಭೂಮಿಯಿಲ್ಲದೆ ಯಾರೇ ಸತ್ತರೂ ಹೂಳಲು ಜಾಗವಿಲ್ಲದ ಕಾರಣ ರುದ್ರಭೂಮಿ ಮಂಜೂರು ಮಾಡುವಂತೆ ಸಾಕಷ್ಟುಸಲ ಗ್ರಾಮಸ್ಥರು ಮಧುಗಿರಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಸಹ ದಲಿತರ ಕೂಗನ್ನು ಅಧಿಕಾರಿಗಳು ಕೈಚಲ್ಲಿರುವ ಪರಿಣಾಮವೇ ಇಂದು ಹನುಮಕ್ಕನ ಮೃತ ದೇಹ ಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿದ್ದು ಇದರಿಂದ ಬೇಸತ್ತ ಗ್ರಾಮಸ್ಥರು, ಸಂಬಂಧಿಕರು ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿ ತಾಲೂಕು ಆಡಳಿತ ಮತ್ತು ಆಳುವ ಸರ್ಕಾರಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಬಿಜವರ ಗ್ರಾಮದಲ್ಲಿ ಸುಮಾರು 350ಕ್ಕೂ ಅಧಿಕ ದಲಿತ ಕುಟುಂಬಗಳು ವಾಸವಿದ್ದು, ಶವ ಹೂಳಲು ಅಂಗೈ ಅಗಲ ಜಾಗವಿಲ್ಲದ ಕಡು ಬಡವರಿದ್ದು ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರಕ್ಕೂ ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ತಾಲೂಕು ಆಡಳಿತ ಇತ್ತ ಗಮನ ಹರಿಸಿ ಸ್ಥಳಕ್ಕೆ ಬಂದು ಪರಿಶೀಲಿಸಿ, ದಲಿತ ಕುಟುಂಬದವರು ಮೃತ ಪಟ್ಟರೆ ಅಂತ್ಯ ಸಂಸ್ಕಾರಕ್ಕೆ ಸ್ಥಳ ಗುರುತಿಸಿ ಈ ಜ್ವಲಂತ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಇಲ್ಲದಿದ್ದರೆ ಸೋಮವಾರ ತಹಸೀಲ್ದಾರ್‌ ಕಚೇರಿ, ಎಸಿ ಕಚೇರಿ ಮುಂದೆ ಹನುಮಕ್ಕನ ಶವವಿಟ್ಟು ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡ ರವಿಕುಮಾರ್‌ ತಾಲೂಕು ಆಡಳಿತ್ಕಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Tamil Nadu: ವ್ಹೀಲ್‌ಚೇರ್‌ನಲ್ಲಿ ಅಮ್ಮನ ಮೃತದೇಹ ತೆಗೆದುಕೊಂಡು ಹೋದ 60 ವರ್ಷದ ವ್ಯಕ್ತಿ

ತಹಸೀಲ್ದಾರ್‌ ಭೇಟಿ: ಸ್ಥಳಕ್ಕೆ ತಹಸೀಲ್ದಾರ್‌ ಭೇಟಿ ನೀಡಿ ಪರಿಶೀಲಿಸಿದ ನಂತರ ಸರ್ಕಾರದಿಂದ ಗುರುವಡೇರಹಳ್ಳಿ ಸರ್ವೇ ನಂಬರ್‌ 58ರಲ್ಲಿ ಒಂದು ಎಕರೆ ಬಿಜವರ ದಲಿತರ ರುದ್ರಭೂಮಿಗಾಗಿ ಜಮೀನು ಮಂಜೂರಾಗಿದ್ದು, ಅದೇ ಸ್ಥಳದಲ್ಲೇ ಶವ ದಪನ್‌ ಮಾಡಲು ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಜಾಗ ತೋರಿಸಿರುವುದಾಗಿ ತಿಳಿಸಿದ್ದೇನೆ. ಅದೇ ರೀತಿ ಸೋಮವಾರ ಬೆಳಗ್ಗೆ ದಪನ್‌ ಮಾಡುವುದಾಗಿ ಸಂಬಂಧಿಕರು ಒಪ್ಪಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಧುಗಿರಿ ತಹಸೀಲ್ದಾರ್‌ ಸುರೇಶ್‌ ಆಚಾರ್‌ ಹೇಳಿದರು.

click me!