ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ: ಪ್ರವಾಸಿಗರಿಗೆ ಸಮಸ್ಯೆ

By Govindaraj SFirst Published Aug 20, 2022, 12:28 AM IST
Highlights

ಹತ್ತಾರು ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಕೃತಿ ಶ್ರೀಮಂತ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ದಿನ ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.‌ 

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಆ.20): ಹತ್ತಾರು ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಕೃತಿ ಶ್ರೀಮಂತ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ದಿನ ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.‌ ಇಲ್ಲಿನ ಕಡಲತೀರಗಳು, ಜಲಪಾತಗಳು, ಹಸಿರು ಸಿರಿಹೊತ್ತಿರುವ ಬೆಟ್ಟಗಳು, ದೇವಸ್ಥಾನಗಳು ಮುಂತಾದ ಪ್ರಕೃತಿ ಸೊಬಗನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಜಿಲ್ಲೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳಿಯುತ್ತಿದೆ. ಆದರೆ, ದುರಾದೃಷ್ಠವಂದ್ರೆ ಈ ಜಿಲ್ಲೆಯ ಪ್ರಮುಖ ಜಲಪಾತಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ. ಇದರಿಂದ ಹೊರ ಜಿಲ್ಲೆ,‌ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

ಹೌದು! ಅದ್ಭುತ ಪ್ರಕೃತಿ ಸೊಬಗನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಯನ ಮನೋಹರ ಕಡಲತೀರಗಳು, ಹಸಿರಿ ಸಿರಿ ಹೊತ್ತ ಬೆಟ್ಟ - ಗುಡ್ಡಗಳು, ಹಾಲ್ನೊರೆಯಂತೆ ಹರಿಯುವ ಜಲಪಾತಗಳು, ಐತಿಹಾಸಿಕ ದೇವಸ್ಥಾನಗಳಿವೆ. ಇಂತಹ ಅತ್ಯದ್ಭುತ ಸ್ಥಳಗನ್ನು ನೋಡಲು, ಅವುಗಳ ಸೊಬಗನ್ನು ಸವಿಯಲು ದಿನ ನಿತ್ಯ ದೇಶ- ವಿದೇಶದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಮಳೆಗಾಲ ಸಂದರ್ಭದಲ್ಲಂತೂ ಜಿಲ್ಲೆಯ ಜಲಪಾತಗಳು ಇಲ್ಲಿ ಹಾಲ್ನೊರೆಯಂತೆ ಹರಿಯುತ್ತಿರುತ್ತವೆ. ಜಿಲ್ಲೆಯ ವಿಭೂತಿ ಫಾಲ್ಸ್, ಅಪ್ಸರಕೊಂಡ ಫಾಲ್ಸ್, ಮಾಗೋಡ ಫಾಲ್ಸ್, ಉಂಚಳ್ಳಿ ಫಾಲ್ಸ್, ಬಂಗಾರ ಕುಸುಮ ಫಾಲ್ಸ್ ಮುಂತಾದ ಜಲಪಾತಗಳ ಸುಂದರತೆಯನ್ನು ನೋಡಲು ಅತೀ ಹೆಚ್ಚು ಪ್ರವಾಸಿಗರು ಬರುತ್ತಾರೆ. 

ಹೊನ್ನಾವರದಲ್ಲಿ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವು

ಇಲ್ಲಿ ಮೋಜು ಮಸ್ತಿ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ, ದುರದೃಷ್ಠವಂದ್ರೆ ಈ ಜಲಪಾತಗಳಿರುವ ಸ್ಥಳಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲ, ಸರಿಯಾದ ರಸ್ತೆಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಪ್ರವಾಸೋದ್ಯಮ, ಪ್ರವಾಸೋದ್ಯಮ ಎಂದು ಹೇಳಿಕೊಳ್ಳುವ ಸರಕಾರ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಗೋಜಿಗೂ ಹೋಗಿಲ್ಲ. ಹೀಗಾಗಿ ಸ್ಥಳಕ್ಕೆ ಭೇಟಿ ಕೊಡುವ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆ ವಿರುದ್ಧ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಮಳೆಗಾಲ ಪ್ರಾರಂಭವಾಯಿತು ಅಂದ್ರೆ ಜಲಪಾತಗಳಿಗೆ ಜೀವ ಕಳೆ ಬಂದಂತೆ, ಜಲಪಾತಗಳ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಕಲ್ಲು, ಮುಳ್ಳಿನ ದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಿದೆ. ಈ ಮಟ್ಟಕ್ಕೆ ಸಮಸ್ಯೆಯ ಆಗರಗಳಾಗಿವೆ ಜಲಪಾತಗಳು. ಹೊನ್ನಾವರದ ಹತ್ತಿರವಿರೋ ಬಂಗಾರ ಕುಸುಮ ಜಲಪಾತಕ್ಕೆ ರಸ್ತೆ ಪಕ್ಕದಲ್ಲಿ ಬೋರ್ಡ್ ಕೂಡಾ ಹಾಕದಿರುವ ಮಟ್ಟಕ್ಕೆ ನಿರ್ಲಕ್ಷ್ಯವನ್ನು ಇಲಾಖೆಗಳು ಮಾಡುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ಮಳೆಗಾಲದಲ್ಲಿ ಜಲಪಾತಗಳ ಸಂಖ್ಯೆ ಹೆಚ್ಚುತ್ತದೆ. 

ಹಲೋ ಕಂದಾಯ ಸಚಿವರೆ ಕಾರ್ಯಕ್ರಮ ಅನುಷ್ಠಾನದಲ್ಲಿ ಉಕ ಪ್ರಥಮ

ಹೀಗಾಗಿ ಎಲ್ಲಾ ಜಲಪಾತಗಳಿಗೆ ಸೌಕರ್ಯ ಕಲ್ಪಿಸಲು ಆಗುವುದಿಲ್ಲ. ಅದ್ರಲ್ಲೂ ಅರಣ್ಯ ಕಾನೂನು ಸಮಸ್ಯೆ ಆಗುತ್ತದೆ. ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ಕೊಡುತ್ತೇವೆ ಎಂದು ಸಬೂಬು ಹೇಳುತ್ತಾರೆ ಡಿಸಿ. ಒಟ್ಟಿನಲ್ಲಿ ಪ್ರವಾಸೋದ್ಯಮ ಬೆಳೆಸ್ತೇವೆ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಪ್ರವಾಸಿಗರು ಸಾಕಷ್ಟು ಬೇಸರ ವ್ಯಕ್ತಪಡಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಪ್ರವಾಸಿ ಸ್ಥಳಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಪಡಿಸುವತ್ತ ಮುಂದಾಗುತ್ತಾ ಎಂಬುದನ್ನ ಕಾದು ನೋಡಬೇಕಾಗಿದೆ.

click me!