ದರೋಡೆ, ಸುಲಿಗೆ - ಮಲೆನಾಡ ಒಂಟಿ ಮನೆಗಳೇ ಟಾರ್ಗೆಟ್ : ಜೋಪಾನ!

By Kannadaprabha NewsFirst Published Mar 9, 2020, 12:01 PM IST
Highlights

ಮಲೆನಾಡಿನಲ್ಲಿ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಡಹಗಲೇ ಮನೆಗಳನ್ನು ದೋಚುತ್ತಿದ್ದಾರೆ. 

ಆರ್‌.ತಾರಾನಾಥ್‌

ಚಿಕ್ಕಮಗಳೂರು [ಮಾ.09] : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಂತ ಹಿಂದಿನ ಎರಡು ವರ್ಷಗಳ ಅಂಕಿಅಂಶಗಳು ಹೇಳುತ್ತಿವೆ.

ಕಳೆದೆರಡು ದಿನಗಳ ಹಿಂದೆ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಒಂಟಿ ಮನೆಯ ಮೇಲೆ ದರೋಡೆಕೋರರ ಗುಂಪೊಂದು ನುಗ್ಗಿ ಚಿನ್ನಾಭರಣ, ನಗದು ಕಳುವು ಮಾಡಿದೆ. ಇದರಿಂದ ಮಲೆನಾಡು ಮಾತ್ರವಲ್ಲ ಬಯಲುಸೀಮೆಯ ಜನರು ಆತಂಕಪಡುತ್ತಿದ್ದಾರೆ.

ಜಿಲ್ಲೆಯಲ್ಲಿ ದರೋಡೆ, ಸುಲಿಗೆ, ಮನೆಗಳ್ಳತನ, ವಾಹನಗಳ ಕಳ್ಳತನ ನಿಂತಿಲ್ಲ. ಕಳೆದ ವರ್ಷ ಅಂದರೆ 2019ರಲ್ಲಿ 39 ದರೋಡೆ ಪ್ರಕರಣಗಳು ನಡೆದಿದ್ದು, ಇದರಲ್ಲಿ 28,87,087 ರು. ದೋಚಿದ್ದಾರೆ. ಈ ಪೈಕಿ 7 ಪ್ರಕರಣಗಳನ್ನು ಪತ್ತೆಹಚ್ಚಿ 11,77,275 ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನು 31 ಪ್ರಕರಣಗಳ ತನಿಖೆ ನಡೆಯುತ್ತಿದೆ.

2018ರಲ್ಲಿ 12 ದರೋಡೆಯಾಗಿದ್ದು ಇದರಲ್ಲಿ 7 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿವೆ. ಪತ್ತೆಯಾಗಿರುವ 4 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ  ಚಾರ್ಜ್ಶೀಟ್ ಸಲ್ಲಿಸಲಾಗಿದೆ. 1,03,000 ರು. ವಶಕ್ಕೆ ತೆಗೆದುಕೊಳ್ಳಲಾಗಿದೆ.

4 ಸುಲಿಗೆ:  ದರೋಡೆಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಸುಲಿಗೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ 4 ಸುಲಿಗೆ ಪ್ರಕರಣಗಳು ನಡೆದಿವೆ. 3,52,000 ರು. ದೋಚಲಾಗಿತ್ತು. ಇದರಲ್ಲಿ 2 ಪ್ರಕರಣಗಳು ಪತ್ತೆ ಹಚ್ಚಿದ ಪೊಲೀಸರು 65 ಸಾವಿರ ರು. ವಶಕ್ಕೆ ತೆಗೆದುಕೊಂಡಿದ್ದು, ಇನ್ನು 6 ಪ್ರಕರಣಗಳ ತನಿಖೆ ನಡೆಯುತ್ತಿವೆ.

ಕಳವು ಪ್ರಕರಣ:  ಕಳೆದ ವರ್ಷ ಜಿಲ್ಲೆಯಲ್ಲಿ ವಾಹನ, ಮನೆಗಳ್ಳತನ ಸೇರಿದಂತೆ ಒಟ್ಟು 314 ಪ್ರಕರಣಗಳು ನಡೆದಿವೆ. 1,50,76,418 ರು. ಚಿನ್ನಾಭರಣ, ನಗದು ಕಳವಾಗಿವೆ. ಈ ಪೈಕಿ 248 ಪ್ರಕರಣಗಳು ತನಿಖೆ ನಡೆಸಲಾಗುತ್ತಿದೆ. 58 ಪ್ರಕರಣಗಳನ್ನು ಪತ್ತೆಹಚ್ಚಿ 80,50,239 ರು. ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ 101 ಮನೆಗಳ್ಳತನವಾಗಿದ್ದು, 14 ಪ್ರಕರಣಗಳು ಪತ್ತೆ ಹಚ್ಚಿ 45,93,413 ರು. ವಶಕ್ಕೆ ತೆಗೆದುಕೊಳ್ಳಲಾಗಿದೆ. 87 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ.

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ...

2018ರಲ್ಲಿ 204 ಪ್ರಕರಣಗಳು ನಡೆದಿದ್ದು, 61 ಪ್ರಕರಣಗಳ ತನಿಖೆ ನಡೆಯುತ್ತಿದ್ದು, 106 ಪ್ರಕರಣ ಪತ್ತೆ ಹಚ್ಚಲಾಗಿದೆ. ಕಳುವಾಗಿದ್ದ 1,28,06,484 ರು. ಪೈಕಿ 82,29,830 ರು. ವಶಕ್ಕೆ ತೆಗೆದುಕೊಳ್ಳಲಾಗಿದೆ. 2018ಕ್ಕೆ ಹೋಲಿಕೆ ಮಾಡಿದರೆ 2019ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಪ್ರೀ ಪ್ಲಾನ್‌ ದರೋಡೆ?

ಚಿಕ್ಕಮಗಳೂರು: ಗುಡ್ಡೆತೋಟ ಗ್ರಾಮದಲ್ಲಿ ನಡೆದ ದರೋಡೆಯ ಬಗ್ಗೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಪ್ಪ ತಾಲೂಕಿನ ಜಯಪುರ- ಬಸರೀಕಟ್ಟೆರಸ್ತೆಯ ಗುಡ್ಡೆತೋಟ ಗ್ರಾಮದ ವಿಜಯರಾಘವ ಅವರ ಮನೆಗೆ ಶುಕ್ರವಾರ ರಾತ್ರಿ ವೇಳೆಯಲ್ಲಿ 20 ಮಂದಿ ನುಗ್ಗಿ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಮನೆಗೆ ಹೋಗಲು ಒಳ್ಳೆಯ ದಾರಿ ಇದ್ದರೂ ಕಾಫಿ- ಅಡಕೆ ತೋಟದ ಮಧ್ಯದಲ್ಲಿ ಹಾದು ಹೋಗಿರುವ ಕೂಲಿ ಕಾರ್ಮಿಕರು ಓಡಾಡುವ ಕಾಲು ದಾರಿಯಲ್ಲಿ ದರೋಡೆಕೋರರು ಹೋಗಿದ್ದಾರೆ. ಮಲೆನಾಡಿನ ಕಾಲು ದಾರಿ ಹೊರಗಿನವರಿಗೆ ಗೊತ್ತಿರುವುದಿಲ್ಲ, ಈ ದಾರಿಯಲ್ಲಿ ಬಂದು ಹೋಗಿದ್ದವರಿಗೆ ಮಾತ್ರ ಗೊತ್ತಿರುತ್ತದೆ. ಅಂದರೆ, ದರೋಡೆ ನಡೆಸುವ ಮೊದಲು ಇಲ್ಲಿಗೆ ಬಂದು ಹೋಗಿರುವ ಶಂಕೆ ಪೊಲೀಸ್‌ ಇಲಾಖೆ ವ್ಯಕ್ತಪಡಿಸಿದೆ.

click me!