ಆಹಾ! ಎಂಥ ಅಭಿವೃದ್ಧಿನಪ್ಪ ಇದು! ನಿರ್ಮಾಣ ಮಾಡಿ ತಿಂಗಳೊಳಗೆ ಕಿತ್ತುಹೋದ ರಸ್ತೆ

By Kannadaprabha NewsFirst Published Jan 2, 2023, 1:53 PM IST
Highlights

ಖಾನಾಪುರ ಪಟ್ಟಣದ ಹೊರವಲಯದಲ್ಲಿ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಅಭಿವೃದ್ಧಿಗೊಂಡ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯ ಮೇಲ್ಪದರು ಕಿತ್ತುಹೋಗಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯ ನಟ್ಟನಡುವೆ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣಗೊಂಡು ಸುಗಮ ಸಂಚಾರಕ್ಕೆ ಸಮಸ್ಯೆ ತಂದಿಟ್ಟಿವೆ.

ಖಾನಾಪುರ (ಜ.2) : ಖಾನಾಪುರ ಪಟ್ಟಣದ ಹೊರವಲಯದಲ್ಲಿ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಅಭಿವೃದ್ಧಿಗೊಂಡ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯ ಮೇಲ್ಪದರು ಕಿತ್ತುಹೋಗಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯ ನಟ್ಟನಡುವೆ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣಗೊಂಡು ಸುಗಮ ಸಂಚಾರಕ್ಕೆ ಸಮಸ್ಯೆ ತಂದಿಟ್ಟಿವೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(State Highway Development Scheme)ಯಡಿ ಲೋಕೋಪಯೋಗಿ ಇಲಾಖೆ(Department of Public Works) ದಾಖಲೆಗಳ ಪ್ರಕಾರ ರಾಜ್ಯ ಹೆದ್ದಾರಿ ಸಂಖ್ಯೆ 13ರ 188.60 ಕಿಲೋ ಮೀಟರ್‌ನಿಂದ 203.80 ಕಿಮೀವರೆಗೆ ಒಟ್ಟು 15.20 ಕಿಲೋ ಮೀಟರ್‌ ಅಂತರವನ್ನು .18.88 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಖಾನಾಪುರದ ಬಸವೇಶ್ವರ ವೃತ್ತದಿಂದ ಶುಭಂ ಗಾರ್ಡನ್‌ ಸಭಾಗೃಹದವರೆಗೆ ಒಟ್ಟು 2 ಕಿಮೀ ದೂರದ ರಸ್ತೆಯನ್ನು ಮರುನಿರ್ಮಿಸಲಾಗಿದೆ. ಉಳಿದ ಕಡೆಗಳಲ್ಲಿ ರಸ್ತೆಯ ಅಭಿವೃದ್ಧಿ ಕಾರ್ಯವೇ ನಡೆದಿಲ್ಲ. ಹೀಗಾಗಿ, .18.88 ಕೋಟಿ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿ ಕೆಲವೇ ತಿಂಗಳಲ್ಲಿ ಹಾಳಾಗಿರುವುದರ ಕಾರಣವೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ತಾಲೂಕಿನ ವಿಶ್ರಾಂತವಾಡಿ, ಬಾಚೋಳಿ, ರಾಮಗುರವಾಡಿ, ನಾಗುರ್ಡಾ, ತಾಲೂಕು ಕೇಂದ್ರದ ನಾಗರಿಕರು ಲೋಕೋಪಯೋಗಿ ಇಲಾಖೆಯ ಅ​ಧಿಕಾರಿಗಳನ್ನು ಆಗ್ರಹಿಸಿದ್ದಾರೆ.

BIG 3: ಸುವರ್ಣ ನ್ಯೂಸ್ ಫಲಶ್ರುತಿ: ಕೊಪ್ಪಳ ಜಿಲ್ಲೆಯಲ್ಲಿ ಹೊಸ ಗುಣಮಟ್ಟದ ರಸ್ತೆ ನಿರ್ಮಾಣ

ಗುತ್ತಿಗೆದಾರರು ಈ ರಸ್ತೆಯ ಕಾಮಗಾರಿಯನ್ನು ಅವಸರವಾಗಿ ಮಾಡಿದ್ದು ಅರ್ಧಂಬರ್ಧ ಕೆಲಸವನ್ನು ಮಾತ್ರ ಮಾಡಿದ್ದಾರೆ. 15 ಕಿಮೀ ಅಂತರದ ರಸ್ತೆ ಕಾಮಗಾರಿ ನಡೆದಿಲ್ಲ. ಕೇವಲ 2 ಕಿಮೀ ಅಂತರದ ಕೆಲಸ ಮಾತ್ರ ಪೂರ್ಣಗೊಂಡಿದೆ. ಅದರಲ್ಲೂ ಈ ರಸ್ತೆಯಲ್ಲಿ ನಾಲ್ಕೈದು ಕಡೆಗಳಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿವೆ. ಈ ರಸ್ತೆಯ ಪೈಕಿ 8 ಕಿಮೀ ಅಂತರದ ರಸ್ತೆ ಇನ್ನೂ ಸಿಂಗಲ್‌ ರಸ್ತೆಯಾಗಿಯೇ ಇದೆ. ಖಾನಾಪುರ-ಜಾಂಬೋಟಿ ಮಾರ್ಗದಲ್ಲಿ ರಸ್ತೆಯ ಕೆಲಸ ನಡೆಯದೇ ಇರುವ ಸ್ಥಳಗಳಲ್ಲಿ ನಕಲಿ ಬಿಲ್‌ ಸೃಷ್ಟಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿ​ಕಾರಿಗಳು ದೃಢೀಕರಿಸಿ ಗುತ್ತಿಗೆದಾರರ ಬಿಲ್‌ ಪಾವತಿಸಿದ್ದಾರೆ. ತಾಲೂಕಿನ ಜನಪ್ರತಿನಿಧಿ​ಗಳು ಮತ್ತು ಅ​ಧಿಕಾರಿಗಳು ಈ ರಸ್ತೆ ಕಾಮಗಾರಿಯತ್ತ ನಿರ್ಲಕ್ಷ್ಯ ವಹಿಸಿದ್ದರಿಂದ ಇದೊಂದು ಕಳಪೆ ಕಾಮಗಾರಿ ಆಗಿದ್ದು, ಈ ಕಾಮಗಾರಿ ಬಗ್ಗೆ ಇಲಾಖೆಯ ಕಾರ್ಯಪಾಲಕ ಅಭಿಯಂತರು ಮತ್ತು ಲೋಕಾಯುಕ್ತರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ ಎಇಇ ರಾಜೇಂದ್ರ ಹೊನಕಾಂಡೆ, ನಾನು ಪ್ರಸ್ತುತ ಅಧಿವೇಶನ ಕಾರ್ಯ ನಿಮಿತ್ತ ಬೆಳಗಾವಿಯಲ್ಲಿ ಇದ್ದೇನೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸುತ್ತೇನೆ ಎಂದು ತಿಳಿಸಿದ್ದಾರೆ.

Ballari News: ಅರೆಬರೆ ರಸ್ತೆ ಅಗಲೀಕರಣ ರೊಚ್ಚಿಗೆದ್ದ ಗ್ರಾಮಸ್ಥರು

ಈ ರಸ್ತೆ ಗುಣಮಟ್ಟತೀರ ಕಳಪೆಯಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದು ಪ್ರಯಾಣಿಕರು, ಚಾಲಕರು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಈ ಅಪಾಯಕಾರಿ ರಸ್ತೆಯಲ್ಲಿ ಸ್ವಲ್ಪ ಯಾಮಾರಿದರೂ ಅವಘಡ ಕಟ್ಟಿಟ್ಟಬುತ್ತಿ ಎಂಬಂತಾಗಿರುವುದರಿಂದ ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಿದೆ. ಅದರಲ್ಲೂ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಂಡು ರಸ್ತೆಯನ್ನು ಸಮರ್ಪಕವಾಗಿ ನಿರ್ಮಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಜನಪ್ರತಿನಿಧಿಗಳು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.

- ವಿನಾಯಕ ಮುತಗೇಕರ, ನೀಲಾವಡೆ ನಿವಾಸಿ

click me!