SSLC ಮೌಲ್ಯಮಾಪನ ಕೇಂದ್ರದಲ್ಲಿ ಹಠಾತ್ತನೇ ಕುಸಿದು ಬಿದ್ದು ಶಿಕ್ಷಕ ಸಾವು

By Suvarna NewsFirst Published Jul 15, 2020, 7:43 PM IST
Highlights

ಎಸ್‌ಎಸ್‌ಎಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ಕೇಂದ್ರದಲ್ಲಿಯೇ ಹಠಾತ್ತನೇ ಕುಸಿದು ಮೃತಪಟ್ಟಿದ್ದಾರೆ.

ಶಿವಮೊಗ್ಗ, (ಜುಲೈ.15): ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕರೊಬ್ಬರು ಹಠಾತ್ತನೇ ಕುಸಿದು ಬಿದ್ದು ಸಾವನಪ್ಪಿರುವ ಘಟನೆ ಇಂದು (ಬುಧವಾರ) ಶಿವಮೊಗ್ಗದಲ್ಲಿ ನಡೆದಿದೆ.

ಕುಮಾರ್ (48 ವರ್ಷ) ಮೃತಪಟ್ಟ ಶಿಕ್ಷಕರು. ಇವರು ಭದ್ರಾವತಿ ಪಟ್ಟಣದ ಜನ್ನಾಪುರ ಬಡಾವಣೆಯಲ್ಲಿರುವ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯ ಈಶ್ವರಪ್ಪ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಯಾಂಡಲ್‌ವುಡ್‌ಗೆ ಕೊರೋನಾಘಾತ: ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ: ಜು. 15ರ ಟಾಪ್ 10 ಸುದ್ದಿ!

ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ಕುಮಾರ್, ಬುಧವಾರ ಎನ್.ಇ.ಎಸ್. ಕಾಲೇಜಿನಲ್ಲಿ ನಡೆಸಲಾಗುತ್ತಿದ್ದ ಸಮಾಜ ವಿಜ್ಞಾನ ವಿಷಯದ ಪತ್ರಿಕೆಗಳ ಮೌಲ್ಯಮಾಪನ ನಡೆಸುತ್ತಿದ್ದರು ಎನ್ನಲಾಗಿದೆ.

ಮಧ್ಯಾಹ್ನ ಊಟ ಮಾಡುವ ಸಲುವಾಗಿ ಶಿಕ್ಷಕರುಗಳೆಲ್ಲರು ಹೊರಡಲು ಸಿದ್ಧವಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಹಠಾತ್ತನೆ ಕುಸಿದು ಬಿದ್ದ ಕುಮಾರ್ ಅವರನ್ನು ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆಯ ಕುಮಾರ್ ಮೃತಪಟ್ಟಿದ್ದಾರೆ.

click me!