ಹೆದ್ದಾರಿಯಲ್ಲಿ ಎಸೆದವರಿಂದಲೇ ಕಸ ಹೆಕ್ಕಿಸಿದ ‘ಸ್ವಚ್ಛ ಸುಳ್ಯ’ ತಂಡ!

By Kannadaprabha NewsFirst Published Sep 6, 2019, 10:58 AM IST
Highlights

ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆಯಬಾರದೆಂದು ಎಷ್ಟೇ ಹೇಳಿದರೂ, ಎಷ್ಟೇ ಡಸ್ಟ್‌ಬಿನ್‌ಗಳನ್ನಿರಿಸಿದರೂ ಜನ ಅದನ್ನು ಬಳಸುವುದು ವಿರಳ. ಹೆದ್ದಾರಿಯಲ್ಲಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ಮೇಲೆ ನಿಗಾ ಇರಿಸಿ ಎಸೆದವರಿಂದಲೇ ಕಸ ಹೆಕ್ಕಿಸಲಾಗಿದೆ.

ಮಂಗಳೂರು(ಸೆ.06): ರಾಜ್ಯ ಹೆದ್ದಾರಿಯಲ್ಲಿ ಕಸ ಹಾಕಿದವರಿಂದಲೇ ಕಸ ಹೆಕ್ಕಿಸುವ ಕಾರ್ಯವನ್ನು ಸ್ವಚ್ಛ ಸುಳ್ಯ ತಂಡ ಮಾಡಿದೆ. ಸುಳ್ಯದಲ್ಲಿ ಸ್ವಚ್ಚತಾ ಜಾಗೃತಿ ಅಭಿಯಾನ ಇನ್ನಿತರ ಕಾರ್ಯಕ್ರಮದ ಮೂಲಕ ಸುಳ್ಯ ತಹಸೀಲ್ದಾರ್‌ ಕುಂಞಿಅಹ್ಮದ್‌ ನೇತೃತ್ವದ ವಾಟ್ಸಪ್‌ ಗ್ರೂಪ್‌ ಸ್ವಚ್ಛತೆ ಕಾರ್ಯಕ್ರಮ ನಡೆಯುತ್ತಿದೆ.

ಸುಳ್ಯದಲ್ಲಿ ಹಲವಾರು ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ ಅದರ ಮುಖಾಂತರ ಕಸ ಎಸೆಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕೆಲಸವೂ ನಡೆದಿದೆ.

ಸೀಫುಡ್ ಪ್ರಿಯರಿಗೆ ಸಚಿವ ಕೋಟ ಶ್ರೀನಿವಾಸ್‌ ಸಿಹಿ ಸುದ್ದಿ..!

ಸ್ವಚ್ಛ ಸುಳ್ಯ ವಾಟ್ಸಪ್‌ ಗ್ರೂಪ್‌ನಲ್ಲಿ ಗ್ರೂಪ್‌ ಸದಸ್ಯ ಶರತ್‌ ಪರಿವಾರ್‌ ಅವರು, ಸುಳ್ಯ ಅರಂಬೂರು ರಸ್ತೆ ರಾತ್ರಿ ಹೊತ್ತಿನಲ್ಲಿ ಪ್ಲಾಸ್ಟಿಕ್‌ ಪ್ಲೇಟ್‌, ನೀರಿನ ಬಾಟಲ್‌, ಮಾಂಸ ತ್ಯಾಜ್ಯವನ್ನು ಎಸೆದಿದ್ದಾರೆ ಎಂದು ಪೋಟೋ ಸಮೇತ ಮೇಸೇಜ್‌ ಹಾಕಿದರು. ಈ ಕುರಿತು ಗುಂಪಿನಲ್ಲಿ ಚರ್ಚೆ ನಡೆಯಿತು.

ಕಸ ಎಸೆದವರನ್ನು ಪತ್ತೆ ಹಚ್ಚಿ ಕಸ ಹೆಕ್ಕಿಸಿದ್ರು:

ಅದನ್ನು ನೋಡಿದ ಸ್ವಚ್ಛ ಸುಳ್ಯ ತಂಡದ ನಾಯಕರಾದ ಲೋಕೇಶ್‌ ಗುಡ್ಡೆಮನೆ ಮತ್ತು ವಿನೋದ್‌ ಲಸ್ರಾದೋ ಯಾರು ತ್ಯಾಜ್ಯ ಹಾಕಿದ್ದಾರೆ ಎಂದು ಮಾಹಿತಿ ಸಂಗ್ರಹಿಸಿದರು. ಸುಳ್ಯದ ಎಲ್ಲಾ ಶಾಮಿಯಾನ ಅಂಗಡಿಗಳಲ್ಲಿ, ಮಟನ್‌ ಮತ್ತು ಚಿಕನ್‌ ಸ್ಟಾಲ್‌ಗಳಲ್ಲಿ, ಅಡುಗೆ ತಯಾರಕರಲ್ಲಿ, ಪ್ಲಾಸ್ಟಿಕ್‌ ಬಾಟಲ್‌ ನೀರು ವಿತರಕರಲ್ಲಿ ವಿಚಾರಿಸಿದರು. ಎಲ್ಲರ ಮಾಹಿತಿ ವಿಚಾರಿಸಿ ಕಸ ಎಸೆದವರನ್ನುಸಂಜೆ ವೇಳೆಗೆ ಪತ್ತೆ ಹಚ್ಚಿದರು.

ದಂಡ ವಿಧಿಸಲು ತಹಸೀಲ್ದಾರ್ ಸೂಚನೆ:

ಜಟ್ಟಿಪಳ್ಳ ಮಹಮ್ಮದ್‌ ಎಂಬವರ ಮನೆಯಲ್ಲಿದ್ದ ಕಾರ್ಯಕ್ರಮದ ಬಳಿಕ ತ್ಯಾಜ್ಯ ಚೀಲವನ್ನು ಅಟೋ ಚಾಲಕ ಯಾಸಿನ್‌ ಎಂಬವನಲ್ಲಿ 300 ರು. ನೀಡಿ ಎಸೆದು ಬರಲು ತಿಳಿಸಿದ್ದರು. ಅದನ್ನು ಆಟೋ ಚಾಲಕ ಯಾಸೀನ್‌ ಪರಿವಾರ ಕಾನ ಮುಖ್ಯ ರಸ್ತೆಯಲ್ಲಿ ಎಸೆದಿದ್ದ. ರಾತ್ರಿ ವೇಳೆ ಆಟೋ ಚಾಲಕನನ್ನು ಪತ್ತೆ ಹಚ್ಚಿ ಅವನಿಂದಲೇ ಕಸ ವಿಲೇವಾರಿ ಮಾಡಿಸಲಾಯಿತು. ಕಸ ಎಸೆದವರ ವಿರುದ್ಧ ದಂಡ ವಿಧಿಸಲು ನ.ಪಂ ಅಧಿಕಾರಿಗಳಿಗೆ ತಹಸೀಲ್ದಾರ್‌ ಸೂಚಿಸಿದ್ದಾರೆ.

click me!