ಸೀಫುಡ್ ಪ್ರಿಯರಿಗೆ ಸಚಿವ ಕೋಟ ಶ್ರೀನಿವಾಸ್‌ ಸಿಹಿ ಸುದ್ದಿ..!

By Kannadaprabha NewsFirst Published Sep 6, 2019, 10:42 AM IST
Highlights

ಸೀಫುಡ್ ಪ್ರಿಯರಿಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಿಹಿ ಸುದ್ದಿ ನೀಡಿದ್ದಾರೆ. ಅತ್ಯಂತ ಸ್ವಾದವುಳ್ಳ ಸೀ ಫೂಡ್ ಲಭ್ಯವಿರುವ ಮತ್ಸ್ಯ ಉಪಹಾರ ಮಂದಿರಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಮೂಲಕ ಕರಾವಳಿಯ ಮೀನಿನ ಖಾದ್ಯಗಳು ರಾಜ್ಯಾದ್ಯಂತ ಎಲ್ಲ ಜನರಿಗೆ ಲಭ್ಯವಾಗಲಿದೆ.

ಮಂಗಳೂರು(ಸೆ.06): ಮೀನುಗಾರಿಕಾ ಇಲಾಖೆಯ ‘ಮತ್ಸ್ಯ ದರ್ಶಿನಿ’ ಉಪಾಹಾರ ಮಂದಿರಗಳನ್ನು ರಾಜ್ಯದ ಎಲ್ಲ ಭಾಗಗಳಿಗೆ ವಿಸ್ತರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಮಂಗಳೂರಿನಲ್ಲಿ ಗುರುವಾರ ದ.ಕ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ್ದಾರೆ.

ಕರಾವಳಿಯ ಮೀನಿನ ಸ್ವಾದ ರಾಜ್ಯಾದ್ಯಂತ ವಿಸ್ತರಣೆ:

ಮೀನುಗಾರಿಕಾ ಇಲಾಖೆಯ ಮತ್ಸ್ಯ ದರ್ಶಿನಿ ಉಪಾಹಾರ ಮಂದಿರಗಳು ಪ್ರಸ್ತುತ ರಾಜ್ಯದ ಆಯ್ದ ನಗರಗಳಿಗೆ ಸೀಮಿತವಾಗಿದೆ. ಕರಾವಳಿಯ ಮೀನಿನ ಸ್ವಾದವನ್ನು ರಾಜ್ಯದ ಎಲ್ಲ ತಾಲೂಕುಗಳಿಗೆ ಒಯ್ಯಲಾಗುವುದು. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಮತ್ಸ್ಯ ದರ್ಶಿನಿ ಆರಂಭದೊಂದಿದೆ ಮೀನುಗಾರಿಕೆಯನ್ನು ಬೆಂಬಲಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೀನುಗಾರರ ಮೇಲೆ ಒತ್ತಡ ಹೇರದಂತಡ ಸೂಚನೆ:

ಮೀನುಗಾರ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊಂದಿರುವ 50,000 ರು. ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಮಧ್ಯೆ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿರುವುದು ತಿಳಿದು ಬಂದಿದೆ. ಸಾಲ ಮರು ಪಾವತಿಗೆ ಒತ್ತಡ ಹೇರದಂತೆ ನಬಾರ್ಡ್‌ ಅಧಿಕಾರಿಗಳ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.

48 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ : ಜಾಗೃತೆ

ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಗಳಿವೆ. ಮುಂದಿನ ದಿನಗಳಲ್ಲಿ ಆ ಕುರಿತಾಗಿ ಯೋಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದಿದ್ದಾರೆ.

ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಧ್ಯಕ್ಷ ಯಶಪಾಲ ಸುವರ್ಣ, ಉಪಾಧ್ಯಕ್ಷ ಪುರುಷೋತ್ತಮ ಅಮೀನ್‌, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್‌ಕುಮಾರ್‌, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುಶ್ಮಿತಾ ರಾವ್‌, ಗಣೇಶ್‌ ಕೆ, ಸಹಕಾರ ಇಲಾಖೆಯ ಉಪ ನಿಬಂಧಕರಾದ ಬಿ.ಕೆ.ಸಲೀಂ, ಪ್ರವೀಣ್‌ ನಾಯಕ್‌ ಇದ್ದರು.

ಹೆದ್ದಾರಿಯಲ್ಲಿ ಎಸೆದವರಿಂದಲೇ ಕಸ ಹೆಕ್ಕಿಸಿದ ‘ಸ್ವಚ್ಛ ಸುಳ್ಯ’ ತಂಡ!

ಈ ಸಂದರ್ಭ ಮೀನುಗಾರಿಕಾ ಸಚಿವರನ್ನು ಶಾಲು, ಹಾರ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಪದೋನ್ನತಿ ಹೊಂದಿ ಉಡುಪಿ ಜಿಲ್ಲಾ ಮೀನುಗಾರಿಕಾ ಉಪ ನಿರ್ದೇಶಕರಾಗಿ ವರ್ಗಾವಣೆಗೊಂಡ ಗಣೇಶ ಅವರನ್ನು ಮಹಾ ಮಂಡಲದ ವತಿಯಿಂದ ಗೌರವಿಸಲಾಯಿತು.

click me!