ಚಿರತೆ ಎದುರಿಸಿ ಇಬ್ಬರ ಜೀವ ರಕ್ಷಿಸಿದ ಸಾಹಸಿ ರಘುರಾಮ ಗೌಡ

By Kannadaprabha NewsFirst Published Jan 3, 2020, 2:28 PM IST
Highlights

ಮನೆಯೊಂದಕ್ಕೆ ಚಿರತೆ ನುಗ್ಗಿದೆ. ಅಲ್ಲಿ ಅತ್ತೆ, ಸೊಸೆ ಬಿಟ್ಟರೆ ಮತ್ಯಾರೂ ಇಲ್ಲ. ಹೊರಗಡೆ ಸೇರಿದ ಜನ ಸಾಗರಕ್ಕೆ ಮನೆಯೊಳಗಿರುವ ಆ ಎರಡು ಹೆಣ್ಣು ಜೀವಗಳಿಗೆ ಚಿರತೆ ಏನು ಮಾಡಿಬಿಡುತ್ತದೋ ಎನ್ನುವ ಆತಂಕ. ಇಂಥಾ ವೇಳೆಯಲ್ಲಿ
ಹೀರೋ ರೀತಿ ಬಂದು ಅತ್ತೆ, ಸೊಸೆಯನ್ನು ಸುರಕ್ಷಿತವಾಗಿ ಕಾಪಾಡಿ, ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟವರು ರಘುರಾಮ ಗೌಡ. ಅವರ ಈ ಸಾಹಸಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.

ತುಮಕೂರು [ಜ.03]:  ಕಳೆದ ವರ್ಷ 2018ರ ಇಂಥದ್ದೇ ಚಳಿಗಾಲದ ಮುಂಜಾನೆ. ದೇವರಾಯನದುರ್ಗ ಅರಣ್ಯದಿಂದ ರಿಂಗ್ ರಸ್ತೆ ಮೂಲಕ ಬಂದ ಚಿರತೆಯೊಂದು ನೇರವಾಗಿ ಹೋಗಿದ್ದು ತುಮಕೂರಿನ ಜಯನಗರದ ವಸತಿ ಪ್ರದೇಶಕ್ಕೆ. ಹೊತ್ತು ಮೂಡುವ ಸಮಯ, ಕೆಲವರು ಆಗ ತಾನೆ ಮೈ ಮುರಿದುಕೊಂಡು ಮೇಲೇಳುತ್ತಿದ್ದರೆ ಮತ್ತೆ ಕೆಲವರು ವಾಕಿಂಗ್‌ಗೆ ಹೋಗಲು ಸಿದ್ಧರಾಗಿ ನಿಂತಿದ್ದರು. ಇದೇ ವೇಳೆಯಲ್ಲಿ ತಂಗಾಳಿಯನ್ನು ಸೀಳಿಕೊಂಡು ಚಿರತೆ, ಚಿರತೆ, ಚಿರತೆ ಎನ್ನುವ ಕೂಗು ಬಂತು. 

ಕಾಡನ್ನು ಬಿಟ್ಟು ನಾಡಿಗೆ ಬಂದ ಚಿರತೆ ಇಲ್ಲಿನ ಜನರ ಕೂಗಾಡ ಕಂಡು ಗಾಬರಿಯಾಗಿ ಸೀದಾ ಪಕ್ಕದಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ನುಗ್ಗಿದೆ. ನೋಡ ನೋಡುತ್ತಿದ್ದಂತೆಯೇ ಜನರ ದಂಡು ಹೆಚ್ಚಾಗಿದೆ. ಇದರಿಂದ ಮತ್ತೂ ಗಾಬರಿಕೊಂಡ ಚಿರತೆ ಎಲ್ಲಿಗೆ ಹೋಗಬೇಕು
ಹೋಗಬೇಕು ಎಂದು ತಿಳಿಯದೇ ಸನಿಹದಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿದೆ.

ಅತ್ತೆ, ಸೊಸೆ ಮತ್ತು ಚಿರತೆ ಆಗಷ್ಟೇ ಮನೆಯ ಯಜಮಾನ ಬಾಗಿಲು ಓಪನ್ ಮಾಡಿ ಹಾಲು ತರಲು ಹೊರಗೆ ಹೊರಟಿದ್ದರು. ಅವರು ಅತ್ತ ಹೋಗಿದ್ದಕ್ಕೂ ಚಿರತೆ ಮನೆ ಒಳಕ್ಕೆ ನುಗ್ಗಿದ್ದಕ್ಕೂ ಸರಿಹೋಗಿತ್ತು. ಆ ಮನೆಯಲ್ಲಿ ಆಗ ಇದ್ದದ್ದು ಅತ್ತೆ, ಸೊಸೆ ಇಬ್ಬರೇ. ಸೊಸೆ 
ಬಚ್ಚಲು ಮನೆಯಲ್ಲಿ ಇದ್ದರೆ, ಅತ್ತೆ ಹಾಲ್‌ನಲ್ಲಿ ಇದ್ದರು. ವರಾಂಡಕ್ಕೆ ಚಿರತೆ ನುಗ್ಗಿದ್ದನ್ನು ಗಮನಿಸಿದ ಅತ್ತೆ ಗಾಬರಿಯಿಂದ ಬಚ್ಚಲು ಮನೆಗೆ ಓಡಿ ಹೋಗಿ ಬೋಲ್ಟ್ ಹಾಕಿಕೊಂಡರು. ಅಲ್ಲಿಗೆ ಚಿರತೆಯ ಬಾಯಿಯಿಂದ ಅತ್ತೆ, ಸೊಸೆ ಬಜಾವ್ ಆಗಿದ್ದರು. ಆದರೆ ಮನೆಯೊಳಗೆ ಸೇರಿದ್ದ ಚಿರತೆಯಿಂದ ಯಾವುದಾದರೂ ರೂಪದಲ್ಲಿ ತೊಂದರೆಯಾಗುವ ಸಾಧ್ಯತೆ ಇದ್ದೇ ಇತ್ತು. ಇತ್ತ ಜನರು ಚಿರತೆ ಮನೆಯೊಳಗೆ ನುಗ್ಗಿದ್ದನ್ನು ಗಮನಿಸಿ ಮತ್ತಷ್ಟು ಗಾಬರಿಗೊಂಡಿದ್ದರು. ಅಷ್ಟರಲ್ಲಾಗಲೇ ಸುದ್ದಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತಕ್ಕೆ ತಲುಪಿ, ಕಿವಿಯಿಂದ ಕಿವಿಗೆ ಜನರಿಗೂ ತಲುಪಿ ಸಾವಿರಾರು ಮಂದಿ ಚಿರತೆ ನುಗ್ಗಿದ ಮನೆ ಬಳಿ ಜಮಾಯಿಸಿದ್ದರು. ಇದಾದ ಮೇಲೆ ಶುರುವಾಗಿದ್ದು ರಘುರಾಮ್ ಅವರ ಸಾಹಸ.

ಸ್ಟೇರಿಂಗ್ ಕಟ್ ಆದ ಬಸ್ ನಿಲ್ಲಿಸಿ 40 ಮಂದಿ ಜೀವ ರಕ್ಷಿಸಿದ ತುಕಾರಾಮ...

20 ಚಿರತೆ ಹಿಡಿದಿದ್ದ ಸಾಹಸಿ ಮನೆಯಲ್ಲಿ ಇರುವ ಅತ್ತೆ, ಸೊಸೆಯನ್ನು ರಕ್ಷಿಸಬೇಕು, ಚಿರತೆಯನ್ನೂ ಸುರಕ್ಷಿತವಾಗಿ ಹಿಡಿದು ಕಾಡಿಗೆ ಮರಳಿಸಬೇಕು. ಗಾಬರಿಗೊಂಡಿರುವ ಸಾರ್ವಜನಿಕರಿಗೆ ಸಮಾಧಾನ ಹೇಳಬೇಕು. ಇಷ್ಟೆಲ್ಲಾ ಒತ್ತಡ ಇರುವ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ತಕ್ಷಣ ನೆನಪಿಗೆ ಬಂದದ್ದು, ವಾರ್ಕೋ ಸಂಸ್ಥೆಯ ರಘುರಾಮ್ ಗೌಡ. ಈ ಹಿಂದೆ 20ಕ್ಕೂ ಹೆಚ್ಚು ಚಿರತೆ ರೆಸ್ಕ್ಯೂ ಆಪರೇಷನ್‌ನಲ್ಲಿ ತೊಡಗಿಕೊಂಡಿದ್ದ ಮೂಲತಃ ಕೊರಟಗೆರೆಯವರಾದ ರಘುರಾಮ್ ಗೌಡ ಮತ್ತೊಂದು ಚಿರತೆ ರೆಸ್ಕ್ಯೂ ಆಪರೇಷನ್‌ಗೆ ಸಜ್ಜಾದರು. ಅವರ 20 ರೆಸ್ಯ್ಕೂ ಆಪರೇಷನ್‌ನಲ್ಲಿ ತುಮಕೂರಿನ ಜಯನಗರ ಚಿರತೆ ಆಪರೇಷನ್ ಅತ್ಯಂತ ಕಷ್ಟಕರದ್ದು. ಅದಕ್ಕೆ ಕಾರಣವೂ ಇತ್ತು ಮನೆಯ ಒಳಗೆ ಅತ್ತೆ ಮತ್ತು ಸೊಸೆಯನ್ನು ಮೊದಲು ರಕ್ಷಿಸಬೇಕು. ಬಳಿಕ ಚಿರತೆಯನ್ನು ಸೆರೆ ಹಿಡಿಯಬೇಕಾಗಿತ್ತು. ಎರಡು ಬೆಡ್ ರೂಂನ ಮನೆಯಲ್ಲಿ ಚಿರತೆ ಯಾವ ಜಾಗದಲ್ಲಿದೆ ಎಂಬುದನ್ನು ಪತ್ತೆ ಮಾಡುವುದು ಅವರಿಗೆ ಕಷ್ಟವಾಗಿತ್ತು.

ಸಿಲೆಂಡರ್‌ನ ಹಿಂದೆ ಅಡಗಿತ್ತು ಚೀತಾ
ಇನ್ನು ಮನೆಯಲ್ಲಿದ್ದದ್ದು ಅಡುಗೆ ಕೋಣೆ ಒಂದೇ. ಅಲ್ಲಿಗೆ ರಘುರಾಮ್ ಗೌಡ ನೇತೃತ್ವದಲ್ಲಿ ಐದು ಮಂದಿ ಅಡುಗೆ ಮನೆಗೆ ನುಗ್ಗಿದರು. ಆದರೂ ಚಿರತೆಯ ಪತ್ತೆಯಿಲ್ಲ. ತಕ್ಷಣ ದೊಡ್ಡ ಸದ್ದು ಬಂದಿತು. ನೋಡಿದರೆ ಗ್ಯಾಸ್ ಸಿಲಿಂಡರ್‌ನ ಹಿಂದೆ ಅಡಗಿ ಕೂತಿದ್ದ ಚಿರತೆ ಗುರ್ ಎಂದು ನುಗ್ಗಲು ಹವಣಿಸುತ್ತಿತ್ತು. ಅಷ್ಟರಲ್ಲಾಗಲೇ ಸಿದ್ಧಪಡಿಸಿದ್ದ ಅರವಳಿಕೆ ಗನ್‌ನಿಂದ ಚುಚ್ಚು ಮದ್ದನ್ನು ಹಾಕಿಯೇ ಬಿಟ್ಟರು ರಘುರಾಮ್. ಒಮ್ಮೆ ಜೋರಾಗಿ ಘರ್ಜಿಸಿ ಚಿರತೆ ಪ್ರಜ್ಞೆ ತಪ್ಪಿತು. ಕೂಡಲೇ ಹಗ್ಗದಿಂದ ಬಿಗಿದು ಖುದ್ದು ರಘುರಾಮ್ ಗೌಡರೇ ಚಿರತೆಯನ್ನು ಹೊತ್ತುಕೊಂಡು ಹೊರ ಬಂದರು. ಹೊರಗೆ ನಿಂತಿದ್ದ ನೂರಾರು ಮಂದಿಯ ಜೋರಾದ ಚಪ್ಪಾಳೆಯೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಬನ್ನೇರುಘಟ್ಟ ಹಾಗೂ ಹಾಸನದಿಂದ ಬಂದ ವೈದ್ಯಕೀಯ ತಂಡ ಚಿರತೆಯನ್ನು ವಶಕ್ಕೆ ಪಡೆಯುವ ಮೂಲಕ 12 ಗಂಟೆಗಳ ಸುದೀರ್ಘ ಆಪರೇಷನ್ ಮುಕ್ತಾಯವಾಯಿತು. 

ಹನ್ನೊಂದು ವರ್ಷದಿಂದ ಸಕ್ರಿಯ 

ಈಗಾಗಲೇ 20 ಚಿರತೆಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ರಘುರಾಮ್‌ಗೌಡರಿಗೆ ಜಯನಗರದ ಮನೆಯಲ್ಲಿ ಹೊಕ್ಕಿದ್ದ ಚಿರತೆಯನ್ನು ಸೆರೆ ಹಿಡಿಯುವುದು ಕಷ್ಟಕರವಾಗಿತ್ತಂತೆ. ಅರವಳಿಕೆ ಚುಚ್ಚು ಮದ್ದನ್ನು ಹಾಕುವುದು ತ್ರಾಸದಾಯಕವಾಗಿದ್ದರಿಂದ ನೇರವಾಗಿ ಚಿರತೆಯೊಂದಿಗೆ ಮುಖಾಮುಖಿ ಯಾಗಿ ಕಡೆಗೂ ಚಿರತೆ ಸೆರೆ ಹಿಡಿದಿದ್ದರು. ಕೊರಟಗೆರೆಯವರಾದ ರಘುರಾಮ್ ಗೌಡರ ತಂದೆ ನಿವೃತ್ತ ಉಪತಹಶೀಲ್ದಾರ್. ಇವರ ತಾಯಿ ನಿವೃತ್ತ ಶಿಕ್ಷಕಿ. ರಘುರಾಮ ಗೌಡರ ಈ ಸಾಹಸಗಳಿಗೆ ಪತ್ನಿಯ ಸಾಥ್ ಇದ್ದೇ ಇದೆ. ೧೯೮೮ರಲ್ಲಿ ಹುಟ್ಟಿದ ರಘುರಾಮ್ ಗೌಡ ಮೂಲತಃ ಇಂಜಿನಿಯರ್, ತುಮಕೂರಿನ ಎಸ್‌ಎಸ್‌ಐಟಿಯಲ್ಲಿ ಇಂಜಿನಿಯರ್ ಬಳಿಕ ಸಿಐಟಿಯಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ಸ್ವಂತ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಆರಂಭಿಸಿದ್ದಾರೆ.

ಓದುತ್ತಿರುವಾಗಲೇ ಕಾಡು ಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ರಘುರಾಮ್ ಗೌಡ 11 ವರ್ಷದಿಂದ ಈ  ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ. ನೇಪಾಳ ಹಿಮಾಲಯದಲ್ಲಿ ಕಸ್ತೂರಿ ಮೃಗಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದಾರೆ. ಇದಕ್ಕಾಗಿ ಎವರೆಸ್ಟ್ ಕ್ಯಾಂಪ್, ಗೋಕ್ಯೋರಿ, ಗೋಸೈಕೊಂಡ್, ಸರಸ್ವತಿ ಕೊಂಡ್ ಎಂಬ ಹಿಮಚ್ಛಾದ್ರಿ ಪ್ರದೇಶಗಳಲ್ಲಿ ಸುತ್ತಿ ಬಂದಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 395 ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗೆ ಕಾರ್ಯಾಚರಣೆ ಬಗ್ಗೆ ತರಬೇತಿ ನೀಡಿದ್ದಾರೆ. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಕಡಿಮೆ ಮಾಡುವ ಬಗ್ಗೆ ತರಬೇತಿ ಸಹ ನೀಡುತ್ತಿದ್ದಾರೆ. ಇಂಡಿಯನ್ ಸ್ನೇಕ್ ಆರ್ಗನೈಸೇಷನ್‌ಗೆ ಹೆಡ್ ಆಗಿರುವ ರಘುರಾಮ್ ಗೌಡ ಅವರಿಗೆ ಭಾರತ ಸ್ಕೌಟ್ ನಲ್ಲಿ ರಾಷ್ಟ್ರ ಮತ್ತು ರಾಜ್ಯ ಪುರಸ್ಕಾರವೂ ಸಿಕ್ಕಿದೆ. ಹಾವು, ಚಿರತೆಯಷ್ಟೆ ಅಲ್ಲದೇ ೧೩ ಕರಡಿಗಳನ್ನು ರೆಸ್ಕ್ಯೂ ಆಪರೇಷನ್ ಮೂಲಕ ಕಾಪಾಡಿದ್ದಾರೆ. ತುಮಕೂರಿನಲ್ಲಿ ಇವರ ವಾಸ 

click me!