ಶಿವಮೊಗ್ಗ ಸರ್ಕಾರಿ ವೈದ್ಯೆ ಡಾ.ಪ್ರತಿಮಾ ಸಸ್ಪೆಂಡ್; ಭ್ರೂಣ ಹತ್ಯೆಯ ಆರೋಪಿಗೆ ಶಿಕ್ಷೆ ಯಾವಾಗ?

Published : Feb 03, 2026, 06:37 PM IST
Govt Doctor Pratima suspended

ಸಾರಾಂಶ

ಸಾಗರದಲ್ಲಿನ ಕಾನೂನು ಬಾಹಿರ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುವರ್ಣ ನ್ಯೂಸ್‌ನ ನಿರಂತರ ವರದಿಯ ಫಲವಾಗಿ ಸರ್ಕಾರಿ ವೈದ್ಯೆ ಡಾ. ಪ್ರತಿಮಾ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ತನಿಖೆಯ ಹಿತದೃಷ್ಟಿಯಿಂದ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ.

ಶಿವಮೊಗ್ಗ (ಫೆ.03): ಜಿಲ್ಲೆಯ ಸಾಗರದಲ್ಲಿ ಸಂಚಲನ ಮೂಡಿಸಿದ್ದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುವರ್ಣ ನ್ಯೂಸ್‌ನ ನಿರಂತರ ವರದಿಗಾರಿಕೆಯ ಫಲವಾಗಿ ಕೊನೆಗೂ ಭ್ರಷ್ಟ ವೈದ್ಯೆಯ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ಭ್ರೂಣ ಹತ್ಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ವೈದ್ಯೆ ಡಾ. ಪ್ರತಿಮಾ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಎಫ್‌ಐಆರ್ 

ಕಳೆದ ಅಕ್ಟೋಬರ್ 25, 2025 ರಂದು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಘಟನೆ ನಡೆದು ತಿಂಗಳುಗಳೇ ಕಳೆದರೂ ಪ್ರಭಾವಿ ವೈದ್ಯೆಯ ಬಂಧನವಾಗದ ಹಿನ್ನೆಲೆಯಲ್ಲಿ ಹಾಗೂ ಇಲಾಖೆ ಮೌನ ವಹಿಸಿದ್ದರ ವಿರುದ್ಧ 'ಸುವರ್ಣ ನ್ಯೂಸ್' ವಿಸ್ತೃತ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು. "ವೈದ್ಯೆ ಪ್ರತಿಮಾ ಬಂಧನ ಯಾಕಾಗಿಲ್ಲ? ಆರೋಗ್ಯ ಇಲಾಖೆ ರಕ್ಷಣೆ ನೀಡುತ್ತಿದೆಯೇ?" ಎಂದು ಜನಸಾಮಾನ್ಯರ ಪರವಾಗಿ ಸುವರ್ಣ ನ್ಯೂಸ್ ಪ್ರಶ್ನಿಸಿತ್ತು. ಈ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಇಲಾಖೆ, ಆಯುಕ್ತರಿಗೆ ಶಿಫಾರಸ್ಸು ವರದಿ ಸಲ್ಲಿಸಿತ್ತು.

ಆಯುಕ್ತರಿಂದ ಕಠಿಣ ಆದೇಶ

ಸುವರ್ಣ ನ್ಯೂಸ್ ತಂದೊತ್ತ ಒತ್ತಡದ ಫಲವಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ ಅವರು ಡಾ. ಪ್ರತಿಮಾ ಅವರನ್ನು ಅಮಾನತ್ತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಘಟನೆ ನಡೆದ ದಿನದಿಂದಲೂ ತಲೆಮರೆಸಿಕೊಂಡಿದ್ದ ವೈದ್ಯೆ, ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಆದರೆ, ತನಿಖೆಯ ಹಿತದೃಷ್ಟಿಯಿಂದ ಅವರನ್ನು ಸೇವೆಯಿಂದ ದೂರ ಇಡಲಾಗಿದೆ.

ಬಳ್ಳಾರಿಗೆ ಸ್ಥಳಾಂತರ, ಕಟ್ಟುನಿಟ್ಟಿನ ಸೂಚನೆ

ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯಲು ಡಾ. ಪ್ರತಿಮಾ ಅವರನ್ನು ಬಳ್ಳಾರಿ ಜಿಲ್ಲೆಯ ಶಿರಗುಪ್ಪದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಪ್ರಕರಣವು ವೈದ್ಯಕೀಯ ವಲಯದಲ್ಲಿ ನೈತಿಕತೆ ಗಾಳಿಗೆ ತೂರಿ ನಡೆಯುತ್ತಿದ್ದ ದಂಧೆಯನ್ನು ಬಯಲು ಮಾಡಿದ್ದು, ಸುವರ್ಣ ನ್ಯೂಸ್‌ನ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ.

PREV
Read more Articles on
click me!

Recommended Stories

'ನನ್ನಪ್ಪ ಕ್ಲಬ್ ಮೆಂಬರ್, ನನ್ನನ್ನ ಒಳಗೆ ಬಿಡಿ'; ಗೇಟಿನ ಮುಂದೆ ಬೆತ್ತಲೆ ಪ್ರತಿಭಟನೆ ಮಾಡಿದ ವ್ಯಕ್ತಿ!
Astrologer Kamalakar Bhat Case: ಫೇಸ್‌ಬುಕ್‌ನಲ್ಲಿ ಸಿಗೋ ಹುಡುಗರ ಜೊತೆ ತಿರುಗ್ತಾ ಇದ್ಲು, ಆಮೇಲೆ ಗುರೂಜಿ ಜೊತೆ ಹೋದಳು!