ಸೂಲಗಿತ್ತಿ ನರಸಮ್ಮನವರ ಸಾಧನೆ ಶ್ಲಾಘನೀಯ: ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ

By Govindaraj SFirst Published Aug 28, 2022, 12:53 PM IST
Highlights

ಕುಗ್ರಾಮದಲ್ಲಿ ಹುಟ್ಟಿ, ತಮ್ಮ ಅಜ್ಜಿಯಿಂದ ಕಲಿತ ಸೂಲಿಗಿತ್ತಿ ಕೆಲಸವನ್ನು ಅತ್ಯಂತ ಕಾಯಕ ನಿಷ್ಠೆಯಿಂದ ಮಾಡಿ, ವೈದ್ಯಕೀಯ ಸೌಲಭ್ಯಗಳಿಲ್ಲದ ಕಾಲದಲ್ಲಿ ಸಾವಿರಾರು ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮನವರ ಸಾಧನೆ ಶ್ಲಾಘನೀಯ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಅಭಿಪ್ರಾಯಪಟ್ಟರು. 

ತುಮಕೂರು (ಆ.28): ಕುಗ್ರಾಮದಲ್ಲಿ ಹುಟ್ಟಿ, ತಮ್ಮ ಅಜ್ಜಿಯಿಂದ ಕಲಿತ ಸೂಲಿಗಿತ್ತಿ ಕೆಲಸವನ್ನು ಅತ್ಯಂತ ಕಾಯಕ ನಿಷ್ಠೆಯಿಂದ ಮಾಡಿ, ವೈದ್ಯಕೀಯ ಸೌಲಭ್ಯಗಳಿಲ್ಲದ ಕಾಲದಲ್ಲಿ ಸಾವಿರಾರು ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮನವರ ಸಾಧನೆ ಶ್ಲಾಘನೀಯ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಅಭಿಪ್ರಾಯಪಟ್ಟರು. ಅವರು ತುಮಕೂರಿನ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ವೈದ್ಯರತ್ನ ಪದ್ಮಶ್ರೀ ಡಾ.ಸೂಲಗಿತ್ತಿನ ನರಸಮ್ಮ ಕೇಂದ್ರದ ವತಿಯಿಂದ ನರಸಮ್ಮ ಅವರ 102 ನೇ ಜನ್ಮಜಯಂತಿ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆರಿಗೆಗೆ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಕಾಲದಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಇದ್ದ ಅನೇಕ ಸೂಲಗಿತ್ತಿಯನ್ನು ಸುಸೂತ್ರ ಹೆರಿಗೆಗಳನ್ನು ಮಾಡಿಸಿ, ತಮ್ಮ ಕೌಶಲ್ಯವನ್ನು ಮೆರೆದಿದ್ದಾರೆ. ಇದು ನಿಜಕ್ಕೂ ಪ್ರಶಂಸೆಗೆ ನಿಲುಕದ ಸಮಾಜ ಸೇವಾ ಕಾರ್ಯವಾಗಿದೆ. ಯಾವುದೇ ಕಾರ್ಯವನ್ನು ಶ್ರದ್ಧಾ, ಭಕ್ತಿಯಿಂದ ಮಾಡಿದರೆ ಗೌರವ ಸಿಗುತ್ತದೆ ಎಂಬುದಕ್ಕೆ ಸೂಲಿಗಿತ್ತಿ ನರಸಮ್ಮ ಅವರಿಗೆ ಸಂದಿರುವ ಪ್ರಶಸ್ತಿಗಳೇ ಸಾಕ್ಷಿಯಾಗಿವೆ ಎಂದರು. ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಸಾವಿರಾರು ಬಡ ಹೆಣ್ಣು ಮಕ್ಕಳ ಹೆರಿಗೆ ಮಾಡಿಸಿ, ಹೊಸ ಜೀವಗಳು ಮೈದಳೆಯುವಂತೆ ಮಾಡಿರುವ ಡಾ.ಸೂಲಿಗಿತ್ತಿ ನರಸಮ್ಮ ನವರ ಕಾರ್ಯ, ಆಧುನಿಕ ವಿಜ್ಞಾನಕ್ಕೆ ದೊಡ್ಡ ಸವಾಲಾಗಿದೆ. 

ಶಿಕ್ಷಣ ಉದ್ಯೋಗಕ್ಕೆ ಮಾತ್ರ ಸೀಮಿತವಾಗದಿರಲಿ: ಸಚಿವ ನಾಗೇಶ್‌

ಹೆರಿಗೆ ವಿಚಾರದಲ್ಲಿ ಇಂದು ಅತ್ಯಂತ ವೈಜ್ಞಾನಿಕ ಕಲೆಗಳು ಬಂದಿವೆ. ಇಂದು ಹೆರಿಗೆ ಮಾಡಿಸುವುದೇ ದೊಡ್ಡ ಕೆಲಸ ಎಂದು ಬಿಂಬಿಸಲಾಗುತ್ತಿದೆ ಎಂದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ತನಗಿಂತ ಪರರ ಬಗ್ಗೆ ಹೆಚ್ಚು ಚಿಂತಿಸುವ ಮನಸ್ಸು ಹಾಗಾಗಿ ತಾಯಿಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನವಿದೆ. ಕರ್ನಾಟಕದಲ್ಲಿ ದಲಿತರಿಗೆ ಒಂದು ಸ್ಥಾನ ಮಾನ ಸಿಗಬೇಕಾದರೆ ಬಾಬು ಜಗಜೀವನ್‌ರಾವ್‌ ಹೆಸರಿನಲ್ಲಿ ಮೆಡಿಕಲ್‌ ಕಾಲೇಜು ಮತ್ತು ಡಾ.ಸೂಲಗಿತ್ತಿ ನರಸಮ್ಮ ಹೆಸರಿನಲ್ಲಿ ದೊಡ್ಡ ವಿಶ್ವವಿದ್ಯಾಲಯದ ಸ್ಥಾಪಿಸಬೇಕೆಂಬ ಇಚ್ಚೆಯನ್ನು ಜೆಡಿಎಸ್‌ ಹೊಂದಿದೆ ಎಂದರು.

ಎರಡು ಕಣ್ಣುಗಳಿದ್ದಂತೆ: ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಚಿತ್ರದುರ್ಗದ ಮಾದಾರ ಚನ್ನಯ್ಯಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಾವಿರಾರು ಜೀವಗಳನ್ನು ಭೂಮಿಗೆ ಕರೆತಂದ ಡಾ.ಸೂಲಗಿತ್ತಿ ನರಸಮ್ಮ ಹಾಗೂ ನೂರಾರು ಮರಗಳನ್ನು ನೆಟ್ಟು ಹಸಿರೇ ಉಸಿರು ಎಂಬುದನ್ನು ಸಾಬೀತು ಪಡಿಸಿದ ಪದ್ಮಶ್ರೀ ಡಾ.ಸಾಲಮರದ ತಿಮ್ಮಕ್ಕ ನಮ್ಮ ಎರಡು ಸಮುದಾಯಗಳ ಕಣ್ಣುಗಳಿದ್ದಂತೆ. ಇವರು ನಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು.

ಮುನಿಯಪ್ಪನವರಿಗೆ ನೋವಾಗಿದೆ: ದಕ್ಷಿಣ ಭಾರತದ ಬಾಬು ಜಗಜೀವನ್‌ ರಾಂ ಎಂದೇ ಖ್ಯಾತರಾಗಿರುವ, ಸತತ ಏಳು ಬಾರಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದ ಕೆ.ಹೆಚ್‌.ಮುನಿಯಪ್ಪ ಅವರ ಮನಸ್ಸಿಗೆ ನೋವುಂಟಾಗುವಂತೆ ಕಾಂಗ್ರೆಸ್‌ ಪಕ್ಷ ನಡೆದುಕೊಂಡಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಗಮನಹರಿಸಬೇಕಾಗಿದೆ. ಎಂತಹ ಪರಿಸ್ಥಿತಿಯಲ್ಲಿಯೂ ಅವರು ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ಇದನ್ನು ಪ್ರತಿಯೊಬ್ಬರು ಕಾಂಗ್ರೆಸ್‌ ಮುಖಂಡರು ಗಮನಿಸಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೈದ್ಯರತ್ನ ಡಾ.ಸೂಲಗಿತ್ತಿ ನರಸಮ್ಮ ಸೇವಾ ಕೇಂದ್ರದ ಅಧ್ಯಕ್ಷ ಪಾವಗಡ ಶ್ರೀರಾಮ್‌, ಇದು 102ನೇ ಜನ್ಮ ಜಯಂತಿಯಾಗಿದ್ದು ಮುಂದಿನ ದಿನಗಳಲ್ಲಿ ಸೇವಾ ಟ್ರಸ್ಟ್‌ ಮೂಲಕ ಒಂದು ವೃದ್ಧಾಶ್ರಮ ನಡೆಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂಲಿಗಿತಿ ನರಸಮ್ಮ ಸೇವಾ ಟ್ರಸ್ಟ್‌ಗೆ ನೀಡಿರುವ ಜಾಗದಲ್ಲಿ ಆದಷ್ಟು ಬೇಗ ಅವರ ಸ್ಮಾರಕ ನಿರ್ಮಿಸಲಿ ಎಂಬುದು ನಮ್ಮ ಬಯಕೆಯಾಗಿದೆ ಎಂದರು.

40ರಷ್ಟು ಕಮಿಷನ್‌ ಆರೋಪ ನ್ಯಾಯಾಂಗ ತನಿಖೆಯಾಗಲಿ: ಡಿಕೆಶಿ

ಇದೇ ವೇಳೆ 2021-22ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. 400 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಜಿತ್‌,ಗೀತಾ ಮತ್ತು ಪ್ರದೀಪ ಇವರುಗಳಿಗೆ ಕ್ರಮವಾಗಿ 5 ಸಾವಿರ, 3 ಸಾವಿರ ಮತ್ತು ಎರಡು ಸಾವಿರ ನಗದು ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್‌ ವಹಿಸಿದ್ದರು. ವೇದಿಕೆಯಲ್ಲಿ ಸಂಗಮಾನಂದಸ್ವಾಮೀಜಿ, ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ, ಶಾಸಕ ಜಿ.ಬಿ.ಜೋತಿಗಣೇಶ್‌,ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜನಪ್ಪ, ಪಾಲಿಕೆ ವಿರೋಧಪಕ್ಷದ ಕೆ.ಕುಮಾರ್‌, ಧನಿಯಕುಮಾರ್‌, ಶಿವಕುಮಾರ್‌, ಲಕ್ಷ್ಮಣದಾಸ್‌, ಪಾವಗಡಶ್ರೀರಾಮ್‌, ಗಣೇಶ್‌ ಇತರರಿದ್ದರು.

click me!