ಆಮ್‌ ಆದ್ಮಿ ಪಕ್ಷ ಅಭ್ಯರ್ಥಿದಿಂದ ವಕೀಲ ನಾಮಪತ್ರ ಸಲ್ಲಿಕೆ

Published : Apr 21, 2023, 07:22 AM IST
 ಆಮ್‌ ಆದ್ಮಿ ಪಕ್ಷ ಅಭ್ಯರ್ಥಿದಿಂದ ವಕೀಲ ನಾಮಪತ್ರ ಸಲ್ಲಿಕೆ

ಸಾರಾಂಶ

ಗ್ರಾಮಾಂತರ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ತಾಲೂಕಿನ ಹೆಬ್ಬೂರಿನವರಾದ ವಕೀಲ ದಿನೇಶ್‌ ಕುಮಾರ್‌ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಮುಖೇನ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

 ತುಮಕೂರು :  ಗ್ರಾಮಾಂತರ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ತಾಲೂಕಿನ ಹೆಬ್ಬೂರಿನವರಾದ ವಕೀಲ ದಿನೇಶ್‌ ಕುಮಾರ್‌ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಮುಖೇನ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ನಗರದ ಭದ್ರಮ್ಮ ವೃತ್ತದಿಂದ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಎಂ.ಜಿ ರಸ್ತೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತೆರಳಿದ ದಿನೇಶ್‌ ಕುಮಾರ್‌ ಅವರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಹೋಟೆಲ್‌ ಶಿವಪ್ಪ ಅವರಿಗೆ ತಮ್ಮ ಉಮೇದುವಾರಿಕೆ ದಾಖಲಿಸಿದರು. ಆಮ್‌ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್‌, ಜಿಲ್ಲಾಧ್ಯಕ್ಷ ಪ್ರೇಮಕುಮಾರ್‌, ಜಿಲ್ಲಾ ಕಾರ್ಯದರ್ಶಿ ಮಧುಸೂದನ್‌, ಮಹಿಳಾ ಘಟಕ ರೂಕ್ಸನಾ ಬಾನು, ರಾಜೇಶ್ವರಿ, ಪುರುಷೋತ್ತಮ್‌, ಭೀಮರಾಜು. ಬಿ.ಸಿ. ಗುರುಮೂರ್ತಿ. ಬಿ, ಬೆಳ್ಳಾವಿ ಸ್ವಾಮಿ, ನವೀನ್‌ ಬಳ್ಳಗೆರೆ, ನಗರ ಅಭ್ಯರ್ಥಿ ಮೊಹಮ್ಮದ್‌ ಗೌಸ್‌ ಪೀರ್‌, ರಘು ರಂಗನಾಥಪುರ ಮತ್ತಿತರರು ದಿನೇಶ್‌ಕುಮಾರ್‌ ನಾಮಪತ್ರ ಸಲ್ಲಿಕೆಗೆ ಸಾಥ್‌ ನೀಡಿದರು.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅಭ್ಯರ್ಥಿ ದಿನೇಶ್‌ಕುಮಾರ್‌, ಗ್ರಾಮಾಂತರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಗುರಿ. ದೆಹಲಿ, ಪಂಜಾಬ್‌ನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಅವುಗಳ ಮಾದರಿಯಲ್ಲೇ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಶಾಶ್ವತವಾಗಿ ರೈತರಿಗೆ ನೀರಾವರಿ, ವಿದ್ಯುತ್‌, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದಂತಹ ತರಬೇತಿಗಳು, ಸ್ವಯಂ ಉದ್ಯೋಗಕ್ಕೆ ಬೇಕಾದ ಮಾಹಿತಿ ಸೌಲಭ್ಯಗಳನ್ನು ಒದಗಿಸುವುದು, ಕುಂಠಿತಗೊಂಡ ಸೌಲಭ್ಯ ವಂಚಿತ ಜನರನ್ನು ಅಭಿವೃದ್ಧಿ ಮಾಡುವುದೇ ಮೂಲ ಗುರಿಯಾಗಿರಿಸಿಕೊಂಡು ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್‌ ಮಾತನಾಡಿ, ಗ್ರಾಮಾಂತರದ ಜನರಿಗೆ ಒಳ್ಳೆಯ ವ್ಯಕ್ತಿ ಸಿಕ್ಕಿದ್ದಾರೆ. ಅಂತಹವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಜನರ ಮೇಲಿದೆ. ಭ್ರಷ್ಟರಾಜಕೀಯ ತೊಲಗಿಸಿ ಸ್ಪಷ್ಟರಾಜಕೀಯ ಕೊಡುವುದೇ ಎಎಪಿಯ ಧ್ಯೇಯ ಉದ್ದೇಶ. ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ. ಹಾಗಾಗಿ ಗ್ರಾಮಾಂತರದಲ್ಲಿ ಈ ಬಾರಿ ದಿನೇಶ್‌ ಅವರು ಗೆದ್ದು ಬರಲಿ ಎಂದು ಆಶಿಸಿದರು.

ಕ್ಚೇತ್ರದಲ್ಲಿ ಸಂಚಲನ

  ಕೊರಟಗೆರೆ :  ಪಟ್ಟಣದ ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸುಮಾರು 200 ಜನ ಕಾರ್ಯಕರ್ತರು ಸೇರಿದ್ದು, ಮೊದಲ ಬಾರಿಗೆ ಆಮ್‌ ಆದ್ಮಿ ಪಾರ್ಟಿಯು ಕೊರಟಗೆರೆಯಲ್ಲಿ ಲಗ್ಗೆಯಿಟ್ಟು ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ.

ತುಮಕೂರು ಜಿಲ್ಲಾಧ್ಯಕ್ಷ ಪ್ರೇಮ್‌ ಕುಮಾರ್‌ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಮೊದಲನೇ ಕಾರ್ಯಕ್ರಮವಿದು. ಈ ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾರಣ ನಿವೃತ್ತ ತಹಶೀಲ್ದಾರ್‌ ಹನುಮಂತರಾಯಪ್ಪನವರು. ಇವರು ಇದೇ ತಾಲೂಕಿನ ಚನ್ನರಾಯನದುರ್ಗ ಹೋಬಳಿಯವರಾಗಿದ್ದು, ರಾಜ್ಯದ ನಾನಾ ಕಡೆಯ ತಾಲೂಕುಗಳಲ್ಲಿ ಜನಸಾಮಾನ್ಯರ ಜೊತೆ ಬೆರೆತು ಬಡವರಿಗೆ,ದಲಿತರಿಗೆ ನ್ಯಾಯ ದೊರಕಿಸಿ ಕೊಡುವಂತಹ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಇವರು ನಮ್ಮ ಪಕ್ಷ ಸಂಘಟನೆ ಮಾಡುತ್ತಿರುವುದು ನಮಗೆ ತೃಪ್ತಿಯನ್ನು ತಂದಿದೆ. ಆಮ್‌ ಆದ್ಮಿ ಪಕ್ಷವು ಹಲವು ರೀತಿಯ ಸಿದ್ಧಾಂತಗಳನ್ನು ಒಳಗೊಂಡಿದ್ದು, ಅವುಗಳೆಂದರೆ ನಾವು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದು, ಉತ್ತಮ ಶಾಲೆಗಳನ್ನು ನೀಡಿ ಒಳ್ಳೆಯ ವಿದ್ಯಾಭ್ಯಾಸವನ್ನು ಎಲ್ಲ ಮಕ್ಕಳಿಗೂ ನೀಡುವುದು ಮತ್ತು ಸುಸಜ್ಜಿತ ಆಸ್ಪತ್ರೆಗಳ ನಿರ್ಮಿಸಿ ಅತ್ಯುತ್ತಮ ಚಿಕಿತ್ಸೆ ನೀಡುವುದೇ ನಮ್ಮ ಪಕ್ಷದ ಧ್ಯೇಯ. ಆದ್ದರಿಂದ ಎಲ್ಲ ಮತದಾರರು ನಮ್ಮ ಪಕ್ಷವನ್ನು ಗುರುತಿಸಿ ಆಮ್‌ ಆದ್ಮಿ ಪಕ್ಷಕ್ಕೆ ಮತ ನೀಡಬೇಕೆಂದು ಎಂದು ವಿನಂತಿಸಿದರು.

ನಂತರ ಸಂಭಾವ್ಯ ಅಭ್ಯರ್ಥಿ ನಿವೃತ್ತ ತಹಸೀಲ್ದಾರ್‌ ಹನುಮಂತರಾಯಪ್ಪ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕೇಜ್ರಿವಾಲ್‌ ದೆಹಲಿ ರಾಜ್ಯದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸ ಮತ್ತು ಉತ್ತಮ ಆರೋಗ್ಯಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಒಳ್ಳೆಯ ಶಾಲೆಗೆ ಮಕ್ಕಳನ್ನು ಸೇರಿಸಿ ಉತ್ತಮ ಹುದ್ದೆಗಳಲ್ಲಿ ತಮ್ಮ ಮಕ್ಕಳನ್ನು ನೋಡಬೇಕೆಂಬುದು ಎಲ್ಲ ಪೋಷಕರ ಮಹಾದಾಸೆಯಾಗಿರುತ್ತದೆ. ಆದರೆ ಬಡತನದಿಂದ ಇವೆಲ್ಲ ನಶಿಸಿ ಹೋಗುತ್ತಿದೆ ಎಂದರು.

PREV
Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ