ಕೊರೋನಾ ಭೀತಿ: ಮಾಸ್ಕ್‌ ಧರಿಸಿ ಶಾಲೆಗೆ ಬಂದ ಮಕ್ಕಳು

By Kannadaprabha NewsFirst Published Mar 8, 2020, 10:28 AM IST
Highlights

ಕೊರೋನಾ ಆತಂಕ ಇಡೀ ವಿಶ್ವವನ್ನು ಆವರಿಸಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಸೋಂಕಿತ ವ್ಯಕ್ತಿ ಸಂಚರಿಸಿದ ಸುದ್ದಿ ಹರಡಿ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಕಡ್ಡಾಯವಾಗಿ ಮಾಸ್ಕ್‌ ಧಿರಿಸಿ ಶಾಲೆಗೆ ಹಾಜರಾಗುವಂತೆ ಆಡಳಿತ ಮಂಡಳಿವೊಂದು ಆದೇಶ ನೀಡಿದೆ.

ಚಿಕ್ಕಬಳ್ಳಾಪುರ(ಮಾ.08): ಕೊರೋನಾ ಆತಂಕ ಇಡೀ ವಿಶ್ವವನ್ನು ಆವರಿಸಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಸೋಂಕಿತ ವ್ಯಕ್ತಿ ಸಂಚರಿಸಿದ ಸುದ್ದಿ ಹರಡಿ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಕಡ್ಡಾಯವಾಗಿ ಮಾಸ್ಕ್‌ ಧಿರಿಸಿ ಶಾಲೆಗೆ ಹಾಜರಾಗುವಂತೆ ಆಡಳಿತ ಮಂಡಳಿವೊಂದು ಆದೇಶ ನೀಡಿದೆ.

ನಗರದ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವ ಜೊತೆಗೆ ಸ್ಯಾನಿಟೈಜರ್‌ನೊಂದಿಗೆ ಶಾಲೆಗೆ ಬರಲು ಸೂಚಿಸಿದೆ. ನಗರದ ಗುಡ್‌ಶೆಫರ್ಡ್‌ ಶಾಲಾ ಆಡಳಿತ ಮಂಡಳಿ ಈ ಸೂಚನೆ ನೀಡಿದ್ದು, ಶಾಲೆಯ ಬಹುತೇಕ ವಿದ್ಯಾರ್ಥಿಗಳು ಮುಖಕ್ಕೆ ಮಾಸ್ಕ್‌ ಧರಿಸುವ ಜೊತೆಗೆ ಸ್ಯಾನಿಟೈಜರ್‌ನೊಂದಿಗೆ ಶಾಲೆಗೆ ಆಗಮಿಸಿದ್ದಾರೆ.

ತನ್ನ ಹೆಸರು ಹೇಳದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ..!

1ರಿಂದ ತರಗತಿಯಿಂದ 10ನೇ ತರಗತಿಯವರೆಗಿನ ಈ ಶಾಲೆಯಲ್ಲಿ ಸುಮಾರು 480 ವಿದ್ಯಾರ್ಥಿಗಳಿದ್ದು, ಎಲ್ಲ ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವ ಜೊತೆಗೆ ಸ್ಯಾನಿಟರ್‌ನೊಂದಿಗೆ ಆಗಮಿಸಿದ್ದಾರೆ. ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ಕೈಗೊಂಡಿದ್ದು, ವಿದ್ಯಾರ್ಥಿಗಳು ಮನೆಗಿಂತ ಹೆಚ್ಚಿನ ಸಮಯ ಶಾಲೆಯಲ್ಲಿ ಕಳೆಯುವುದರಿಂದ ನಮ್ಮ ಮಕ್ಕಳಂತೆಯೇ ಆಗಿದ್ದಾರೆ. ಹಾಗಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎನ್ನುತ್ತಾರೆ ಶಿಕ್ಷಕಿ ವಿಜಯಲಕ್ಷ್ಮಿ.

ಆತಂಕದ ಅಗತ್ಯವಿಲ್ಲ:

ಇನ್ನು ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಅಲ್ಲದೆ ಸೋಂಕಿನ ಬಗ್ಗೆ ಜಿಲ್ಲೆಯಾದ್ಯಂತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ಆಸ್ಪತ್ರೆಗಳಲ್ಲಿಯೂ ಸೋಂಕಿತ ವ್ಯಕ್ತಿಗಳಿಗಾಗಿಯೇ ಪ್ರತ್ಯೇಕ ಕೋಣೆಗಳನ್ನು ಹಾಸಿಗೆ ಸಮೇತ ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಲ್ಲದೆ ಸರ್ಕಾರಿ ನೌಕರರಿಗೆ ಕೊರೋನಾ ಸೋಂಕು ದೃಢಪಟ್ಟಲ್ಲಿ 28 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಈಗಾಗಲೇ ಜಿಲ್ಲಾಡಳಿತ ಘೋಷಣೆ ಮಾಡಿದೆ. ಜಾಗೃತಿ ಜಾಥಾ, ಹೆಚ್ಚಿನ ಜನಸಂದಣಿ ಪ್ರದೇಶದಲ್ಲಿ ರೋಗ ಬರದಂತೆ ತಡೆಯುವ ಕುರಿತು ಅರಿವು ಕಾರ್ಯಕ್ರಮಗಳು, ಕರಪತ್ರಗಳ ವಿತರಣೆ ಸೇರಿದಂತೆ ಹಲವು ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.

ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಂಕಿತ ರೋಗಿಗೆ ಕೊರೋನಾ ಇಲ್ಲ

ಒಟ್ಟಿನಲ್ಲಿ ಕೊರೋನಾ ರೋಗ ಭೀತಿ ಜಿಲ್ಲೆಯಲ್ಲಿ ತೀವ್ರವಾಗಿದ್ದು, ಇದನ್ನು ನಿವಾರಿಸಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡರೂ ಸಾರ್ವಜನಿಕರಲ್ಲಿ ಬೇರೂರಿರುವ ಆತಂಕ ದೂರ ಮಾಡಲು ಇನ್ನೂ ಸಾಧ್ಯವಾಗದಿದ್ದು, ಇನ್ನಷ್ಟುಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಭೀತಿ ದೂರ ಮಾಡಬೇಕಾದ ಅಗತ್ಯವಿದೆ ಎನ್ನುತ್ತಾರೆ ಪ್ರಜ್ಞಾವಂತರು.

ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್‌, ಸ್ಯಾನಿಟೈಜರ್‌ ಬೇಡಿಕೆ ಹೆಚ್ಚು

ವಿದ್ಯಾರ್ಥಿಗಳಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ತರಲು ಶಾಲಾ ಆಡಳಿತ ಮಂಡಳಿ ಸೂಚಿಸಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಮೆಡಿಕಲ… ಶಾಪ್‌ಗಳಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ಗಳು ಖಾಲಿಯಾಗಿವೆ. ಎರಡು ದಿನದಿಂದ ದಿಢೀರ್‌ ಮಾÓ್ಕ… ಹಾಗೂ ಸ್ಯಾನಿಟೈಜರ್‌ಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಔಷಧ ಅಂಗಡಿಗಳ ಮಾಲಿಕರು.

ಪ್ರಮುಖವಾಗಿ ಈ ಶಾಲೆಯ ಮಕ್ಕಳು ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ಗಾಗಿ ಮೆಡಿಕಲ… ಶಾಪ್‌ಗಳಿಗೆ ಮುಗಿಬಿದ್ದಿದ್ದಾರೆ. ಬಹುತೇಕ ಮೆಡಿಕಲ… ಶಾಪ್‌ಗಳಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ಲಭ್ಯವಿಲ್ಲವಾಗಿದೆ. ಈವರೆಗೆ ಕೇವಲ 5 ರು. ಇದ್ದ ನಾರ್ಮಲ್‌ ಮಾಸ್ಕ್‌ನ್ನು ಕೆಲವರು 15ರಿಂದ 20 ರು.ಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಯಾನಿಟೈಜರ್‌ ಸಹ ಎಂಆರ್‌ಪಿಗಿಂತ 10 ರು. ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದ್ದು, ಮೆಡಿಕಲ್‌ ಶಾಪ್‌ ಮಾಲಿಕರೂ ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ಮಾಮೂಲಿಗಿಂತ ಹೆಚ್ಚಿಗೆ ಬೇಡಿಕೆ ಇಟ್ಟಿದ್ದು, ನೋ ಸ್ಟಾಕ್‌ ಎಂದು ಡಿಸ್ಟ್ರಿಬ್ಯೂಟರ್‌ಗಳಿಂದ ಪ್ರತ್ಯುತ್ತರ ಬರುತ್ತಿದೆ ಎನ್ನುತ್ತಾರೆ ಔಷಧಿ ವ್ಯಾಪಾರಿಗಳು.

ಹೆಚ್ಚಿನ ಬೆಲೆಗೆ ಮಾರಿದರೆ ಕ್ರಮ

ಇನ್ನು ಮಾಸ್ಕ್‌ ಸೇರಿದಂತೆ ಸ್ಯಾನಿಟೈಜರ್‌ಗಳನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದು, ಬೇಡಿಕೆಗೆ ಅನುಗುಣವಾಗಿ ವ್ಯಾಪಾರಿಗಳು ಲಾಭ ಗಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

-ಎಲ್‌.ಅಶ್ವತ್ಥನಾರಾಯಣ

click me!