ಇನ್ನೂ ಅನ್ನಭಾಗ್ಯದ ದುಡ್ಡು ಬಂದಿಲ್ವಾ?: ಈ ಕೆಲಸ ಮಾಡಿಸದಿದ್ದರೆ ಹಣ ಬರೋದೇ ಇಲ್ಲ..!

By Kannadaprabha NewsFirst Published Oct 19, 2023, 8:45 PM IST
Highlights

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವುದು ಸೇರಿದಂತೆ ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಈ ಬಗ್ಗೆ ಪಡಿತರ ಚೀಟಿದಾರರಿಗೆ ತಿಳಿ ಹೇಳುತ್ತಿದ್ದಾರೆ. ಕೆಲವರು ಬ್ಯಾಂಕ್‌ ಖಾತೆ ತೆರೆಯಲು, ಇ-ಕೆವೈಸಿ ಲಿಂಕ್‌ ಮಾಡಿಸಲು ನಿತ್ಯ ಬ್ಯಾಂಕ್‌ ಮತ್ತು ಇಂಟರ್ ನೆಟ್‌ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ.

ಎಂ.ಅಫ್ರೋಜ್ ಖಾನ್

ರಾಮನಗರ(ಅ.19):  ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಕುಟುಂಬಗಳ (ಬಿಪಿಎಲ್) ಪಡಿತರ ಚೀಟಿ ಹೊಂದಿರುವ ಅರ್ಹರ ಖಾತೆಗೆ ನಗದು ನೇರವಾಗಿ ಜಮೆ ಆಗುತ್ತಿದೆ. ಆದರೆ, ಇನ್ನೂ 18 ಸಾವಿರ ಪಡಿತರ ಚೀಟಿದಾರ ಕುಟುಂಬಗಳು ಧನಭಾಗ್ಯದಿಂದ ವಂಚಿತವಾಗಿವೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವುದು ಸೇರಿದಂತೆ ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಈ ಬಗ್ಗೆ ಪಡಿತರ ಚೀಟಿದಾರರಿಗೆ ತಿಳಿ ಹೇಳುತ್ತಿದ್ದಾರೆ. ಕೆಲವರು ಬ್ಯಾಂಕ್‌ ಖಾತೆ ತೆರೆಯಲು, ಇ-ಕೆವೈಸಿ ಲಿಂಕ್‌ ಮಾಡಿಸಲು ನಿತ್ಯ ಬ್ಯಾಂಕ್‌ ಮತ್ತು ಇಂಟರ್ ನೆಟ್‌ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ.

ರಾಜ್ಯ ಸರ್ಕಾರದಿಂದ 3 ಲಕ್ಷ ರೇಷನ್‌ ಕಾರ್ಡ್‌ ರದ್ದು, ನಿಮ್ಮ ಹೆಸರೂ ಇದೆನಾ ಈಗಲೇ ಚೆಕ್‌ ಮಾಡಿ!

ಚನ್ನಪಟ್ಟಣ ತಾಲೂಕಿನಲ್ಲಿ 4259, ಕನಕಪುರ ತಾಲೂಕಿನಲ್ಲಿ 5342, ಮಾಗಡಿ ತಾಲೂಕಿನಲ್ಲಿ 3681 ಹಾಗೂ ರಾಮನಗರ ತಾಲೂಕಿನಲ್ಲಿ 5250 ಸೇರಿದಂತೆ ಒಟ್ಟು 18532 ಎಎವೈ ಮತ್ತು ಬಿಪಿಎಲ್ ಪಡಿತರ ಕುಟುಂಬಗಳಿಗೆ ಸರ್ಕಾರದ ಪಡಿತರ ಹಣ ಸಿಗುತ್ತಿಲ್ಲ.

ಇ–ಕೆವೈಸಿ ಮಾಡಿಸದಿದ್ದರೆ ಹಣ ಇಲ್ಲ:

ಜಿಲ್ಲೆಯಲ್ಲಿ ಇಂದಿಗೂ ಸುಮಾರು 18 ಸಾವಿರ ಅನ್ನಭಾಗ್ಯ ಫಲಾನುಭವಿ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲ. ಖಾತೆ ಹೊಂದಿದ್ದರೂ ಆಧಾರ್ ಜೋಡಣೆ ಆಗಿಲ್ಲ. ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಸಾಧ್ಯವಾಗಿಲ್ಲ. ಫಲಾನುಭವಿಗಳಿಗೆ ಅನ್ನಭಾಗ್ಯದ ಹಣವನ್ನು ಡಿಬಿಟಿ ಮಾಡಲು ಆರಂಭಿಸಿದಾಗ 33 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರ ಕುಟುಂಬಗಳು ಇ–ಕೆವೈಸಿ ಮಾಡಿಸಿರಲಿಲ್ಲ. ಇದರಿಂದ ಇವರ ಖಾತೆಗಳಿಗೆ ಹಣ ಜಮೆ ಆಗಿರಲಿಲ್ಲ. ಹಂತ ಹಂತವಾಗಿ ಈ ಬಗ್ಗೆ ಪಡಿತರ ಚೀಟಿದಾರರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮನವರಿಕೆ ಮಾಡಿಕೊಟ್ಟ ನಂತರ ಇ–ಕೆವೈಸಿ ಪ್ರಕ್ರಿಯೆಗಳು ಹೆಚ್ಚಾದವು.

3 ತಿಂಗಳಲ್ಲಿ 40 ಕೋಟಿ ಬಿಡುಗಡೆ:

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅಂತ್ಯೋದಯ ಅನ್ನ ಯೋಜನೆ (11318 ಚೀಟಿ ) ಮತ್ತು ಆದ್ಯತಾ ಪಡಿತರ (225603ಚೀಟಿ) ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕ ಒಟ್ಟು 13 ಕೋಟಿ ರುಪಾಯಿಗಳು ಬಿಡುಗಡೆ ಆಗಿತ್ತು. ಆಗಸ್ಟ್‌ ತಿಂಗಳಲ್ಲಿ ಒಟ್ಟು 251047 ಪಡಿತರ ಕುಟುಂಬಗಳಿಗೆ 13.83 ಕೋಟಿ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ 258697 ಕುಟುಂಬಗಳಿಗೆ 14.12 ಕೋಟಿ ರುಪಾಯಿ ಡಿಬಿಟಿ ಆಗಿತ್ತು.

‘ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು. ಹೀಗೆ ಇ–ಕೆವೈಸಿ ಆಗದ ಫಲಾನುಭವಿಗಳಿಗೆ ಡಿಬಿಟಿ ಸಾಧ್ಯವಾಗುತ್ತಿಲ್ಲ. ಜುಲೈನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ 33 ಸಾವಿರ ಪಡಿತರ ಚೀಟಿದಾರರಿಗೆ ಡಿಬಿಟಿ ಸಾಧ್ಯವಾಗಿರಲಿಲ್ಲ. ಈಗ 18 ಸಾವಿರ ಇದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇ–ಕೆವೈಸಿ ಮಾಡಿಸಲು ಪರದಾಟ:

ಕಳೆದ ತಿಂಗಳು ಡಿಬಿಟಿ ಆಗಿದ್ದವರಲ್ಲಿ ಕೆಲ ಕಾರ್ಡ್‌ದಾರರ ಹಣ ವಾಪಸ್ ಬಂದಿದೆ. ಕುಟುಂಬದ ಮುಖ್ಯಸ್ಥರು ನಿಧನರಾಗಿದ್ದರೆ ಮತ್ತೊಂದು ಖಾತೆ ತೆರೆದಿದ್ದರೆ ಅಂತಹವರಿಗೆ ಹಣ ತಲುಪದೆ ವಾಪಸ್ ಬಂದಿದೆ. ಬ್ಯಾಂಕ್‌ಗಳಲ್ಲಿ ಜನ ದಟ್ಟಣೆಯ ಕಾರಣದಿಂದ ಖಾತೆ ಮಾಡಿಸಲು ಮತ್ತು ಇ–ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ಸಿದ್ದರಾಮಯ್ಯರವರ ಅನ್ನಭಾಗ್ಯ ಜನರಿಗೆ ಬದುಕು ನೀಡಿದೆ: ಸಚಿವ ಕೆ.ಎನ್.ರಾಜಣ್ಣ

ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲಿಯೂ ಖಾತೆ ಆರಂಭಿಸಬಹುದು. ಆ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಹಣ ಡಿಬಿಟಿ ಆಗುತ್ತದೆ. ಸುಮಾರು ಜನರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್‌ ತಿಂಗಳಲ್ಲಿ ಡಿಬಿಟಿಯಾದ ವಿವರ

ತಾಲೂಕು..
ಪಡಿತರ ಚೀಟ..
ಪಡಿತರ ಸದಸ್ಯರ..
ಡಿಬಿಟಿ ಹಣ (ರು.)
ಚನ್ನಪಟ್ಟಣ..
6161..
21125..
34823650
ಕನಕಪುರ..
8726..
28041..
46533250
ಮಾಗಡಿ..
4879..
16209..
26424290
ರಾಮನಗರ..
6101..
20242..
33427440
ಒಟ್ಟು..
25869..
85619..
141208630

click me!