ಕಾಂಗ್ರೆಸ್‌ನಿಂದ ಶೀಘ್ರ ರಾಜ್ಯಮಟ್ಟದ ಒಬಿಸಿ ಸಮಾವೇಶ: ಮಧು ಬಂಗಾರಪ್ಪ

By Govindaraj SFirst Published Jan 12, 2023, 1:00 AM IST
Highlights

ಹಿಂದುಳಿದ ವರ್ಗಗಳ ಜನರ ಆಶಾಕಿರಣವಾಗಿರುವದು ಕಾಂಗ್ರೆಸ್‌ ಮಾತ್ರ, ಬರುವ ಚುನಾವಣೆಗೂ ಮುನ್ನ ಈ ವರ್ಗಗಳ ಜನರನ್ನ ಒಗ್ಗೂಡಿಸಿ ಮಧ್ಯ ಕರ್ನಾಟಕ ಭಾಗದಲ್ಲಿ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಲು ಯೋಜಿಸಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
 

ಬೀದರ್‌ (ಜ.12): ಹಿಂದುಳಿದ ವರ್ಗಗಳ ಜನರ ಆಶಾಕಿರಣವಾಗಿರುವದು ಕಾಂಗ್ರೆಸ್‌ ಮಾತ್ರ, ಬರುವ ಚುನಾವಣೆಗೂ ಮುನ್ನ ಈ ವರ್ಗಗಳ ಜನರನ್ನ ಒಗ್ಗೂಡಿಸಿ ಮಧ್ಯ ಕರ್ನಾಟಕ ಭಾಗದಲ್ಲಿ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಲು ಯೋಜಿಸಲಾಗಿದೆ ಎಂದು ಕಾಂಗ್ರೆಸ್‌ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಪರಂಪರಾಗತವಾಗಿ ಕಾಂಗ್ರೆಸ್‌ಗೆ ಒಬಿಸಿ ಮತದಾರರ ಒಲವಿದೆ. ಇತ್ತೀಚಿಗೆ ಒಬಿಸಿ ನಾಯಕರು ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡು ಬೇರೆ ಬೇರೆ ಪಕ್ಷಗಳಲ್ಲಿ ಸೇರ್ಪಡೆಯಾಗಿರುವದರಿಂದ ಕೆಲ ಪ್ರಮಾಣದ ಮತದಾರರು ಹಂಚಿಹೋಗಿದ್ದಾರೆ. ಅವರನ್ನೆಲ್ಲ ಒಂದೇ ಕಡೆ ಸೇರಿಸುವ ಪ್ರಯತ್ನ ನಮ್ಮದಾಗಿದೆ ಎಂದರು.

ಒಟ್ಟು ಮತದಾರರ ಪೈಕಿ ಶೇ. 55ರಷ್ಟು ಒಬಿಸಿ ಮತದಾರರು ಇರುವದು, ಇವರನ್ನೆಲ್ಲ ಮತ್ತೇ ಕಾಂಗ್ರೆಸ್‌ ಬೆಂಬಲಕ್ಕೆ ಸೇರಿಸುವದಕ್ಕಾಗಿ ಆರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ಒಬಿಸಿ ಸಮಾವೇಶಗಳನ್ನು ಮಾಡಲಾಗುವುದು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಸೇರಿದಂತೆ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಬರುವ ಫೆಬ್ರವರಿ ಅಂತ್ಯದ ಒಳಗಾಗಿ ರಾಜ್ಯ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರಸ್ತೆ ಕಾಮಗಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಪ್ರತಿಭಟನೆಗೆ ಮಡ್ಡಿಕೆರೆ ಗ್ರಾಮಸ್ಥರು ಸಜ್ಜು

ಆಡಳಿತಾರೂಢ ಸರ್ಕಾರದ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಅವರದ್ದು ಕೆಟ್ಟರಾಜಕಾರಣ, ವ್ಯಾಪಾರೀಕರಣ ಬುದ್ದಿ. ನಾನು ಬಿಜೆಪಿಯಲ್ಲಿದ್ದಾಗ ಧಾರ್ಮಿಕ ಬಾವನೆಗಳನ್ನು ಕೆರಳಿಸುವಂಥ ಮಾತುಗಳನ್ನಾಡಿ ಜಿಹಾದ್‌ ಬಗ್ಗೆ ಮಾತನಾಡುವಂತೆ ಹೇಳುತ್ತಿದ್ದರು ಇದು ಸಮಾಜದ ಅಭಿವೃದ್ಧಿಗೆ ಮಾರಕ ಎಂದರು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಿಜೆಪಿ ಸಂಪೂರ್ಣ ಭಾಗಿಯಾಗಿರುವದು ಸರ್ಕಾರದ ವರ್ತನೆಯಿಂದ ಸ್ಪಷ್ಟವಾಗುತ್ತದೆ. ಮೊದಲು ಸ್ಯಾಂಟ್ರೋ ರವಿಯನ್ನು ಬಂಧಿಸಿ, ಅಕ್ರಮದಲ್ಲಿ ತೊಡಗಿರುವವರನ್ನೆಲ್ಲ ಕಂಬಿ ಎಣಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಬ್ರಿಟಿಷರಿದ್ದಂತೆ: ಬ್ರಿಟಿಷರಂತೆ ಬಿಜೆಪಿಯವರೂ ವ್ಯವಹಾರಕ್ಕಾಗಿ ದೇಶಕ್ಕೆ ಬಂದವರು, ಇವರನ್ನು ಬೆಂಬಲಿಸಿದ ಅಧಿಕಾರಕ್ಕೆ ತಂದಿರುವ ವಿಎಚ್‌ಪಿ ಹಾಗೂ ಆರ್‌ಎಸ್‌ಎಸ್‌ನವರು ತಮ್ಮ ಬೆತ್ತದಿಂದ ಬಿಜೆಪಿಯವರನ್ನೇ ಹೊಡೆಯುವ ಪರಿಸ್ಥಿತಿ ಬಂದಿದೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು. ಬಿಜೆಪಿ ಸರ್ಕಾರ ಈ ಹಿಂದೆ ದಿ. ಬಂಗಾರಪ್ಪ ಅವರ ಅವಧಿಯಿಂದ ಜಾರಿಗೆ ತಂದಿದ್ದ ಕೃಷಿ ಭೂಮಿಗೆ ಉಚಿತ ವಿದ್ಯುತ್‌, ಈ ಹಿಂದೆ ಕಾಂಗ್ರೆಸ್‌ ಜಾರಿಗೆ ತಂದಿದ್ದ ಆಶ್ರಯ, ಭಾಗ್ಯ ಜ್ಯೋತಿ ಯೋಜನೆಯನ್ನು ಇಂದಿನ ಬಿಜೆಪಿ ಸರ್ಕಾರ ಬಹುತೇಕ ನಿಲ್ಲಿಸಿದೆ. ಒಂದೂ ಮನೆಯನ್ನೂ ನೀಡಿಲ್ಲ. ನಮ್ಮ ಸರ್ಕಾರ ಬಂದಾಕ್ಷಣ ಇದೆಲ್ಲವನ್ನೂ ವಾಪಸ್‌ ಜಾರಿಗೆ ತರುವದು ನಮ್ಮ ಪ್ರಣಾಳಿಕೆಯ ಮೊದಲ ಆಧ್ಯತೆ ಆಗಿರಲಿದೆ ಎಂದರು.

ಪ್ರಧಾನಿ ಮೋದಿಗಾಗಿ ವಿಶೇಷ ಕಲಾಕೃತಿ ತಯಾರಿಸಿದ ಧಾರವಾಡದ ಯುವ ಕಲಾವಿದ

ಮೀಟರ್‌ ಕಿತ್ತೊಸೆಯುತ್ತೇವೆ: ಈಗಾಗಲೇ ರೈತನ ಕೃಷಿ ಭೂಮಿಯಲ್ಲಿ ಸರ್ಕಾರ ವಿದ್ಯುತ್‌ ಬಳಕೆಗೆ ಮೀಟರ್‌ ಅಳವಡಿಸಲು ಸಜ್ಜಾಗಿದೆ, ಒಂದು ಹೆಜ್ಜೆ ಮುಂದೆ ಹೋಗಿ ಸಿಮ್‌ ಕಾರ್ಡ್‌ ಮಾದರಿ ಮೀಟರ್‌ ಅಳವಡಿಸುವ ಯೋಜನೆಯನ್ನು ಈ ಬಿಜೆಪಿ ಜಾರಿಗೆ ತರುತ್ತಿದ್ದು, ಅಂಥದ್ದೇನಾದರೂ ಮಾಡಿದರೆ ಮೊದಲು ಆ ಮೀಟರ್‌ ಕಿತ್ತೊಸೆಯುವದೇ ಮಧು ಬಂಗಾರಪ್ಪ ಎಂದು ಸ್ಪಷ್ಟವಾಗಿ ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಮ್‌ಖಾನ್‌, ಮಾಜಿ ಶಾಸಕ ವಿಜಯಸಿಂಗ್‌, ಮುಖಂಡ ಚಂದ್ರಾಸಿಂಗ್‌, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರರೆಡ್ಡಿ ಚಿಟ್ಟಾ. ರಾಜ್ಯ ಉಪಾಧ್ಯಕ್ಷ ಎಸ್‌ಡಿ ವಾಘ್ಮಾರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಮೂಲಗೆ ಹಿರಿಯ ಪ್ರಧಾನ ಕಾರ್ಯದರ್ಶಿ ಎಂಎ ಸಮೀ ಇದ್ದರು.

click me!